ಸಾರಾಂಶ
ಸುಮಾರು ₹7.5 ಕೋಟಿ ವೆಚ್ಚದಲ್ಲಿ ಮರಿಯಮ್ಮನಹಳ್ಳಿ ಸೇರಿದಂತೆ ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ, ಕೊಟ್ಟೂರು ಸೇರಿದಂತೆ ಇತರೆ ಹೋಬಳಿ ಪಟ್ಟಣಗಳಲ್ಲಿ ವಿದ್ಯುತ್ ತಂತಿ ತೆಗೆದು ವಿದ್ಯುತ್ ಕೇಬಲ್ ಅಳಡಿಕೆ ಕಾರ್ಯ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಸುಮಾರು ₹7.5 ಕೋಟಿ ವೆಚ್ಚದಲ್ಲಿ ಮರಿಯಮ್ಮನಹಳ್ಳಿ ಸೇರಿದಂತೆ ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ, ಕೊಟ್ಟೂರು ಸೇರಿದಂತೆ ಇತರೆ ಹೋಬಳಿ ಪಟ್ಟಣಗಳಲ್ಲಿ ವಿದ್ಯುತ್ ತಂತಿ ತೆಗೆದು ವಿದ್ಯುತ್ ಕೇಬಲ್ ಅಳಡಿಕೆ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.ಪಟ್ಟಣದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಅನೇಕ ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್ ತಂತಿಗಳು ಈಗಾಗಲೇ ಶಿಥಿಲಗೊಂಡಿದ್ದು, ಈಗಾಗಲೇ ಕೆಲವು ಕಡೆ ತಂತಿ ಕಟ್ ಆಗಿ ಜೋಡಣೆಯಾಗಿವೆ. ಮಳೆಗಾಳಿಗೆ ಒಂದಕ್ಕೊಂದು ತಂತಿಗಳು ಜೋಡಣೆಯಾಗಿ ವಿದ್ಯುತ್ ಸಮಸ್ಯೆ ಉಂಟಾಗಬಹುದು. ಈ ಹಿನ್ನೆಲೆ ವಿದ್ಯುತ್ ಕಂಬಗಳಿಗೆ ತಂತಿ ಬಂದಲು ಕೇಬಲ್ ಅಳವಡಿಸುವ ಕೈಗೊಳ್ಳಲಾಗಿದೆ. ಮರಿಯಮ್ಮನಹಳ್ಳಿಯಲ್ಲಿ ಪಟ್ಟಣದಲ್ಲಿ ಈಗ 30 ಕಿಮೀ ಸುತ್ತಳತೆಯಲ್ಲಿ ಸುಮಾರು ₹70-80 ಲಕ್ಷ ವೆಚ್ಚದಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಮರಿಯಮ್ಮನಹಳ್ಳಿಯಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದು, ಅಗತ್ಯ ಇರುವ ಕಡೆ ವಿದ್ಯುತ್ ಟಿಸಿಗಳನ್ನು ಅಳವಡಿಸುವ ಕುರಿತು ಈಗಾಗಲೇ ಸರ್ವ ಮಾಡುವಂತೆ ಜೆಸ್ಕಾಂನವರಿಗೆ ಸೂಚಿಸಲಾಗಿದೆ. ವಿದ್ಯುತ್ ಕೇಬಲ್ ಜೊತೆಗೆ ಅಗತ್ಯ ಇರುವ ಕಡೆ ವಿದ್ಯುತ್ ಟಿಸಿಗಳನ್ನು ಅಳಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2 ವರ್ಷ 3 ತಿಂಗಳ ಅವಧಿಯಲ್ಲಿ ಸುಮಾರು 12 ಸಾವಿರ ವಿದ್ಯುತ್ ಕಂಬ ಬದಲಾಯಿಸಿ ಹೊಸ ವಿದ್ಯುತ್ ಕಂಬ ಅಳಡಿಸಲಾಗಿದೆ. ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತೆಗೆದು ಹೊಸ ಕಂಬ ಅಳವಡಿಸಲಾಗಿದೆ. ಕಂಬದ ಅಗತ್ಯ ಇರುವ ಪ್ರದೇಶದಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಹಾಕಿ ಸಾರ್ವಜನಿಕರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಜೆಸ್ಕಾಂನ ಅಧಿಕಾರಿಗಳಾದ ವಿಜಯಕುಮಾರ್, ವೆಂಕಟೇಶ್, ಸ್ಥಳಿಯ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.