ಸಾರಾಂಶ
ನಗರದ ವಿದ್ಯಾಗಣಪತಿ ಮಂಡಳಿಯಿಂದ ನಗರದ ರಥದ ಬೀದಿಯ ಗುರುನಂಜಶೆಟ್ಟರ ಛತ್ರದ ಮುಂಭಾಗ ೬೩ನೇ ವರ್ಷದ ರಾಕೆಟ್ ಬ್ರಹ್ಮೋಸ್ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ವಿದ್ಯಾಗಣಪತಿ ಮಂಡಳಿಯಿಂದ ನಗರದ ರಥದ ಬೀದಿಯ ಗುರುನಂಜಶೆಟ್ಟರ ಛತ್ರದ ಮುಂಭಾಗ ೬೩ನೇ ವರ್ಷದ ರಾಕೆಟ್ ಬ್ರಹ್ಮೋಸ್ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು.ನಗರದಲ್ಲಿ ೧೯೬೨ರಲ್ಲಿ ವಿದ್ಯಾಗಣಪತಿ ಮಂಡಳಿ ಸ್ಥಾಪನೆಯಾದ ನಂತರ ೬ ದಶಕದಲ್ಲಿ ಮಂಡಳಿಯಿಂದ ವೈವಿದ್ಯಮಯವಾದ ಗಣೇಶ ಮೂರ್ತಿಗೆ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ೬೩ನೇ ವರ್ಷದ ಅಂಗವಾಗಿ ಆಪರೇಷನ್ ಸಿಂದೂರ ಕಲ್ಪನೆಯಡಿ ಬ್ರಹ್ಮೋಸ್ ರಾಕೆಟ್ ಮೇಲೆ ಗಣಪತಿ ಕುಳಿತಿರುವ ಮೂರ್ತಿಯನ್ನು ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿಯೊಂದಿಗೆ ಗುರುವಾರ ಬೆಳಗ್ಗೆ ಪ್ರತಿಷ್ಠಾಪಿಸಲಾಯಿತು.
೮೫ ಅಡಿ ಎತ್ತರದ ರಾಕೆಟ್ ಬ್ರಹ್ಮೋಸ್ ಗಣಪತಿ ಬ್ರಹ್ಮೋಸ್ ಗಣಪತಿಯನ್ನು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹಲಗೋಡಿನ ಶಿಲ್ಪಿ ತಯಾರಿಸಿದ್ದಾರೆ. ಸೆ.೨೭ ರಂದು ಸಾಂಕೇತಿಕವಾಗಿ ಚಿಕ್ಕ ಗಣೇಶಮೂರ್ತಿ ಹಾಗೂ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗಿತ್ತು. ಇದೀಗ ದೊಡ್ಡ ಗಣಪತಿಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.ಬೆಳಗ್ಗೆ ೯ಕ್ಕೆ ನಗರದ ಸಂತೇಮರಹಳ್ಳಿ ರಸ್ತೆಯ ಆದಿಶಕ್ತಿ ದೇವಾಲಯದ ಮುಂಭಾಗ ಪ್ರತಿಷ್ಠಾಪನಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ವಾದ್ಯ ಗೋಷ್ಠಿಗಳೊಂದಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಯಿತು, ಗಣ್ಯರು, ವಿದ್ಯಾ ಗಣಪತಿ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ರಾಕೆಟ್ ಬ್ರಹ್ಮೋಸ್ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ವಿದ್ಯಾ ಗಣಪತಿಮಂಡಳಿ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಗುರುನಾಥ್, ಗೌರವ ಕಾರ್ಯದರ್ಶಿ ಮಾದಣ್ಣ, ಕಾರ್ಯಾಧ್ಯಕ್ಷ ಬುಲೆಟ್ ಚಂದ್ರು, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ, ಬಂಗಾರು, ಖಜಾಂಚಿ ಮನೋಜ್ಪಟೇಲ್, ಉಪಾಧ್ಯಕ್ಷ ಶಿವು ವಿರಾಟ್, ಕಿರಣ್ ಕೂಸಣ್ಣ, ರಮೇಶ್, ಪೃಥ್ವಿರಾಜ್, ಕಾರ್ಯದರ್ಶಿಗಳಾದ ಸಿ.ವಿ. ಮಣಿಕಂಠ ನವೀನ್, ಪ್ರವೀಣ್, ರಾಜೇಂದ್ರ, ಅಶ್ವಿನ್ ಪದಾಧಿಕಾರಿಗಳಾಳು, ಮುಖಂಡರಾದ ಬಾಲಸುಬ್ರಹ್ಮಣ್ಯಂ, ಸುದರ್ಶನಗೌಡ, ಶ್ರೀಕಂಠು, ಕೃಷ್ಣಪ್ಪ, ಸುರೇಶ್ನಾಯಕ, ಶಿವರಾಜ್ ಇತರರು ಭಾಗವಹಿಸಿದ್ದರು.