ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ಸ್ವಾಮೀಜಿಗಳ ಮೇಲೆ ದಾಖಲಾಗಿರುವ ಎಫ್ಐ ಆರ್ ಅನ್ನು ಪರಿಶೀಲಿಸಿ ವಾಪಸ್ ತೆಗೆಯಲು ಹೇಳಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳನ್ನು ಎಫ್ಐಆರ್ ನಲ್ಲಿ ಸೇರಿಸುವುದು ಬೇಡ ಎಂದು ಹೇಳಿದ್ದೇನೆ. ಸ್ವಾಮೀಜಿಗಳಿಗೆ ಗೌರವ ಕೊಡುವಂಥ ಕೆಲಸ ಮಾಡಬೇಕಾಗತ್ತದೆ ಎಂದರು.
ಸ್ವಾಮೀಜಿಗಳನ್ನು ಹೋರಾಟಕ್ಕೆ ಕರೆದಿದ್ದಾರೆ, ಅವರು ಹೋಗಿದ್ದಾರೆ. ಆದ್ದರಿಂದ ಅದನ್ನು ಪುನರ್ ಪರಿಶೀಲನೆ ಮಾಡಿ ಅಂತ ಎಸ್ಪಿಗೆ ತಿಳಿಸಿದ್ದೇನೆ ಎಂದರು.ಹೋರಾಟದಲ್ಲಿ ಸರ್ಕಾರಿ ಬಸ್ ಗೆ ಕಲ್ಲು ಹೊಡೆದವರು. ಸರ್ಕಾರಿ ವಾಹನಗಳ ಗಾಳಿ ಬಿಟ್ಟಿದ್ದರ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚಿಸಿದ್ದೇನೆ.
ಪೊಲೀಸರ ಬಳಿ ಸಿಸಿಟಿವಿ ದೃಶ್ಯವಳಿ ಇದೆ, ಪರಿಶೀಲಿಸಿ ಯಾರು ಕಾನೂನು ವಿರುದ್ಧ ನಡೆದುಕೊಂಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.ಆರ್ ಸಿಬಿ ವಿಜಯೋತ್ಸವದ ವೇಳೆ ಅಪಾಯದ ಮುನ್ನೆಚ್ಚರಿಕೆ ಸಂಬಂಧ ವಿಧಾನಸೌಧ ಡಿಸಿಪಿ ಪತ್ರ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್ ತನಿಖೆ ಪ್ರಾರಂಭವಾಗಿದೆ. ಆದ್ದರಿಂದ ನಾವು ಏನನ್ನೂ ಹೇಳಿಕೆ ಕೊಡುವುದು ಸರಿಕಾಣುವುದಿಲ್ಲ ಎಂದರು.
ಸ್ವಾಮೀಜಿಗಳಿಂದ ಸಿಎಂ, ಡಿಸಿಎಂ ಹಾಗೂ ಗೃಹಸಚಿವರ ವಿರುದ್ಧ ದೂರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ದೂರನ್ನು ಕೊಡಲಿ.ಕೊಡೋದಕ್ಕೆ ನಾವು ಬೇಡವೆಂದು ಹೇಳೋದಕ್ಕೆ ಆಗುತ್ತಾ ಎಂದರು.
ಹೇಮಾವತಿ ಕೆನಾಲ್ ವಿರೋಧಿಗಳ ಡೆಡ್ ಲೈನ್ ವಿಚಾರದ ಬಗ್ಗೆ ಮಾತನಾಡಿದ ಅವರು, ಸರ್ಕಾರ ಏನು ತೀರ್ಮಾನ ಮಾಡಿದೆಯೋ ಅದರ ಪ್ರಕಾರ ಕೆಲಸಗಳು ನಡೆಯುತ್ತವೆ. ಅವರು ಕೇಳಿರುವುದು ನಮಗೊಂದಿಷ್ಟು ಸಮಯಕೊಡಿ. ನಮ್ಮ ಜೊತೆ ಮಾತನಾಡಿ ಎಂದು. ಅದಕ್ಕೆ ನಾನು, ನೀರಾವರಿ ಸಚಿವರು, ಡಿಸಿಎಂಗೆ ಹೇಳಿದ್ದೇವೆ, ಡಿಸಿಎಂ ಸಮಯ ಕೊಟ್ಟ ಮೇಲೆ ಅವರ ಜೊತೆ ಕೂತು ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದರು.ಕೆನಾಲ್ ಲಿಂಕ್ ವಿಚಾರವಾಗಿ ನೀರಾವರಿ ಸಚಿವರು ತೆಗೆದುಕೊಳ್ಳುವಂಥ ತೀರ್ಮಾನ ಅಂತಿಮವಾಗಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಆಗಿರುತ್ತದೆ. ನಮ್ಮ ಜಿಲ್ಲೆಯ ರೈತರ ಮುಖಂಡರ ಜೊತೆ ಸಭೆ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡ್ತೀರಾ ಎಂದು ನೀರಾವರಿ ಸಚಿವರನ್ನೇ ಕೇಳಿದ್ದೇನೆ ಎಂದರು.