ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವ ಘಟನೆಯನ್ನು ಮುಖಂಡ ಪೃಥ್ವಿರಾಜ್ ಎಸ್. ತೀವ್ರವಾಗಿ ಖಂಡಿಸಿದ್ದಾರೆ.

ಬೀದರ್: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವ ಘಟನೆಯನ್ನು ಮುಖಂಡ ಪೃಥ್ವಿರಾಜ್ ಎಸ್. ತೀವ್ರವಾಗಿ ಖಂಡಿಸಿದ್ದಾರೆ. ಖರ್ಗೆ ಅವರು ರ್‍ಯಾಲಿ ನಡೆಸಿದ ಬಳಿಕ ಅದೇ ವೇದಿಕೆಯಲ್ಲಿ ಶುದ್ಧೀಕರಣ ಹೋಮ ನಡೆಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಹಾಗೂ ಅವಕಾಶ ನೀಡಲಾಗಿದೆ. ಆದರೆ, ಉತ್ತರಾಖಂಡದಲ್ಲಿ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಸ್ಥಳ ಶುದ್ಧೀಕರಣ ಮೂಲಕ ಖರ್ಗೆ ಅವರಿಗಷ್ಟೇ ಅಲ್ಲ; ಇಡೀ ದೇಶದ ದಲಿತರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಹಾಗೂ ಬಿಜೆಪಿ ಮುಖಂಡರು ಘಟನೆ ಬಗ್ಗೆ ದೇಶದ ಜನತೆಗೆ ಉತ್ತರ ನೀಡಬೇಕು. ಉತ್ತರಾಖಂಡದ ಮುಖ್ಯಮಂತ್ರಿ ಘಟನೆಯ ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸ್ಥಳ ಶುದ್ಧೀಕರಣ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

--ಚಿತ್ರ 14ಬಿಡಿಆರ್59ಪೃಥ್ವಿರಾಜ್ ಎಸ್.--