ಮೃತ ಮಹದೇವು 500 ರು. ನೀಡಿ ಅಪಘಾತ ವಿಮೆ ಮಾಡಿಸಿದ್ದರಿಂದ ಅವರ ಕುಟುಂಬಸ್ಥರಿಗೆ 10 ಲಕ್ಷ ರು. ಹಣ ಬಂದಿದೆ. ಪ್ರತಿ ವರ್ಷ ಕೇವಲ 500 ರು. ಹಣ ವಿಮೆ ಮಾಡಿಸುವುದರಿಂದ ಒಂದು ವೇಳೆ ಅಪಘಾತ ಸಂಭವಿಸಿ ಮೃತಪಟ್ಟರೆ ತಮ್ಮ ಕುಟುಂಬಸ್ಥರಿಗೆ 10 ಲಕ್ಷ ರು., 1 ಸಾವಿರ ರು. ವಿಮೆಗೆ 20 ಲಕ್ಷ ಹಾಗೂ 2 ಸಾವಿರ ರು. ವಿಮೆ ಪಾಲಿಸಿಗೆ 40 ಲಕ್ಷ ರು. ಹಣ ಸಿಗಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಎಸ್‌ಬಿಐ ಜೀವಾ ವಿಮೆ ಮಾಡಿಸಿದ್ದ ವ್ಯಕ್ತಿಗೆ ಬ್ಯಾಂಕ್‌ನಿಂದ ವಿಮೆ ಪಾಲಿಸಿ ಮೊತ್ತವಾಗಿ 10 ಲಕ್ಷ ರು. ಚೆಕ್‌ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ತಾಲೂಕಿನ ಕೂಡಲಕುಪ್ಪೆ ಗ್ರಾಮದ ಮಹದೇವು ಅವರು ಪಾಲಹಳ್ಳಿ ಎಸ್‌ಬಿಐ ಬ್ಯಾಂಕ್‌ನ ಎಟಿಎಂನಲ್ಲಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತಿದ್ದರು. ಇತ್ತೀಚೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆ ಅಪಘಾತದಿಂದ ಮೃತಪಟ್ಟಿದ್ದರು. ಈ ಹಿಂದೆ ಬ್ಯಾಂಕ್‌ನಲ್ಲಿ 500 ರು. ಹಣ ನೀಡಿ ಅಪಘಾತ ವಿಮೆ ಪಾಲಿಸಿ ಮಾಡಿಸಿದ್ದರಿಂದ ಅವರ ಕುಟುಂಬಕ್ಕೆ 10 ಲಕ್ಷ ರು. ಹಣ ದೊರೆತಿದೆ.

ಜಿಲ್ಲಾ ಮುಖ್ಯ ವ್ಯವಸ್ಥಾಪಕ ವೀರಭದ್ರ ಮಾತನಾಡಿ, ಮೃತ ಮಹದೇವು 500 ರು. ನೀಡಿ ಅಪಘಾತ ವಿಮೆ ಮಾಡಿಸಿದ್ದರಿಂದ ಅವರ ಕುಟುಂಬಸ್ಥರಿಗೆ 10 ಲಕ್ಷ ರು. ಹಣ ಬಂದಿದೆ. ಪ್ರತಿ ವರ್ಷ ಕೇವಲ 500 ರು. ಹಣ ವಿಮೆ ಮಾಡಿಸುವುದರಿಂದ ಒಂದು ವೇಳೆ ಅಪಘಾತ ಸಂಭವಿಸಿ ಮೃತಪಟ್ಟರೆ ತಮ್ಮ ಕುಟುಂಬಸ್ಥರಿಗೆ 10 ಲಕ್ಷ ರು., 1 ಸಾವಿರ ರು. ವಿಮೆಗೆ 20 ಲಕ್ಷ ಹಾಗೂ 2 ಸಾವಿರ ರು. ವಿಮೆ ಪಾಲಿಸಿಗೆ 40 ಲಕ್ಷ ರು. ಹಣ ಸಿಗಲಿದೆ.

ಈ ವ್ಯವಸ್ಥೆ ಕೇವಲ ನಮ್ಮ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಾತ್ರ ಲಭ್ಯವಿದ್ದು, ಪ್ರತಿಯೊಬ್ಬರೂ ಎಸ್‌ಬಿಐ ಬ್ಯಾಂಕ್‌ನ ಶಾಖೆಗಳಲ್ಲಿ ಖಾತೆ ತೆರೆದು ಇಂತಹ ಜೀವ ವಿಮಾ ಪಾಲಿಸಿ ಮಾಡಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಕುಟುಂಬಗಳಿಗೆ ತಮ್ಮ ಅನಿರೀಕ್ಷಿತ ಮರಣದ ನಂತರ ಇಂತಹ ಯೋಜನೆಗಳು ಆಸರೆಯಾಗಲಿದೆ ಎಂದರು.

ನಂತರ ಮೃತ ಮಹದೇವು ಅವರ ಪತ್ನಿ ಬೇಬಿ ಅವರಿಗೆ ವಿಮೆ ಮೊತ್ತವಾದ 10 ಲಕ್ಷ ರು. ಹಣದ ಚೆಕ್‌ ಹಸ್ತಾಂತರಿಸಿದರು.

ಈ ವೇಳೆ ಜಿಲ್ಲಾ ವ್ಯವಸ್ಥಾಪಕ ಬಾಲಸುಬ್ರಮಣಿ, ಶಾಖಾ ವ್ಯವಸ್ಥಾಪಕಿ ರಾಜೇಶ್ವರಿ, ಸತೀಶ್, ರಾಘವೇಂದ್ರ, ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ, ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ಹಾಜರಿದ್ದರು.