ಕನ್ನಡಪ್ರಭ ವಾರ್ತೆ ಮಾಗಡಿ
ಪತ್ರಕರ್ತರು ಸುದ್ದಿ ಹುಡುಕುವ ಭರದಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ಅತಿ ವೇಗವಾಗಿ ಬರುವುದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹಿನ್ನೆಲೆ ಎ.ಮಂಜು ಚಾರಿಟಬಲ್ ಟ್ರಸ್ಟ್ ವತಿಯಿಂದ ಪತ್ರಕರ್ತರಿಗೆ ಮತ್ತು ಅವರ ಕುಟುಂಬಕ್ಕೆ ಉಚಿತ ವಿಮೆ ಮಾಡಿಸಿಕೊಡಲು ಬದ್ಧನಾಗಿರುವೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಹೇಳಿದರು.ಪಟ್ಟಣದ ಬಾಲಾಜಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ತಮ್ಮ ಕುಟುಂಬಕ್ಕೆ ಮೊದಲು ನೀವು ರಕ್ಷಣೆ ಕೊಡಬೇಕು, ವಿಮೆ ಮಾಡಿಸಿಕೊಳ್ಳುವ ಮೂಲಕ ಭದ್ರತೆ ಇದ್ದಾಗ ತಾವು ಆತ್ಮವಿಶ್ವಾಸದಿಂದ ತಮ್ಮ ವೃತ್ತಿಯಲ್ಲಿ ತೊಡಗಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ ಉಚಿತವಾಗಿ ವಿಮೆ ಮಾಡಿಸಿ ಕೊಡಲಾಗುತ್ತದೆ. ತಾವು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಹಿಂದೆ ರಾಮನಗರದಲ್ಲಿ ಪತ್ರಕರ್ತ ರವಿರವರು ಅಪಘಾತದಲ್ಲಿ ಮೃತರಾದಾಗ ವಿಮೆಯಿದ್ದ ಕಾರಣ ಅವರಿಗೆ ₹11 ಲಕ್ಷ ಹಣ ವಿಮೆಯಿಂದ ಬಂದಿತ್ತು, ಯಾವ ರಾಜಕಾರಣಿ ಕೂಡ ₹11 ಲಕ್ಷ ಹಣ ಕೊಡಲು ಸಾಧ್ಯವಿಲ್ಲ. ತಾವು ಸಮಾಜದ ಅಂಕುಡೊಂಕುಗಳನ್ನು ಜನರಿಗೆ ತಿಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ಅಧಿಕಾರದಲ್ಲಿರುವ ನಾಯಕರು ಸರಿಯಾಗಿ ಕೆಲಸ ಮಾಡಿದಾಗ ಬೆಂಬಲಿಸಿ ಬೆನ್ನುತಟ್ಟಿ, ತಪ್ಪೆಸಗಿದಾಗ ದಬ್ಬಣದಂತೆ ಚುಚ್ಚಿ ಎಚ್ಚರಿಸಿ ಎಂದು ಹೇಳಿದರು.ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ ಮೂಲಕ ತಾವು ಮತ್ತು ತಮ್ಮ ಕುಟುಂಬ ಕ್ಷೇಮವಾಗಿರುವ ನಿಟ್ಟಿನಲ್ಲಿ ಉತ್ತಮ ಹೆಸರಿನಲ್ಲಿ ಸಂಘಟನೆ ಮಾಡಿದ್ದು, ತಮ್ಮ ಪರವಾಗಿ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಮಾತನಾಡಿ, ಸಮಾಜದ ಕಾವಲುಗಾರರಾಗಿ ಪತ್ರಕರ್ತರು ಗುರುತಿಸಿಕೊಂಡಿದ್ದು, ತಾವು ಕ್ಷೇಮವಾಗಿರಲು ಸಂಘ ಆರಂಭಿಸಿದ್ದು, ಈ ಮೂಲಕ ಸಂಘಟಿತರಾಗಲು ವೇದಿಕೆ ಮಾಡಿಕೊಂಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಾಜದಲ್ಲಿ ನಡೆಯುವ ಘಟನೆಗಳ ಸತ್ಯಾಸತ್ಯತೆಗಳನ್ನು ಜನರಿಗೆ ತಲುಪಿಸುವುದು ತಮ್ಮ ಹೊಣೆಯಾಗಿದೆ. ಪ್ರಾಮಾಣಿಕ ಕೆಲಸ ನಿಮ್ಮಿಂದ ಆಗಲಿ ಎಂದು ಹೇಳಿದರು.
ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿ ಮೂಲಕ ಸಂಘಟನೆಗೆ ಮುಂದಾಗಿದ್ದು, ತಾವು ಸಮಾಜದಲ್ಲಿ ನಡೆಯುವ ತಪ್ಪುಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ನಾವು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಪತ್ರಕರ್ತರು ಮತ್ತು ಪೊಲೀಸ್ ಇಬ್ಬರೂ ಕೂಡ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದರು.
ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ನೀಡಲಾಯಿತು.ಹಿರಿಯ ವಿತರಕರಾದ ಶ್ರೀಧರ್ ಹಾಗೂ ಕಾನೂನು ಸಲಹೆಗಾರ ವಕೀಲ ನಾಗೇಶ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಆರ್.ಮಾದೇಶ್, ಮುಖಂಡರಾದ ಜೆ.ಪಿ. ಚಂದ್ರೇಗೌಡ, ಬಿಡದಿ ಪುರಸಭೆ ಸದಸ್ಯ ಲೋಹಿತ್, ಏಳಿಗೇಹಳ್ಳಿ ತಮ್ಮಣ್ಣ ಗೌಡ, ಚಿಕ್ಕಕಲ್ಯಾ ಶೀಧರ್, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಶೈಲಜಾ, ತೇಜಸ್ವಿ ರಮೇಶ್, ವಿಜಯಕುಮಾರ್, ದೇವೆಂದ್ರ ಕುಮಾರ್, ಚಿಕ್ಕಣ್ಣ, ರಂಗಣಿ, ಪೋಲಿಸ್ ವಿಜಿ, ರೈತ ಸಂಘದ ಅಧ್ಯಕ್ಷ ಲೋಕೇಶ್, ಕೆ.ವಿ.ಬಾಲು, ಎಂ.ಎನ್.ಮಂಜುನಾಥ್, ನವೀನ್ ಸೇರಿ ಅನೇಕ ಗಣ್ಯರು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.