ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಮೇ 1 ಕಾರ್ಮಿಕ ದಿನಾಚರಣೆ ಅಂಗವಾಗಿ ಲಾರಿ ಹಮಾಲರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಬೃಹತ್ ಮೆರವಣಿಗೆ ಜರುಗಿತು.ನಗರದ ಕೋರಿ ಚೌಕ್ದಿಂದ ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ, ಗಾಂಧಿಚೌಕ, ಬಸವೇಶ್ವರ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ ಅವರ ವೃತ್ತದ ಮಾರ್ಗವಾಗಿ ಆಗಮೀಸಿದ ಬೃಹತ್ ಮೆರವಣಿಯಲ್ಲಿ ಕಾರ್ಮಿಕ ಮುಖಂಡ ಈರಣ್ಣ ಬೆಳ್ಳುಂಡಗಿ ಮಾತನಾಡಿ, ಪ್ರಪಂಚದಾದ್ಯಂತ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆಕ್ರಮಣವನ್ನು ಉಲ್ಬಣಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಈ ಸಾಮ್ರಾಜ್ಯಶಾಹಿ ದಾಳಿಗಳಿಗೆ ಜನರ ಪ್ರತಿರೋಧವು ಸಹ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಈ ವರ್ಷದ ಕಾರ್ಮಿಕ ವರ್ಗವು ಮೇ ದಿನವನ್ನು ಆಚರಿಸಲು ಸಜ್ಜಾಗುತ್ತಿದೆ. ಟ್ರಂಪ್ ಅವರ ಅಧ್ಯಕ್ಷತೆಯ 2ನೇ ಅವಧಿಯಲ್ಲಿ, ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಸ್ಥಾಪಿತಗೊಂಡಿರುವ ನಿಯಮಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.
ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ತೈಲ ಮತ್ತು ಅನಿಲ ಸಂಪನ್ಮೂಲಗಳು ಮತ್ತು ಜಾಗತಿಕ ವ್ಯಾಪಾರ ಮಾರ್ಗಗಳ ಮೇಲೆ ಹಿಡಿತ ಸಾಧಿಸುವುದು. ಬಂಡವಾಳ ಶಾಹಿಯ ತೀವ್ರ ಬಿಕ್ಕಟ್ಟನ್ನು ನಿವಾರಿಸಲು ಈ ಬೆತ್ತಲೆ ಆಕ್ರಮಣಗಳನ್ನು ಮಾಡಲಾಗುತ್ತಿದೆ ಎಂದರು. ಸಿಐಟಿಯು ಸಹ ಸಂಚಾಲಕ ಸೋಮಪ್ಪ ಆಯಟ್ಟಿ, ಸುರೇಶ ಜೀಬಿ, ಪ್ರಭುಗೌಡ ಪಾಟೀಲ, ಅಕ್ಷರ ದಾಸೋಹ ಮುಖಂಡೆಯರಾದ ಸುಮಂಗಲಾ ಶೆಟ್ಟಿ, ಭಾರತಿ ಮಠಪತಿ ಮಾತನಾಡಿದರು.ಸಿಐಟಿಯು ಸಂಗಪ್ಪ ಕಪಾಲಿ, ಲಾರಿ ಹಮಾಲರ ಸಂಘದ ಅಧ್ಯಕ್ಷ ಮೋದಿನಸಾಬ್ ಮಮದಾಪುರ, ಕಾರ್ಯದರ್ಶಿ ಪರಶುರಾಮ ಬೆನಕಟ್ಟಿ, ಸಾಬು ಗುಗದಡ್ಡಿ, ಮಲಿಕ್ಸಾಬ್ ಟಕ್ಕಳಕಿ, ಪರಶುರಾಮ ತಳವಾರ, ಸತೀಶ ಅಡವಿ, ಸುವರ್ಣಾ ಹಲಗಣಿ, ಶಿವಾನಂದ ಅನಮಿ, ಸತೀಶ ಅಡವಿ ಉಪಸ್ಥಿತರಿದ್ದರು.