ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ ಮಾತನಾಡಿ, ತಾಳಿಕೋಟಿ ತಾಲೂಕಿನ ಭಂಟನೂರ ಗ್ರಾಮದ ಸರ್ವೆ ನಂ. 178/1,2 ಈ ಜಮೀನಿನಲ್ಲಿ ಮುಖ್ಯ ಕಾಲುವೆ ಅಕ್ವಾಡೆಕ್ಟ್ ಹಾಗೂ ಏಂಬೆಕಮೆಂಟ್ ಕಾಮಗಾರಿ ಕೈಗೊಂಡಿದ್ದು, ಇದು ಕಳಪೆಮಟ್ಟದಿಂದ ಕೂಡಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಜನವರಿ 19ರಂದು ಪ್ರಾಯೋಗಿಕವಾಗಿ ನೀರು ಹರಿಸಿದ್ದು ಕಾಲುವೆಯ ನೀರು ಜಮೀನಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದ ಕಾರಣ, ಆದಷ್ಟು ಬೇಗ ತಾವು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರಾದವರಿಗೆ ಹಾಗೂ ಕಳಪೆ ಕಾಮಗಾರಿಗೆ ಸಹಕರಿಸಿದ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾರ್ಚ್ 21ರಂದು ಮನವಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಕೆಲವು ದಿನಗಳ ಹಿಂದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಲುವೆಯಲ್ಲಿನ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಕೆ.ಬಿ.ಜೆ.ಎನ್.ಎಲ್ . ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಆದೇಶ ಮಾಡಿ ಹಾಗೂ ಕಳಪೆ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಗಮೇಶ ದಾಸನಗೌಡ್ರ , ಪಿಂಟು ಗಬ್ಬೂರ, ಮುಕ್ಕದ್ದಸ್ ಇನಾಮದಾರ, ಬಸವರಾಜ ಸಿಂಗನಹಳ್ಳಿ, ಸಂಗಮೇಶ ಹಿರೇಮಠ, ಉಮೇಶ ರುದ್ರಮನಿ, ಸಂತೋಷ ಶ್ಯಾಪೇಟಿ, ಸುಜಾತ ಪೂಜಾರಿ, ಮಲ್ಲಮ್ಮ ಲಮಾಣಿ, ಕವಿತಾ ಹಲ್ಲೋಳಿ, ಬೇಬಿ ತಳವಾರ, ಸುವರ್ಣ ಹಳ್ಳಿ, ನಾಗಮ್ಮ ವಾಲೀಕಾರ. ರಾಜಶ್ರೀ ವಾಲಿಕಾರ, ಅಶ್ವಿನಿ ಸಾವಂತ್, ಲಕ್ಷ್ಮಿ ದಾಸವಾಳ ಇನ್ನಿತರರು ಉಪಸ್ಥಿತರಿದ್ದರು.