ಉಡುಪಿ: ಆದರ್ಶ ಅಧ್ಯಾಪಕ, ಯಕ್ಷಗಾನ ವೇಷಧಾರಿ - ತಾಳಮದ್ದಳೆ ಅರ್ಥಧಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ ಅಂಗವಾಗಿ ಉಡುಪಿ ರಂಗಭೂಮಿಯು ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗುತ್ತಿದೆ. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರವು 15 ಸಾವಿರ ರು. ನಗದು ಬಹುಮಾನ ಒಳಗೊಂಡಿರುತ್ತದೆ ಎಂದು ರಂಗಭೂಮಿ ಅಧ್ಯಕ್ಷರು ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಗ‍ಳನ್ನು ನೀಡಿದ ಅವರು ಮೊದಲ ವರ್ಷ ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯಕೃತಿ ಮೌನೇಶ ಬಡಿಗೇರರ ಅಭಿನಯ ಕಲಿಸಲು ಸಾಧ್ಯವಿಲ್ಲ ಎಂಬ ವಿಮರ್ಶಾ ಕೃತಿ, ಎರಡನೆಯ ವರ್ಷ ನಾಟಕ ಕೃತಿ ಎನ್ ಸಿ ಮಹೇಶ್ ರವರ ಸಾಕು ತಂದೆ ರೂಮಿ ಎಂಬ ನಾಟಕ ಕೃತಿಗೂ ನೀಡಲಾಗಿತ್ತು.

ಪ್ರಸ್ತುತ ಮೂರನೆಯ ವರ್ಷದ ಪುರಸ್ಕಾರಕ್ಕೆ ಹಿಂದಿನ 2024, ಮತ್ತು 2025ರಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸುತ್ತಿದ್ದೇವೆ. ಈ ವಿಮರ್ಶಾ ಕೃತಿಗಳ ಮೂರು ಪ್ರತಿಗಳನ್ನು ಲೇಖಕ/ ಪ್ರಕಾಶಕರು/ ರಂಗಕರ್ಮಿಗಳು/ ಅಥವಾ ರಂಗಾಸಕ್ತರು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್. ದಕ್ಷಿಣ ಕಾಶಿ (ಡಿ-1), ಎರಡನೆಯ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು - 570 002 (ಮೊಬೈಲ್ 9341091821) ಈ ವಿಳಾಸಕ್ಕೆ ಏಪ್ರಿಲ್ 30, 2026 ರ ಒಳಗೆ ತಲುಪುವಂತೆ ಕಳುಹಿಸಿ ಕೊಡಬಹುದು ಎಂದರು.

ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಭಾಸ್ಕರ್ ರಾವ್ ಕಿದಿಯೂರು, ಎನ್. ರಾಜಗೋಪಾಲ್ ಬಲ್ಲಾಳ್ ಇದ್ದರು.