ಜೀವನಾಡಿ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎಂ.ರವಿಪ್ರಸಾದ್ ಸ್ಮರಣಾರ್ಥ ನೀಡಲಾಗುವ ಹವ್ಯಾಸಿ ರಂಗನಟ ರಾಜ್ಯಮಟ್ಟದ ಪ್ರಶಸ್ತಿಯನ್ನು ಮಂಡ್ಯ ರಮೇಶ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ೧೦ ಸಾವಿರ ರು. ನಗದು, ಸನ್ಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಮಟ್ಟದ ಕನ್ನಡ ಮಾಸ ಪತ್ರಿಕೆ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆಗೆ ಸಣ್ಣ ಕಥೆ, ಪ್ರಬಂಧ, ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಪತ್ರಿಕೆ ಸಂಪಾದಕ ಡಾ.ಎಚ್.ಎಸ್.ಮುದ್ದೇಗೌಡ ಹೇಳಿದರು.

ಮುಂದಿನ ಸೆ.೧೩ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಪ್ರಾಕಾರಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಜೀವನಾಡಿ ಕನ್ನಡ ಸಣ್ಣಕಥಾ ಸ್ಪರ್ಧೆಗೆ ೧೫ ಸಾವಿರ ರು., ಕನ್ನಡ ಪ್ರಬಂಧ ಸ್ಪರ್ಧೆಗೆ ೧೦ ಸಾವಿರ ರು. ಹಾಗೂ ಕನ್ನಡ ಕವನ ಸ್ಪರ್ಧೆಗೆ ೫ ಸಾವಿರ ರು.ಗಳನ್ನು ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೀವನಾಡಿ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎಂ.ರವಿಪ್ರಸಾದ್ ಸ್ಮರಣಾರ್ಥ ನೀಡಲಾಗುವ ಹವ್ಯಾಸಿ ರಂಗನಟ ರಾಜ್ಯಮಟ್ಟದ ಪ್ರಶಸ್ತಿಯನ್ನು ಮಂಡ್ಯ ರಮೇಶ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ೧೦ ಸಾವಿರ ರು. ನಗದು, ಸನ್ಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದರು.

ಸಾಹಿತ್ಯ ಸ್ಪರ್ಧೆಗೆ ಕಳುಹಿಸುವ ಕಥೆ ೨೫೦೦ ಪದಗಳಿಗೆ ಸೀಮಿತವಾಗಿರಬೇಕು. ಪ್ರಬಂಧ ೨೦೦೦ ಪದಗಳಿಗೆ ಮೀರಬಾರದು. ಕವಿತೆ ೨೪ ಸಾಲುಗಳಿಗೆ ಮೀಸಲಾಗಿರಬೇಕು. ಇದು ಕಡ್ಡಾಯ. ನೀವು ಕಳುಹಿಸುವ ಕಥೆ, ಪ್ರಬಂಧ, ಕವಿತೆಗಳು ಪತ್ರಿಕೆ, ನಿಯತಕಾಳಿಕೆ, ಬ್ಲಾಗ್, ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟವಾಗಿರಬಾರದು. ಅನುವಾದಗಳಿಗೂ ಅವಕಾಶವಿಲ್ಲ. ಎಲ್ಲವೂ ಸ್ವತಂತ್ರ ರಚನೆಯಾಗಿರಬೇಕು. ಲೇಖನಗಳನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿಸಿ ಪತ್ರಿಕೆಯ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಲೇಖಕರ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಿರಬೇಕು. ಲಕೋಟೆಯ ಮೇಲೆ ಜೀವನಾಡಿ ಸಾಹಿತ್ಯ ಸ್ಪರ್ಧೆ ಎಂದು ನಮೂದಿಸಿರಬೇಕು ಎಂದು ಹೇಳಿದರು.

ಬಹುಮಾನಿತ ಕಥೆ, ಪ್ರಬಂಧ ಮತ್ತು ಕವನಗಳನ್ನು ಯಾವಾಗ ಬೇಕಾದರೂ, ಯಾವ ಸ್ವರೂಪದಲ್ಲಾದರೂ ಬಳಸುವ ಹಕ್ಕನ್ನು ಜೀವನಾಡಿ ಪತ್ರಿಕೆ ಕಾಯ್ದಿರಿಸಿಕೊಂಡಿದೆ. ಜೀವನಾಡಿ ಬಳಗದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಇದಕ್ಕೆ ಯಾವ ಪ್ರವೇಶ ಶುಲ್ಕ ಇರುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಈ ಸಂಬಂಧ ಪತ್ರ ವ್ಯವಹಾರಗಳಿಗೂ ಅವಕಾಶವಿಲ್ಲ. ಕಥೆ, ಪ್ರಬಂಧ, ಕವಿತೆಗಳು ತಲುಪಲು ಕೊನೆಯ ದಿನಾಂಕ ೧೫.೮.೨೦೦೨೬. ನಂತರ ಬಂದ ಪ್ರವೇಶಗಳನ್ನು ಕಡ್ಡಾಯವಾಗಿ ಪರಿಗಣಿಸುವುದಿಲ್ಲ. ಪ್ರಶಸ್ತಿ ವಿಜೇತರು ಖುದ್ದಾಗಿ ಬಂದು ಬಹುಮಾನದ ಹಣ ಪಡೆಯಬೇಕು. ಪರವಾಗಿ ಬಂದವರನ್ನು ಪರಿಗಣಿಸುವುದಿಲ್ಲ ಎಂದು ನೇರವಾಗಿ ಹೇಳಿದರು.

ಗೋಷ್ಠಿಯಲ್ಲಿ ಎಚ್.ಆರ್.ಕನ್ನಿಕ, ಎಸ್.ನಾರಾಯಣ್, ಪುಟ್ಟಸ್ವಾಮಿ ಇದ್ದರು.