4-5 ವರ್ಷಗಲ್ಲಿ ಇಡೀ ಜಿಲ್ಲೆಯೇ ನೀರಾವರಿ ಪ್ಲಾನ್‌

| Published : Dec 23 2024, 01:01 AM IST

4-5 ವರ್ಷಗಲ್ಲಿ ಇಡೀ ಜಿಲ್ಲೆಯೇ ನೀರಾವರಿ ಪ್ಲಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಿಎಂ ಮತ್ತು ಡಿಸಿಎಂ ಬಳಿ ಮನವಿ ಮಾಡಿಕೊಂಡಿದ್ದೇವೆ. ಆಲಮಟ್ಟಿಯ ನೀರು ನೆರೆಯ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ಹೋಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಇನ್ನಷ್ಟು ಭೂ ಸ್ವಾಧೀನ ಮಾಡಿಕೊಂಡು ನಮ್ಮ ಜಿಲ್ಲೆಗೆ 80 ಟಿಎಂಸಿ ನೀರು ಕೊಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ: ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಿಎಂ ಮತ್ತು ಡಿಸಿಎಂ ಬಳಿ ಮನವಿ ಮಾಡಿಕೊಂಡಿದ್ದೇವೆ. ಆಲಮಟ್ಟಿಯ ನೀರು ನೆರೆಯ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ಹೋಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಇನ್ನಷ್ಟು ಭೂ ಸ್ವಾಧೀನ ಮಾಡಿಕೊಂಡು ನಮ್ಮ ಜಿಲ್ಲೆಗೆ 80 ಟಿಎಂಸಿ ನೀರು ಕೊಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಕೂಡಗಿ ಗ್ರಾಮದಲ್ಲಿ ಎನ್‌ಟಿಪಿಸಿ ಮತ್ತಿತರ ತೆರಿಗೆಯ ₹ 2 ಕೋಟಿ ಅನುದಾನದ ವಿವಿಧ 48 ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಮುಂದಿನ 4-5 ವರ್ಷಗಳಲ್ಲಿ ಅದು ಕಾರ್ಯರೂಪಕ್ಕೆ ಬಂದು ಇಡೀ ಜಿಲ್ಲೆಯೇ ನೀರಾವರಿಯಾಗಲಿದೆ ಎಂದು ಭರವಸೆ ನೀಡಿದರು. ಕೂಡಗಿ ಕೆರೆಯನ್ನು ಬಸವನ ಬಾಗೇವಾಡಿ ಕ್ಷೇತ್ರದಲ್ಲೇ ಮಾದರಿ ಕೆರೆ ಮಾಡಬೇಕು ಎಂದುಕೊಂಡಿರುವೆ. ಆದರೆ ಅದನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದು ಸ್ವ ಇಚ್ಛೆಯಿಂದ ಬಿಟ್ಟು ಕೊಟ್ಟು ಸಹಕರಿಸಬೇಕು. ಕೇಂದ್ರ ಸರ್ಕಾರದಿಂದಾಗಿ ರಾಜ್ಯದ ಎಪಿಎಂಸಿಗಳು 2019ರ ವೇಳೆ ನಿಷ್ಕ್ರಿಯಗೊಂಡಿದ್ದವು. ನಾನು ಸಚಿವನಾದ ಬಳಿಕ ರಾಜ್ಯದಲ್ಲಿ 176 ಎಪಿಎಂಸಿಗಳನ್ನು ಮರುಸ್ಥಾಪಿಸಿ ₹ 450 ಕೋಟಿ ಗಳಿಕೆಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಹೇಳಿದರು.ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಈ ಭಾಗದ ಎನ್‌ಟಿಪಿಸಿ ಮೇಲೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ, ಅಲ್ಲಿ ಕೇವಲ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿದ್ದಾರೆ. ಈ ಭಾಗದ ಸಂಸದರು ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಮೇಲೆ ಹೆಚ್ಚಿನ ನಿಗಾ ಇರಿಸಿ ಸ್ಥಳೀಯರಿಗೆ ನ್ಯಾಯ ಒದಗಿಸಬೇಕೆಂದು ಆರಂಭದಲ್ಲಿ ಎನ್‌ಟಿಪಿಸಿಯಿಂದ ತೆರಿಗೆ ಹಣ ಬರಲ್ಲ ಎಂದು ಕೆಲವರು ವಾದಿಸಿದ್ದರು. ಹಾಗಂತ ನಾವೂ ಸುಮ್ಮನೇ ಕುಳಿತಿದ್ದರೆ ನಮ್ಮ ಪಾಲಿನ ಹಣ ಧಾರವಾಡ ಜಿಲ್ಲೆಗೆ ಹೋಗುತ್ತಿತ್ತು. ಕೊನೆಗೂ ವರ್ಷಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಈ ಭಾಗದ 5 ಗ್ರಾಮಗಳಿಗೆ ಸಿಗುವಂತೆ ಮಾಡಲಾಯಿತು. ಅದರಲ್ಲಿ ಸಿಂಹಪಾಲು ಕೂಡಗಿ ಗ್ರಾಮಕ್ಕೆ ಲಭ್ಯವಾಗಿದೆ. ಹೀಗಾಗಿ ಇದು ಬೆಂಗಳೂರು ಬಳಿಯ ದೇವನಹಳ್ಳಿಯ ನಂತರ ರಾಜ್ಯದಲ್ಲೇ ಹೆಚ್ಚಿನ ತೆರಿಗೆ ಪಡೆಯುವ ಎರಡನೇ ಗ್ರಾಮವಾಗಿದೆ ಎಂದರು.

ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅರಳಿಚಂಡಿಯ ಪರಮಾನಂದ ಗುರೂಜಿ, ಮೆಹರಾಜ ಪೀರಾ ಜಾಗೀರದಾರ ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಧುರೀಣ ತಾನಾಜಿ ನಾಗರಾಳ, ಜಿಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹುಸೇನಬಿ ಮಾಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ, ಸುರೇಶ ಹಾರಿವಾಳ, ತಹಸೀಲ್ದಾರ ಎಸ್.ಎಸ್.ನಾಯಕಲ್ಲಮಠ, ತಾಪಂ ಇಒ ಸುನೀಲ ಮದ್ದೀನ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಸಿಡಿಪಿಒ ಶಿಲ್ಪಾ ಹಿರೇಮಠ, ಪಿಡಿಒ ಎ.ಎಸ್.ಕೋಟ್ಯಾಳ, ಗ್ರಾಪಂ ಉಪಾಧ್ಯಕ್ಷ ಅರುಣ ನಾಯಕ, ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಮತ್ತಿತರರು ಇದ್ದರು.

ತಾಪಂ ಮಾಜಿ ಉಪಾಧ್ಯಕ್ಷ ಈಶ್ವರ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಜಾಲವಾದಿ ನಿರೂಪಿಸಿದರು. ಗ್ರಾಪಂ ಸದಸ್ಯ ಆರೀಫ್ ತಾಳಿಕೋಟಿ ವಂದಿಸಿದರು.

ಸಾರೋಟದಲ್ಲಿ ಮೆರವಣಿಗೆ: ಮೊದಲು ಗ್ರಾಮದ ಮಹಿಬೂಬ ಸುಬಾನಿ ದರ್ಗಾದಿಂದ ಮನಗೂಳಿ, ಅರಳಿಚಂಡಿ, ಕೂಡಗಿ ಶ್ರೀಗಳು ಮತ್ತು ಸಚಿವ ಶಿವಾನಂದ ಪಾಟೀಲರನ್ನು ಸಾರೋಟದಲ್ಲಿ ಕೂರಿಸಿ ಅದ್ಧೂರಿ ಮೆರವಣಿಗೆ ಮೂಲಕ ಗ್ರಾಪಂ ಆವರಣಕ್ಕೆ ಕರೆತರಲಾಯಿತು. ಈ ವೇಳೆ ಸಾರವಾಡದ ಮಹರ್ಷಿ ವಾಲ್ಮೀಕಿ ಗೊಂಬೆ ಕುಣಿತ, ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ತಂದಿತು.