ಬಾಳೆಹೊನ್ನೂರುಭಗವಂತ ನಮಗೆ ಉಚಿತವಾಗಿ ಕೊಟ್ಟ ಭೂಮಿ, ನೀರು, ಬೆಳಕು, ಗಾಳಿ, ದೇಹ, ದೇಹದ ಅಂಗಾಂಗಗಳನ್ನು ನಾವು ನಿರ್ಲಜ್ಜವಾಗಿ ಮಾರಾಟ ಮಾಡುತ್ತಿದ್ದು, ಇದು ಜೀವನದ ನಿಜವಾದ ವಿಕಾಸವೇ? ವಿನಾಶವೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಆರ್ಎಸ್ಎಸ್ನ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಹೇಳಿದರು.
ಬಾಳೆಹೊನ್ನೂರಲ್ಲಿ ಅದ್ಧೂರಿಯ ಹಿಂದೂ ಸಮಾಜೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಭಗವಂತ ನಮಗೆ ಉಚಿತವಾಗಿ ಕೊಟ್ಟ ಭೂಮಿ, ನೀರು, ಬೆಳಕು, ಗಾಳಿ, ದೇಹ, ದೇಹದ ಅಂಗಾಂಗಗಳನ್ನು ನಾವು ನಿರ್ಲಜ್ಜವಾಗಿ ಮಾರಾಟ ಮಾಡುತ್ತಿದ್ದು, ಇದು ಜೀವನದ ನಿಜವಾದ ವಿಕಾಸವೇ? ವಿನಾಶವೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಆರ್ಎಸ್ಎಸ್ನ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಹೇಳಿದರು.ಎನ್.ಆರ್.ಪುರ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿ ಆತ್ಮ ವಿಸ್ಮೃತಿ ಉಂಟಾದರೆ ಪತನ ನಿಶ್ಚಿತ. ಇಂದು ಹಣಕ್ಕಾಗಿ ಪೋಷಕರು ಮಕ್ಕಳನೇ ಮಾರುತ್ತಿದ್ದಾರೆ. ಜಗತ್ತು ರಣರಂಗವಾಗಿ ಜೀವನ ಸಂಘರ್ಷವಾಗಿದೆ. ಉಗ್ರವಾದ, ಮಾವೋವಾದ, ನಕ್ಸಲ್ವಾದ, ಕೋಮುವಾದಗಳು ಹೆಚ್ಚಾಗುತ್ತಿದ್ದು, ಇವು ಅವುಗಳ ಸಾಮ್ರಾಜ್ಯದ ವಿಸ್ತಾರದ ಉದ್ದೇಶವಾಗಿದೆ. ಇವುಗಳೆಲ್ಲ ಜಗತ್ತನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತಿದೆ ಎಂದರು.ಆದರೆ ಹಿಂದುತ್ವ ಎನ್ನುವುದು ಜಗತ್ತೇ ಒಂದು ಕುಟುಂಬ ಎಂದು ಹೇಳಿದೆ. ಎಲ್ಲರನ್ನು ಒಪ್ಪಿ ಬರುವುದೇ ನಿಜವಾದ ಹಿಂದುತ್ವ ಸನಾತನ ಜೀವನ ಪದ್ಧತಿ ಹಿಂದುತ್ವವಾಗಿದ್ದು, ಇದಕ್ಕೆ ಆದಿ, ಅಂತ್ಯವಿಲ್ಲದೆ ಸದಾ ಕಲಾ ಜೀವಂತವಾಗಿರುತ್ತದೆ. ಜಗತ್ತು ಭಾರತವನ್ನು ವಿಶ್ವಗುರುವಾಗಿ ಸ್ವೀಕರಿ ಸುವಂತೆ ಬದುಕಿದವರು ನಮ್ಮ ಪೂರ್ವಜರು. ನಮ್ಮ ದೇಶದ ಸಂಪತ್ತು ಕೊಂಡು, ಮಾರಿ ಬದುಕಿದವರು ನಾವಲ್ಲ. ಬದಲಾಗಿ ಹಂಚಿಕೊಂಡು ಬದುಕಿದವರು ನಾವು.
ನಾವುಗಳು ಅನ್ಯ ವಿಚಾರದ ಹಿಂದೆ ಓಡದೆ ಭಾರತದ ಪರಂಪರೆ ಜೀವನವನ್ನು ಒಪ್ಪಿ, ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಕಲಿಸುತ್ತ ಬದುಕಬೇಕಿದೆ. ಈ ನಿಟ್ಟಿನಲ್ಲಿ ನಮ್ಮನ್ನು ನಾವು ಮರೆತವರಿಗೆ ಜಾಗೃತಗೊಳಿಸಲು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ. ಭವಿಷ್ಯದ ಮುನ್ನಡೆಯ ಒಂದು ಸುಂದರ ಲಕ್ಷಣ ಇದಾಗಿದೆ. ತನ್ನ ಸಮಾಜೋತ್ಸವವನ್ನು ತಾನೇ ಆಚರಿಸಿಕೊಳ್ಳುತ್ತಿದೆ ಎಂದರು.ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿ ವಿಶಾಲ, ಶ್ರೇಷ್ಠ, ಪವಿತ್ರವಾದ ಸಂಸ್ಕೃತಿಯಾಗಿದ್ದು, ನಮ್ಮ ಆಚರಣೆಗಳಲ್ಲಿ ಸಂಸ್ಕೃತಿ ಬಿಂಬ ಪ್ರತಿಬಿಂಬಿಸುತ್ತಿದೆ ಎಂದರು.ಹಿಂದೂ ಸಂಪ್ರದಾಯದಲ್ಲಿ ಆಚರಣೆಗಳು ಒಂದು ಭಾಗವಾಗಿವೆ. ಆದರೆ ಹಿಂದುತ್ವದಲ್ಲಿ ಜ್ಞಾನಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಜೀವಾತ್ಮ-ಪರಮಾತ್ಮ ಬೇರೆ ಅಲ್ಲ ಎಂದು ಉಪನಿಷತ್ನಲ್ಲಿ ಹೇಳಲಾಗಿದೆ. ನಮ್ಮಲ್ಲಿ ಇಂದು ದೊಡ್ಡ ಅಜ್ಞಾನ ತುಂಬಿದ್ದು, ಜಾತೀಯತೆ ಬಗ್ಗೆ ಅಜ್ಞಾನ ಹೊಂದಿ ಸಂಕುಚಿತ ಭಾವನೆ ತಾಳಿದ್ದೇವೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಹಿರಿಯ ಕಾಫಿ ಬೆಳೆಗಾರ ಎಂ.ಎಸ್.ಚನ್ನಕೇಶವಗೌಡ ಗೋ ಪೂಜೆ ಮಾಡುವ ಮೂಲಕ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ಹಲಗೆ, ಓಲಗ, ನಾಸಿಕ್ ಡೋಲು, ಚಂಡೆ, ವಿವಿಧ ವೇಷಭೂಷಣಗಳನ್ನು ತೊಟ್ಟ ಪುಟಾಣಿಗಳ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು. ಕೇಸರಿ ಶಾಲು ಹೊದ್ದು, ಧ್ವಜ ಹಿಡಿದ ಸಾವಿರಾರು ಮಹಿಳೆಯರು, ಪುರುಷರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಕಾಫಿ ಬೆಳೆಗಾರ ಕೆ.ಎನ್.ರುದ್ರಪ್ಪಗೌಡ, ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಎ.ಎಸ್.ಕೃಷ್ಣಯ್ಯ, ಉಪಾಧ್ಯಕ್ಷ ಆರ್.ಡಿ.ಮಹೇಂದ್ರ, ಸಹ ಸಂಯೋಜಕ ಬಿ.ವೆಂಕಟೇಶ್, ಮಹಿಳಾ ಪ್ರಮುಖ್ ಪ್ರೇಮಲತಾ, ಸಿ.ಎಸ್.ಮಹೇಶ್ಚಂದ್ರ, ಸಿರಿ ಆರಾಧ್ಯ, ಸತೀಶ್ ಅರಳೀಕೊಪ್ಪ, ಸಂದೀಪ್ ಶೆಟ್ಟಿ, ರತ್ನಾಕರ ಗಡಿಗೇಶ್ವರ, ಉಮೇಶ್, ಅರುಣ್ಕುಮಾರ್ ಹಾಜರಿದ್ದರು.೩೧ಬಿಹೆಚ್ಆರ್ ೧: ಬಾಳೆಹೊನ್ನೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸೀತಾರಾಮ ಕೆದಿಲಾಯ, ಕೆ.ಎನ್.ರುದ್ರಪ್ಪಗೌಡ, ಎ.ಎಸ್.ಕೃಷ್ಣಯ್ಯ, ಪ್ರೇಮಲತಾ ಇದ್ದರು.೩೧ಬಿಹೆಚ್ಆರ್ ೨: ಬಾಳೆಹೊನ್ನೂರಿನಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಸಾವಿರಾರು ಹಿಂದೂ ಬಾಂಧವರು ಬೃಹತ್ ಶೋಭಾಯಾತ್ರೆ ನಡೆಸಿದರು.