ಗುಂಡ್ಲುಪೇಟೆಯಲ್ಲಿ ರಾಜಧನ ಸೋರಿಕೆಗೆ ಜಿಲ್ಲಾ ಸಮಿತಿಯೇ ಸಾಥ್?

| Published : Dec 10 2024, 12:32 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಸುತ್ತಮುತ್ತಲಿನ ಗಣಿಗಾರಿಕೆಯಲ್ಲಿ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಸರ್ಕಾರಕ್ಕೆ ಕೋಟ್ಯಂತರ ರು. ಬಾಕಿ ಹಣದ ಜತೆಗೆ ರಾಜಧನ ಸೋರಿಕೆಗೆ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಯೇ ಸಾಥ್ ನೀಡುತ್ತಿದೆ? ಎಂಬ ಆರೋಪ ಕೇಳಿ ಬರುತ್ತಿದೆ.

ಇದ್ದೂ ಇಲ್ಲದಂತಾದ ಖನಿಜ ತನಿಖಾ ಠಾಣೆ । ವಾರದಿಂದ ಸ್ಥಗಿತ । ಹೋಂ ಗಾರ್ಡ್‌ ನೇಮಿಸಲು ವಾರಗಟ್ಟಲೆ ಭೂ ವಿಜ್ಞಾನ ಇಲಾಖೆಯಿಂದ ಸಮಯ ವ್ಯರ್ಥಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಿರೀಕಾಟಿ ಸುತ್ತಮುತ್ತಲಿನ ಗಣಿಗಾರಿಕೆಯಲ್ಲಿ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಸರ್ಕಾರಕ್ಕೆ ಕೋಟ್ಯಂತರ ರು. ಬಾಕಿ ಹಣದ ಜತೆಗೆ ರಾಜಧನ ಸೋರಿಕೆಗೆ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಯೇ ಸಾಥ್ ನೀಡುತ್ತಿದೆ? ಎಂಬ ಆರೋಪ ಕೇಳಿ ಬರುತ್ತಿದೆ.

ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಮೈಸೂರು-ಊಟಿ ಹೆದ್ದಾರಿಯ ಹಿರೀಕಾಟಿ ಬಳಿ ಖನಿಜ ತನಿಖಾ ಠಾಣೆ ಆರಂಭಕ್ಕೆ ಕನ್ನಡಪ್ರಭ ವರದಿಯೇ ಪ್ರಮುಖ ಕಾರಣ. ಆದರೆ ಆರಂಭವಾದ ಖನಿಜ ತನಿಖಾ ಠಾಣೆ ತಿಂಗಳ ಮೊದಲ ವಾರದ ಆರಂಭದಲ್ಲಿ ಹೋಂ ಗಾರ್ಡ್‌ಗಳ ಬದಲಾವಣೆ ಆಗಬೇಕಿತ್ತು. ಆದರೆ ಹೋಂ ಗಾರ್ಡ್‌ ನೇಮಕವಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ ಜಿಲ್ಲಾ ಮತ್ತು ಭೂ ವಿಜ್ಞಾನ ಇಲಾಖೆ.

ಕನ್ನಡಪ್ರಭ ನಿರಂತರ ವರದಿ ಫಲ ಖನಿಜ ತನಿಖಾ ಠಾಣೆ ಆರಂಭವಾಗಿದೆ. ಆದರೆ ವಾರದಲ್ಲಿ ಒಮ್ಮೆ ಭೂ ವಿಜ್ಞಾನಿ ಭೇಟಿ ಕೊಟ್ಟು ಹೋಗುತ್ತಿದ್ದಾರೆ. ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಹೋಂ ಗಾರ್ಡ್‌ಗಳೇ ತಪಾಸಣೆ ಮಾಡುತ್ತಾರೆ. ಸಂಜೆ ಆರರ ಬಳಿಕ ಚೆಕ್‌ಪೋಸ್ಟ್‌ ಬಂದ್ ಆಗುತ್ತಿದೆ.

ರಾಜ ಮಾರ್ಗ:

ಖನಿಜ ತನಿಖಾ ಠಾಣೆ ಮುಂದೆಯೇ 30ಕ್ಕೂ ಹೆಚ್ಚು ಟನ್‌ ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳನ್ನು ತುಂಬಿಕೊಂಡು ಟಿಪ್ಪರ್‌ಗಳು 8ರಿಂದ 12 ಟನ್‌ ಪರ್ಮಿಟ್‌ ಹಾಗೂ ಎಂಡಿಪಿ ಹಾಕಿಕೊಂಡು ಹೋಗುತ್ತಿದ್ದಾರೆ. ಹೆಚ್ಚುವರಿ ಟನ್‌ ಕಲ್ಲು, ಕ್ರಷರ್‌ ಉತ್ಪನ್ನಗಳು ರಾಜಧನ ವಂಚಿಸಿ ತೆರಳುತ್ತಿವೆ.

ಖನಿಜ ತನಿಖಾ ಠಾಣೆ ಇದ್ದರೂ ಇಲ್ಲದಂತಾಗಿದೆ. ಹೋಂ ಗಾರ್ಡ್‌ಗಳು ಟಿಪ್ಪರ್‌ಗಳ ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿಲ್ಲ. ರಾಜಧನ ವಂಚಿಸಲು ತುದಿಗಾಲ ಮೇಲೆ ನಿಂತ ಕೆಲ ಕ್ರಷರ್‌ ಮಾಲೀಕರು ರಾಜಧನ ವಂಚಿಸುತ್ತೇವೆ ಎಂದವರಿಗೆ ಈ ಚೆಕ್‌ಪೋಸ್ಟ್‌ ರಾಜ ಮಾರ್ಗವಾಗಿದೆ.

ಇಲಾಖೆಯೇ ಕಾರಣ?

ಕ್ವಾರಿಯ ಕಚ್ಚಾ ವಸ್ತುಗಳು ಹಾಗೂ ಕ್ರಷರ್ ಉತ್ಪನ್ನಗಳ ಸಾಗಾಣಿಕೆ ಪರ‍್ಮಿಟ್/ಎಂಡಿಪಿ ಇಲ್ಲದೆ ಹಾಗೂ ಪರ‍್ಮಿಟ್ ಅರ್ಧಕ್ಕರ್ಧ ಹಾಕಿ ಹೆಚ್ಚಾಗಿ ಎಂಡಿಪಿ ಇಲ್ಲದೆ ಟಿಪ್ಪರ್‌ಗಳಲ್ಲಿ ಹಗಲು ರಾತ್ರಿ ಲೂಟಿಯಾಗುತ್ತಿದೆ. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಕಾರಣವಾಗಿದೆ

ಗಮನಹರಿಸದ ಡಿಸಿ:

ತಾಲೂಕಿನ ಹಿರೀಕಾಟಿ ಅಕ್ರಮ ಗಣಿಗಾರಿಕೆ ಸದ್ದು, ಕೋಟ್ಯಂತರ ಬಾಕಿ ಹಾಗೂ ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆ ಇಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸುತ್ತಿಲ್ಲ. ಹಿರೀಕಾಟಿ ಕ್ವಾರಿಯಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕೋಟ್ಯಂತರ ಬಾಕಿ ಇರುವ ಮಂದಿಗೆ ಲೀಸ್ ಕೊಟ್ಟಿದ್ದಾರೆ. ಮತ್ತೆ ಬಾಕಿ ಇರುವ ಮಂದಿಗೆ ಲೀಸ್ ಕೊಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳಿದೆ ಎನ್ನಲಾಗಿದೆ.

ಬಾಕಿ ವಸೂಲಿ ಹಾಗೂ ಬಾಕಿ ಇರುವ ಮಂದಿಗೆ ಮತ್ತೆ ಲೀಸ್ ಕೊಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ, ಬಾಕಿ ಕಟ್ಟುವ ತನಕ ಪರ್ಮಿಟ್‌ ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಿ ಎಂದು ಜಿಲ್ಲಾ ರೈತ ಕೂಲಿ ಸಂಗ್ರಾಮ ಸಮಿತಿ ಒತ್ತಾಯಿಸಿದೆ.