ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸದಾ ಒಂದಲ್ಲಾ ಒಂದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿರುವ ಬಸವಕೇಂದ್ರ ಮುರುಘಾಮಠ ಇದೀಗ ತನ್ನ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಜೆಎಂ ವಿಶ್ವ ವಿದ್ಯಾಲಯ ತನ್ನ ವಿಚಾರದಲ್ಲಿ ಸಾರ್ವತ್ರಿಕವಾಗಿ ಕೆಲ ಶಂಕೆಗಳು ಮೂಡಲು ಕಾರಣವಾಗಿದೆ. ಮುರುಘಾಮಠದ ಅಡಿಯಲ್ಲಿ ನೂತನ ಎಸ್‌ಜೆಎಂ ವಿಶ್ವ ವಿದ್ಯಾಲಯದ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ಸರ್ಕಾರ ನೇಮಿಸಿದ ಆಡಳಿತ ಮಂಡಳಿ ವಿವಿ ಕಾರ್ಯನಿರ್ವಹಣೆಯ ಯಾವುದಾದರೂ ಏಜೆನ್ಸಿಗೆ ಹೊರಗುತ್ತಿಗೆ ನೀಡಿದೆಯಾ ಎಂಬ ಸಂಗತಿ ಮಾರ್ದನಿಸುತ್ತಿದೆ. ಹಾಗಾಗಿ ಅನುಮಾನಗಳ ಗುಡಾಣಿಗೆ ಹೊಸದಾಗಿ ಬೊಗಸೆ ನೀರು ಸೇರಿದಂತಾಗಿದೆ.

ಮುರುಘಾಮಠ ಬಸವ ಪರಂಪರೆಯ ವಾರಸುದಾರಿಕೆಯಾಗಿ ಮುಂದುವರಿಯುತ್ತಿದ್ದರೆ, ಅದರ ಅಡಿಯಲ್ಲಿ ಬರುವ ಎಸ್ ಜೆಎಂ ವಿದ್ಯಾಪೀಠ ಶೈಕ್ಷಣಿಕ ವ್ಯವಸ್ಥೆಯ ರಾಜ್ಯವ್ಯಾಪಿ ವಿಸ್ತೃತವಾಗಿ ಹರಡುವಲ್ಲಿ ಯಶಸ್ವಿಯಾಗಿದೆ. ಎಸ್ ಜೆಎಂ ವಿದ್ಯಾಪೀಠದ ಅಡಿಯಲ್ಲಿ ಒಟ್ಟು 73 ಶಾಲಾ ಕಾಲೇಜುಗಳು ಬರುತ್ತವೆ. ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ, ಬಿಇಡಿ, ನರ್ಸಿಂಗ್, ಐಟಿಐ, ಪಾಲಿಟೆಕ್ನಿಕ್, ನರ್ಸಿಂಗ್, ಡೆಂಟಲ್, ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಎಲ್ಲ ವಲಯದ ಕಾಲೇಜುಗಳ ಎಸ್ ಜೆಎಂ ವಿದ್ಯಾಪೀಠ ಒಳಗೊಂಡಿದೆ.

ಇತ್ತೀಚೆಗೆ ನೂತನವಾಗಿ ಆರಂಭಗೊಂಡ ಎಸ್‌ಜೆಎಂ ವಿಶ್ವವಿದ್ಯಾಲಯ ಎಸ್ ಜೆಎಂ ವಿದ್ಯಾಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲೇಬೇಕು. ಆದರೆ ವಿವಿ ಉಪ ಕುಲಪತಿ ಇಲ್ಲವೇ ಕುಲಸಚಿವ ಮಾಡಿದ ಯಡವಟ್ಟೋ ಅಥವಾ ಉದ್ದೇಶ ಪೂರ್ವಕವೋ ಏನೋ ಎಸ್ ಜೆಎಂ ವಿಶ್ವ ವಿದ್ಯಾಲಯದ ಯಾವುದೇ ಜಾಹೀರಾತಿನಲ್ಲಿ ಎಸ್ ಜೆಎಂ ವಿದ್ಯಾಪೀಠದ ಲೋಗೋ ಕಾಣಿಸುತ್ತಿಲ್ಲ.ಲೋಗೋ ಇಲ್ಲದ ಜಾಹಿರಾತುಗಳು ನಿರಂತರವಾಗಿ ಪ್ರಕಟವಾಗುತ್ತಿರುವುದು ಸಹಜವಾಗಿಯೇ ವಿದ್ಯಾಪೀಠದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಶಾಲಾ ಕಾಲೇಜುಗಳ ಸಿಬ್ಬಂದಿಗೆ ಅನುಮಾನಗಳ ಮೂಡಿಸಿದೆ. ಲೋಗೋ ಇಲ್ಲದ ಜಾಹೀರಾತು ಪ್ರಕಟವಾಗುತ್ತಿರುವುದ ಒಳಗೊಳಗೆ ಚರ್ಚೆ ಮಾಡುತ್ತಿದ್ದಾರೆಯೇ ವಿನಹ ಬಹಿರಂಗವಾಗಿ ಪ್ರಶ್ನಿಸಲು ಯಾರೂ ಮುಂದಾಗುತ್ತಿಲ್ಲ.


ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು , ಕೈಯಲ್ಲಿ ತಾಳೆಗರಿ ಪತ್ರಗಳ ಕಟ್ಟು ಹಿಡಿದು ಕುಳಿತ ಬಸವಣ್ಣನ ಭಾವಚಿತ್ರ ಎಸ್ ಜೆಎಂ ವಿದ್ಯಾಪೀಠದ ಲೋಗೋ. ಯಾವುದೇ ಜಾಹೀರಾತು ಹಾಗೂ ಲೆಟರ್ ಹೆಡ್ ಗಲ್ಲಿ ಒಂದೆಡೆ ಲೋಗೋ ಹಾಗೂ ಮತ್ತೊಂದೆಡೆ ಮುರುಗಿ ಶಾಂತವೀರ ಶ್ರೀಗಳ ಪೋಟೋ ಬಳಸಲಾಗುತ್ತದೆ.ಎಸ್ ಜೆಎಂ ಯೂನಿವರ್ಸಿಗೆ ಸಂಬಂಧಿಸಿದಂತೆ ಹಾಲಿ ಪ್ರಕಟಿಸಲಾಗುತ್ತಿರುವ ಜಾಹೀರಾತಿನಲ್ಲಿ ಈ ಲೋಗೋಗಳು ಮಾಯವಾಗಿವೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ ಜೆಎಂ ಯೂನಿವರ್ಸಿಟಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಪರೀಕ್ಷೆ ಸೇರಿದಂತೆ (ಕೆಲವು ಹೊರತು ಪಡಿಸಿ) ಮಾರ್ಕ್ಸ್ ಕಾರ್ಡ್ ವಿತರಣೆವರೆಗೂ ತನ್ನ ಪಾತ್ರವನ್ನು ಸಾಭೀತುಪಡಿಸಲಿದೆ. ಹಾಗಾಗಿ ಎಸ್ ಜೆಎಂ ಯೂನಿವರ್ಸಿಟಿ ಎಸ್ ಜೆಎಂ ವಿದ್ಯಾಪೀಠದ ಆಚೆ ಬಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಿದೆಯೇ ಎಂಬ ಅನುಮಾನಗಳು ಸಹಜವಾಗಿ ಕಾಡಿವೆ. ಲೋಗೋ ಇಲ್ಲದೆ ಕಳೆದ ಒಂದು ತಿಂಗಳಿನಿಂದ ಬರುತ್ತಿರುವ ಜಾಹೀರಾತುಗಳು ಈ ಬಗೆಯ ಅನುಮಾನ ಮೂಡಲು ಕಾರಣವಾಗಿದೆ.

ಬಸವಕೇಂದ್ರ ಮುರುಘಾಮಠದಲ್ಲಿ ನಡೆದ ಕೆಲ ಘಟನೆಗಳಿಂದಾಗಿ ತಿರುವುಗಳಿಂದಾಗಿ ರಾಜ್ಯ ಸರ್ಕಾರ ಖಡಕ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆಡಳಿತಾಧಿಕಾರಿ ಹುದ್ದೆ ನೀಡಿತ್ತು. ಅದೇ ರೀತಿ ವಿದ್ವಾಂಸರಾದ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. ಇವರಿಬ್ಬರ ಕಣ್ಗಾವಲಿನಲ್ಲಿ ಎಸ್ ಜೆಎಂ ವಿದ್ಯಾಪೀಠದ ಲೋಗೋ ಮಾಯವಾಗಿರವುದು ಅಚ್ಚರಿ ಮೂಡಿಸಿದೆ.