ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಿಂದೂಗಳ ಪರವಾಗಿ ಮಾತನಾಡಿದರೆ ಕೋಮುವಾದ, ಮುಸ್ಲಿಮರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತೀವ್ರವಾಗಿ ಪ್ರಶ್ನೆ ಮಾಡಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರೆ ಅದು ಕೋಮುವಾದ ಆಗುವುದಾದರೆ, ದಾವಣಗೆರೆಯಲ್ಲಿ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್ ಪಕ್ಷದವರಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದು, ಕೋಮುವಾದವಲ್ಲವೇ? ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮವನ್ನು ಆಧಾರವಾಗಿಟ್ಟುಕೊಂಡು ಮತದಾರರಲ್ಲಿ ಧರ್ಮಾಂದತೆಯನ್ನು ಮೂಡಿಸಿ ಮತ ವಿಭಜನೆ ಮಾಡಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲುವ ಹುನ್ನಾರವನ್ನು ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಇದಕ್ಕಾಗಿ ಸರ್ಕಾರವನ್ನೇ ಬ್ಲಾಕ್ಮೇಲ್ ಮಾಡಿ ಹಿಂದೂ-ಮುಸ್ಲಿಂ ಎಂದು ಸಮಾಜದಲ್ಲಿ ಒಡಕು ಮೂಡಿಸಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದ ಸಚಿವ ಜಮೀರ್ ಅಹಮದ್ ಮೇಲೆ ಕೋಮುಸೌಹಾರ್ಧತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಪಶ್ಚಿಮಘಟ್ಟ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಹೊರಟಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಹಲವು ಹೋರಾಟಗಳು ನಡೆದಿದ್ದು, ಇವು ಕೇಂದ್ರ ಸರ್ಕಾರದ ಗಮನ ಸೆಳೆಯಲು ಯಶಸ್ವಿಯಾಗಿವೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಈ ಯೋಜನೆಗೆ ಇದುವರೆಗೂ ಅನುಮತಿ ಕೊಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದರು.
ಪರಿಸರ ರಕ್ಷಣೆ ಮಾಡುವ ವಿಚಾರದಲ್ಲೂ ಕೂಡ ಅವರು ಈ ಯೋಜನೆಯನ್ನು ವಿರೋಧಿಸಿ ಕೇಂದ್ರಕ್ಕೆ ಪರಿಸರವಾದಿಗಳ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಮೋದಿ ಜೊತೆಗೆ ಚರ್ಚೆ ನಡೆಸಬೇಕು. ಇದು ಅವರ ಕರ್ತವ್ಯವೂ ಹೌದು ಎಂದರು.
ಈಗಾಗಲೇ ಈ ಯೋಜನೆಯ ವಿರುದ್ಧ ಹಲವು ಗಣ್ಯರು, ಮಠಾಧೀಶರು, ಪರಿಸರ ಪ್ರೇಮಿಗಳು, ಹೋರಾಟದ ಧ್ವನಿಯನ್ನು ಎತ್ತಿದ್ದಾರೆ. ರಾಷ್ಟ್ರಭಕ್ತ ಬಳಗವೂ ಅಹೋರಾತ್ರಿ ಧರಣಿ ನಡೆಸಿದೆ. ಹೈಕೋರ್ಟ್ ಕೂಡಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛೀಮಾರಿ ಹಾಕಿದೆ. ಸ್ವಾಮೀಜಿಗಳು ಕೂಡಾ ನಮ್ಮ ಹೆಣದ ಮೇಲೆ ಈ ಯೋಜನೆ ಜಾರಿಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.
ನಾವೂ ಕೂಡಾ ಅದನ್ನೇ ಹೇಳುತ್ತೇವೆ. ಹಣದ ದಾಹಕ್ಕಾಗಿ ರೂಪಿಸಿರುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.