- ಎಸ್ಸೆಸ್ಸೆಲ್ಸಿ ಅಂಕವೀರರಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ, ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಮ್ಮ ಕನ್ನಡ ನಾಡಿಗೆ 2 ಸಾವಿರ ವರ್ಷಗಳ ಇತಿಹಾಸ, ಭವ್ಯ ಪರಂಪರೆ ಇದೆ. ಲಿಪಿ, ಸಾಹಿತ್ಯ, ಅಕ್ಷರ ತನ್ನದೇ ಆದಂತಹ ಕಲೆ ಇದೆ. ಕನ್ನಡ ಭಾಷೆ ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಪ್ರಾದೇಶಿಕ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೆ ಅದು ನಮ್ಮ ಕನ್ನಡ ಭಾಷೆಗೆ ಮಾತ್ರ. ವಿಶ್ವದ ಲಿಪಿಗಳಲ್ಲಿ ಅತ್ಯಂತ ಸುಂದರವಾಗಿ ರಾಣಿಯಂತೆ ಕಾಣುವ ಭಾಷೆಯಾಗಿದ ಕನ್ನಡ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಿದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ, ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಲಾಕುಂಚ ಸಂಸ್ಥೆ 35 ವರ್ಷಗಳಿಂದ ಸುಮಾರು 39 ಸಾವಿರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಹಾಗೂ 120ಕ್ಕೂ ಮೇಲ್ಪಟ್ಟು ಅಂಕ ಗಳಿಸಿದ ಇಡೀ ರಾಜ್ಯಮಟ್ಟದಲ್ಲಿ ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಶಿಕ್ಷಣ ಈ ಮುಖ್ಯಾಂಶಗಳನ್ನು ಇಟ್ಟುಕೊಂಡು 1989ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ ಎಂದರು.
ಮುತ್ತು-ರತ್ನಗಳನ್ನು ಸೇರುಗಳಲ್ಲಿ ಅಳೆದು ಮಾರುವಂತ ವಿಜಯನಗರ ಸಾಮ್ರಾಜ್ಯ ಕಂಡಂತ ನಾಡು ನಮ್ಮದು. ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯ ಕರ್ನಾಟಕದ ಈ ದಾವಣಗೆರೆಗೆ ಆಗಮಿಸಿದ್ದೀರಿ. ಕನ್ನಡದಲ್ಲಿ 125ಕ್ಕೆ 125ಕ್ಕೆ ಅಂಕ ಗಳಿಸುವುದು ಎಂದರೆ ನಿಮ್ಮ ಬುದ್ಧಿಮತ್ತೆಯ ಸಾರ್ಥಕತೆ. ಇನ್ನೂ ಉನ್ನತ ಮಟ್ಟದಲ್ಲಿ ಹೆಸರು ಕೀರ್ತಿ ಗಳಿಸುವಂತಾಗಬೇಕು ಎಂದು ಹಾರೈಸಿದರು.
ಕೇರಳ ರಾಜ್ಯದ ಮಂಗಲ್ಪಾಡಿಯ ಕಲಾಕುಂಚ ಸಂಸ್ಥೆ ಸಂಸ್ಥಾಪಕರಾದ ಜಯಲಕ್ಷ್ಮಿ ಶ್ರೀರಾಮ ಕಾರಂತ್ ಮಾತನಾಡಿ, ಮಕ್ಕಳು ವಿದ್ಯೆ ಮಾತ್ರವೇ ಕಲಿತರೆ ಏನೂ ಪ್ರಯೋಜನವಿಲ್ಲ. ಅದರ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಅದು ನಮ್ಮ ಕಲಾಕುಂಚದ, ನಮ್ಮ ನಾಡಿನ, ಹಿರಿಯರ ಬೇಡಿಕೆಯಾಗಿದೆ. ನೀವು ಇದನ್ನು ಪೂರೈಸಿದರೆ ಇಲ್ಲಿ ಪಡೆದುಕೊಂಡ ಪುರಸ್ಕಾರಕ್ಕೆ ಖಂಡಿತವಾಗಿ ಗೌರವ ಕೊಡುತ್ತದೆ. ತಂದೆ, ತಾಯಿ, ಶಿಕ್ಷಕರಿಗೆ ತಲೆಬಾಗಿ. ನೀವು ನಿಜವಾದ ಸಮಾಜದ ಕಣ್ಣುಗಳು. ಈ ಕಣ್ಣುಗಳು ಸರಿ ಇದ್ದರೆ ಸಮಾಜ ಸರಿ ಇರುತ್ತದೆ ಎಂದು ಆಶಿಸಿದರು. ಕಲಾಕುಂಚ ಸಂಸ್ಥೆ ಅಧ್ಯಕ್ಷ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸಿ, ಮಕ್ಕಳು 125ಕ್ಕೆ 125, 625ಕ್ಕೆ 625 ಅಂಕ ಗಳಿಸುವುದು ಸುಲಭದ ಮಾತಲ್ಲ. ಇದು ನಿಮಗೆ ನಿಮ್ಮ ತಂದೆ, ತಾಯಿ ಶಿಕ್ಷಕರು ಕೊಟ್ಟ ಬಳುವಳಿ. ನೀವೆಲ್ಲರೂ ಒಂದು ಕಲ್ಲಿದ್ದಂತೆ. ನಿಮ್ಮ ಪೋಷಕರು, ಶಿಕ್ಷಕರು ನೈಜ ಬೆಂಬಲವನ್ನು, ಕೌಶಲ್ಯವನ್ನು ಕೊಟ್ಟು ನಿಮ್ಮನ್ನು ರೂಪಿಸುತ್ತಾರೆ. ರೂಪಗೊಂಡ ಮಾದರಿಯೇ ಇಡೀ ದೇಶಕ್ಕೆ ಬೇಕಾದ ಶಿಲ್ಪಿಗಳು ನೀವು. ಎಸ್ಸೆಸ್ಸೆಲ್ಸಿ ಇಷ್ಟಕ್ಕೇ ಸಾಮರ್ಥ್ಯ ಮುಗಿಯಲ್ಲ. ಇದರ ನಂತರ ನಿಮ್ಮ ಸಾಮರ್ಥ್ಯ ಇಡೀ ಭಾರತಕ್ಕೆ ಗೊತ್ತಾಗುತ್ತದೆ. ಬಾಲ್ಯದಲ್ಲಿ ಕಳೆದ ಕ್ಷಣಗಳು ಮತ್ತೆ ಸಿಗಲ್ಲ. ನಿಮಗೆ ತಂದೆ, ತಾಯಿ, ಪೋಷಕರು, ನಿಮಗೆ ಮಾದರಿಯಾಗಿರುತ್ತಿದ್ದರು. ಅಂಕಗಳ ಹಿಂದೆ ಹೋಗಬೇಡಿ. ತಮ್ಮ ಕೌಶಲ್ಯ ಯಾವುದರಲ್ಲಿ ಆಸಕ್ತಿ ಇದೆಯೋ, ಅದರ ಕಡೆಗೆ ಗಮನಹರಿಸಿ, ಒಲವುಕೊಡಿ. ಆಗ ಜೀವನದಲ್ಲಿ ಮುಂದೆ ಬರಲು ಸಾಧ್ಯ. ತಂದೆ ತಾಯಿ, ಪೋಷಕರ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ. ಅಂಕದ ಜೊತೆಗೆ ಅನುಭವವೂ ಬೇಕು ಎಂದರು.ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಗೌರವಾಧ್ಯಕ್ಷ ಕೆ.ಎಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ, ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಗೌರವಾಧ್ಯಕ್ಷೆ ವಸಂತಿ ಮಂಜುನಾಥ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಶಾರದಮ್ಮ ಶಿವನಪ್ಪ, ಮಹೇಶ್ವರಯ್ಯ, ಪುಷ್ಪಾ ಮಂಜುನಾಥ, ಶಿಲ್ಪಾ ಉಮೇಶ, ವಿ.ಕೃಷ್ಣಮೂರ್ತಿ, ಶೈಲಾ ವಿಜಯಕುಮಾರ, ಚನ್ನಬಸವ ಶೀಲವಂತ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಸುಪ್ರಜಾ ಆರುಶಿ ರಾವ್ ಪ್ರಾರ್ಥಿಸಿದರೆ, ಕುಸುಮ ಲೋಕೇಶ ಸ್ವಾಗತಿಸಿದರು. ಲಲಿತಾ ಕಲ್ಲೇಶ ವಂದಿಸಿದರು. ಶೈಲಾ ವಿನೋದ ದೇವರಾಜ ಕಾರ್ಯಕ್ರಮ ನಿರೂಪಿಸಿದರು.- - -
-25ಕೆಡಿವಿಜಿ35, 36:ದಾವಣಗೆರೆಯಲ್ಲಿ ಕಲಾಕುಂಚ ಸಂಸ್ಥೆಯಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಸ ಬಿ.ವಾಮದೇವಪ್ಪ ಉದ್ಘಾಟಿಸಿದರು. ವಾಸುದೇವ ರಾಯ್ಕರ್, ಕೆ.ಎಚ್.ಮಂಜುನಾಥ ಇತರರು ಇದ್ದರು.