ಸಾರಾಂಶ
ಗ್ರಾಮೀಣ ಭಾಗದಲ್ಲಿ ಹಲ್ಲು ನೋವಿಗೆ ತಂಬಾಕು ಮದ್ದು ಎನ್ನುವ ಮಾತು ರೂಢಿಯಲ್ಲಿದೆ. ಆದರೆ, ಇದು ಮೂಢನಂಬಿಕೆಯಾಗಿದ್ದು, ಮಾರಕ ತಂಬಾಕು ವಿವಿಧ ಅನಾರೋಗ್ಯಗಳ ಸೃಷ್ಟಿಸುವುದು ಎಂದು ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ್ ಮಲೇಬೆನ್ನೂರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
- ಸಿದ್ಧಾರೂಢ ಆಶ್ರಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ - - - ಮಲೇಬೆನ್ನೂರು: ಗ್ರಾಮೀಣ ಭಾಗದಲ್ಲಿ ಹಲ್ಲು ನೋವಿಗೆ ತಂಬಾಕು ಮದ್ದು ಎನ್ನುವ ಮಾತು ರೂಢಿಯಲ್ಲಿದೆ. ಆದರೆ, ಇದು ಮೂಢನಂಬಿಕೆಯಾಗಿದ್ದು, ಮಾರಕ ತಂಬಾಕು ವಿವಿಧ ಅನಾರೋಗ್ಯಗಳ ಸೃಷ್ಟಿಸುವುದು ಎಂದು ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ತರಹದ ತಂಬಾಕು ಸೇವೆನೆಯಿಂದ ಹೃದಯಾಘಾತ, ಅನಿಮೀಯಾ, ಕ್ಯಾನ್ಸರ್, ಕಿಡ್ನಿ ಮತ್ತು ಥೈರಾಯಿಡ್ ಗ್ರಂಥಿಗೆ ಹಾನಿಯಾಗುವ ಸಂಭವವಿದೆ ಎಂದರು.ರಾತ್ರಿ ಮೊಸರು ಸೇವನೆ ಬೇಡ, ಅದರಲ್ಲಿ ಕ್ರಿಮಿಗಳು ಇರುತ್ತವೆ. ರಾಸಾಯನಿಕ ಮಿಶ್ರಿತ ಶಾಂಪೂ ಹಚ್ಚಿದರೆ ಕೂದಲು ಉದುರುತ್ತವೆ. ಎಲ್ಲರೂ ಆರು ತಿಂಗಳಿಗೊಮ್ಮೆ ಜಂತುಮಾತ್ರೆ ಸೇವಿಸಬೇಕು ಎಂದು ಸಲಹೆ ನೀಡಿದರು.
ಜನಜಾಗೃತಿ ವೇದಿಕೆ ಸಂಯೋಜಕ ನಾಗರಾಜ್ ಕುಲಾಲ್ ವಿಶ್ವ ಸಂಸ್ಥೆ ತಿಳಿಸಿರುವ ಪ್ರಕಾರ ತಂಬಾಕು ಎರಡನೇ ದೊಡ್ಡ ಕ್ಯಾನ್ಸರ್ ಆಗಿದೆ. ತಂಬಾಕು ಸೇವಿಸುವ ಯುವಜನ ಕ್ರಮೇಣ ಕೊಕೇನ್, ಹೆರಾಯಿನ್, ಗಾಂಜಾ ಅಮಲನ್ನೂ ಬಯಸುತ್ತಾರೆ. ಹೀಗಾಗಬಾರದು. ಹಿರಿಯರು ಮಕ್ಕಳ ನೀತಿ, ನಡತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಚ್ಚರಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ. ಮಂಜುನಾಥ್ ಮಾತನಾಡಿ, ಕಳೆದ ಮೂರು ತಿಂಗಳಿಂದ ಸಿಗರೇಟ್ ಸೇವನೆ ತ್ಯಜಿಸಿದ್ದೇನೆ. ಇದರಿಂದ ಪತ್ನಿಯಲ್ಲಿ ಆನಂದ ನೆಲೆಸಿರುವುದು ಕಂಡಿದ್ದೇನೆ. ಕೆಮ್ಮು ದೂರವಾಗಿದೆ, ಆರೋಗ್ಯ ಉತ್ತಮವಾಗಿದೆ ಎಂದು ಅನುಭವ ಹಂಚಿಕೊಂಡ ಅವರು, ಪ್ರತಿ ವರ್ಷದ ಮೇ ೩೧ರಂದು ತಂಬಾಕು ಮಾರಾಟವನ್ನು ದೇಶಾದ್ಯಂತ ನಿಷೇಧ ಮಾಡಲು ಒತ್ತಾಯಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎನ್.ಎಲ್. ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ, ಯೋಜನಾಧಿಕಾರಿ ವಸಂತ ದೇವಾಡಿಗ, ಒಕ್ಕೂಟದ ಅಧ್ಯಕ್ಷೆ ಸುಧಾ ಹಾಗೂ ಯೋಜನೆಯ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ನೂರಾರು ಮಹಿಳೆಯರು ಇದ್ದರು. ಧ್ಯೇಯ ಗೀತೆ ಹಾಡಲಾಯಿತು.- - - -೩೧ಎಂಬಿಆರ್೧:
ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮವನ್ನು ಡಾ. ನಾಗರಾಜ್ ಉದ್ಘಾಟಿಸಿದರು.