ಸಾರಾಂಶ
ಯಲ್ಲಾಪುರ: ಇತಿಹಾಸ ಮರೆಯುತ್ತೇವೆ. ಯಾರಿಗೆ ಇತಿಹಾಸ ಅರಿವಿರುವುದಿಲ್ಲವೋ ಅವರು ಬೆಳೆಯಲು ಸಾಧ್ಯವಿಲ್ಲ ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಹೆಗಡೆ ಹೇಳಿದರು.
ಇಲ್ಲಿಯ ಟಿಎಂಎಸ್ ಸಭಾಭವನದಲ್ಲಿ ಶನಿವಾರ ತಮಗಿತ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಮನದಾಳದ ಮಾತನ್ನು ಹಂಚಿಕೊಂಡರು. ಒಂದು ಸಂಸ್ಥೆ ಪ್ರಬಲವಾಗಿ ಬೆಳೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ಅಸಾಧ್ಯ. ಸಂಸ್ಥೆಯ ಸಕಲ ಸಿಬ್ಬಂದಿ, ಆಡಳಿತ ಮಂಡಳಿಗಳ ಸಂಪೂರ್ಣ ಸಹಕಾರವಿದ್ದಾಗ ಮಾತ್ರ ಸಾಧ್ಯ ಎಂದು ಹೇಳಿದರು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಈ ಸಂಸ್ಥೆಯ ಬೆಳವಣಿಗೆಗೆ ಆರ್.ಎನ್. ಹೆಗಡೆ ಮತ್ತು ಸಿ.ಎಸ್. ಹೆಗಡೆ ಅವರ ಕೊಡುಗೆ ಮಹತ್ವದ್ದಾಗಿದೆ. ಯಾವುದೇ ಸಂಸ್ಥೆ ಬೆಳೆಯುವುದಕ್ಕೆ ಮುಖ್ಯವಾಗಿ ಆರ್ಥಿಕ ಶಿಸ್ತು ಬೇಕು ಎಂದು ಹೇಳಿದರು.
ಯುಕೆ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಹಕಾರಿ ಸಂಘದಲ್ಲಿ ಬ್ಯಾಲೆನ್ಸ್ ಶೀಟ್ ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದರಲ್ಲಿ ಪರಿಣತಿ ಪಡೆದಿರುವ ಸಿ.ಎಸ್. ಹೆಗಡೆ ಅವರನ್ನು ನೋಡಿ ಕಲಿಯಬೇಕಾಗಿದೆ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಒಂದು ಸಂಸ್ಥೆ ಉತ್ತಮವಾಗಿ ಬೆಳೆಯುವುದಕ್ಕೆ ಸಿಬ್ಬಂದಿ ಕರ್ತವ್ಯನಿಷ್ಠೆ ಮತ್ತು ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ ಬೇಕು. ಸಹಕಾರಿ ವ್ಯವಸ್ಥೆಯನ್ನು ಈ ದೇಶದಲ್ಲಿ ಸದೃಢವಾಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ, ಸಹಕಾರಿ ಇಲಾಖೆಯನ್ನು ರೂಪಿಸಿ ದೇಶಾದ್ಯಂತ ಸಹಕಾರಿ ತತ್ವ ಬಲಪಡಿಸುವಲ್ಲಿ ಮಹತ್ವದ ಹೆಜ್ಜೆ ಹಾಕಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಲೆನಾಡು ಕೃಷಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳಮನೆ, ನಿಖಿಲ್ ಹೆಗಡೆ ಮಾತನಾಡಿದರು.ಟಿಎಂಎಸ್ ಅಧಿಕಾರಿ ಉಮೇಶ ಹೆಗಡೆ ಸನ್ಮಾನಪತ್ರ ವಾಚಿಸಿದರು. ಸಿ.ಎಸ್. ಹೆಗಡೆ ಅವರಿಗೆ ಸಹಕಾರಿ ಸಂಘದ ನಿಧಿಯಿಂದ ₹ ೧,೨೧,೦೦೦ ಅರ್ಪಿಸಲಾಯಿತು. ಸಿ.ಎಸ್. ಹೆಗಡೆ ಮತ್ತು ಶಾಂತಲಾ ಹೆಗಡೆ ಅವರನ್ನು ಟಿಎಂಎಸ್ ಮತ್ತು ಸಾರ್ವಜನಿಕರು, ಪ್ರತಿನಿಧಿಗಳು ಸನ್ಮಾನಿಸಿದರು. ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ವಿ.ಟಿ. ಹೆಗಡೆ ತೊಂಡೇಕೆರೆ ಉಪಸ್ಥಿತರಿದ್ದರು. ನಿರ್ದೇಶಕರಾದ ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ನಿರ್ವಹಿಸಿದರು. ವೆಂಕಟರಮಣ ಬೆಳ್ಳಿ ವಂದಿಸಿದರು.