ಇಡಿ ಮತ್ತು ಸಿಬಿಐ ಸ್ವತಂತ್ರ ಸಂಸ್ಥೆಗಳು. ಅವು ಮಾಹಿತಿ ಮೇರೆಗೆ ದಾಳಿ ನಡೆಸುತ್ತವೆಯೇ ಹೊರತು, ಜಾತಿ ಆಧಾರದ ಮೇಲೆ‌ ದಾಳಿ ಮಾಡುವುದಿಲ್ಲ. ಹಾಗಾದರೆ ಡಿ.ಕೆ. ಶಿವಕುಮಾರ ಒಕ್ಕಲಿಗ ಆಗಿದ್ದರೂ ಅವರ ಮೇಲೆ ಏಕೆ ದಾಳಿ ಆಯಿತು.

ಹುಬ್ಬಳ್ಳಿ:

ಇಡಿ ಹಾಗೂ ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿದ್ದು ಇದೀಗ ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ನಡೆಸಿರುವ ದಾಳಿಗೆ ಕಾಂಗ್ರೆಸ್‌ ರಾಜಕೀಯ ಬಣ್ಣ ಹಚ್ಚುತ್ತಿದೆ. ದಾಳಿಗಳು ಮಾಹಿತಿ ಆಧಾರದ ಮೇಲೆ ನಡೆಯುತ್ತವೆಯೇ ಹೊರತು ಜಾತಿ ಆಧಾರದ ಮೇಲೆ ಅಲ್ಲ. ತಪ್ಪು ಮಾಡದಿದ್ದರೆ ಹೆದರುವ ಅಗತ್ಯವಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಇಡಿ ದಾಳಿ ನಡೆಸಿರುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡಿ ಮತ್ತು ಸಿಬಿಐ ಸ್ವತಂತ್ರ ಸಂಸ್ಥೆಗಳು. ಅವು ಮಾಹಿತಿ ಮೇರೆಗೆ ದಾಳಿ ನಡೆಸುತ್ತವೆಯೇ ಹೊರತು, ಜಾತಿ ಆಧಾರದ ಮೇಲೆ‌ ದಾಳಿ ಮಾಡುವುದಿಲ್ಲ. ಹಾಗಾದರೆ ಡಿ.ಕೆ. ಶಿವಕುಮಾರ ಒಕ್ಕಲಿಗ ಆಗಿದ್ದರೂ ಅವರ ಮೇಲೆ ಏಕೆ ದಾಳಿ ಆಯಿತು ಎಂದು ಪ್ರಶ್ನಿಸಿದರು.ತಪ್ಪು ಮಾಡಿದ್ದಕ್ಕೆ ಡಿ.ಕೆ. ಶಿವಕುಮಾರ ಈ ವರೆಗೂ ತನಿಖೆಯಿಂದ ಹೊರಬರಲು ಆಗುತ್ತಿಲ್ಲ. ಬಿ. ನಾಗೇಂದ್ರ ದಲಿತರ ಹಣ ನುಂಗಿ ಹಾಕಿದ್ದ. ದಲಿತರ ಹಣ ನುಂಗಿ ನಾನು ದಲಿತ ಅಂದರೆ ಬಿಡಬೇಕಾ? ತಪ್ಪು ಮಾಡದಿದ್ದರೆ ಭಯ ಏಕೆ? ಎಂದರು.

ಭ್ರಷ್ಟಾಚಾರ ಮಾಡಿ ಜಾತಿ ಬಣ್ಣ ಬಳಿಯುವುದು ತಪ್ಪುಎಂದಿರುವ ಶೆಟ್ಟರ್‌, ಸಿಎಂಗೆ ಮುಂದೆ ನಡೆಯುವ ದಾಳಿಯ ಬಗ್ಗೆ ಮಾಹಿತಿ ಇದ್ದರೆ ಅವರ ಸಚಿವರು, ಶಾಸಕರು ಮಾಡಿದ ಅಕ್ರಮಗಳ ಕುರಿತು ಅವರಿಗೆ ಮಾಹಿತಿ ಇರಬೇಕು. ಮನಿ ಲ್ಯಾಂಡ್ರಿಂಗ್ ಮತ್ತೊಂದು ವಿಚಾರಗಳು ಅವರಿಗೆ ಗೊತ್ತಿದೆ, ಆ ಕಾರಣಕ್ಕೆ ಶಾಸಕರು, ಸಚಿವರನ್ನು ಎಚ್ಚರಿಸುತ್ತಿರಬಹುದು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಇಡಿ ದಾಳಿ ಆಗಲಿಲ್ಲವೇ? ಎಂದಿರುವ ಶೆಟ್ಟರ್‌, ಕಾಂಗ್ರೆಸ್‌ನವರು ಬಿಜೆಪಿ ಮೇಲೆ ಗೂಬೆ ಕೂಡ್ರೀಸುವುದನ್ನು ಬಿಡಲಿ ಎಂದರು.ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದರಿಂದ ಧಾರವಾಡ-ಬೆಳಗಾವಿ ರೈಲು ಯೋಜನೆಗೆ ಭೂಸ್ವಾಧೀನ ಆದರೂ ರೈತರಿಗೆ ಪರಿಹಾರ ನೀಡಲು ಇವರಿಗೆ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಬರಪೀಡಿತ ಘೋಷಣೆಯಲ್ಲಿ ಬಹಳ ತಾಲೂಕುಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಕಾಟಾಚಾರಕ್ಕೆ ಕೆಲವು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ ಹೊರತು, ಈ ವರೆಗೂ ಬಿಡಿಗಾಸು ಬಿಡುಗಡೆ ಮಾಡದೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸರ್ಕಾರ ರೈತರ ಸಾಲಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡುವುದು, ತಿರುಗಾಡುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ. ಸರ್ಕಾರದ ಖಜಾನೆ ಖಾಲಿ ಮಾಡಿರುವುದೇ ಶಿವಕುಮಾರ ಸಾಧನೆ ಎಂದು ವ್ಯಂಗ್ಯವಾಡಿದರು.