ಶರಣರ ಕಾಯಕ ತತ್ವ ಅಳವಡಿಸಿಕೊಳ್ಳುವುದು ಅಗತ್ಯ

| Published : Aug 20 2024, 12:48 AM IST

ಶರಣರ ಕಾಯಕ ತತ್ವ ಅಳವಡಿಸಿಕೊಳ್ಳುವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹನೀಯರ ಜೀವನ, ಸಂದೇಶ, ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿವೆ ಎಂದು ಚಿತ್ರದುರ್ಗ ತಹಸೀಲ್ದಾರ್ ಡಾ. ನಾಗವೇಣಿ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಮಹನೀಯರ ಜೀವನ, ಸಂದೇಶ, ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿವೆ ಎಂದು ಚಿತ್ರದುರ್ಗ ತಹಸೀಲ್ದಾರ್ ಡಾ. ನಾಗವೇಣಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಶರಣರು ಆಚರಣೆಯ ಮೂಲಕ ತೋರಿಸಿಕೊಟ್ಟ ಕಾಯಕ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರ್. ನುಲೇನೂರು ಗ್ರಾಮದ ನಿವೃತ್ತ ಶಿಕ್ಷಕ ವಿ.ಟಿ. ಚಂದಯ್ಯ ಉಪನ್ಯಾಸ ನೀಡಿ, ಹೊಳಲ್ಕೆರೆ ತಾಲೂಕಿನ ಆರ್. ನುಲೇನೂರಿನಲ್ಲಿ ಚಂದಯ್ಯನವರ ಐಕ್ಯರಾಗಿರುವ ಸಮಾಧಿ ಇದೆ. ಅವರ ಜನ್ಮ ವೃತ್ತಾಂತವನ್ನು ಭಾರತೀಯ ಪುರಾತತ್ವ ಇಲಾಖೆಯು ಸಂಶೋಧನೆಯನ್ನೂ ಮಾಡಿದೆ ಎಂದು ತಿಳಿಸಿದರು.ಮಹನೀಯರ ಜಯಂತಿ ಅಂಗವಾಗಿ ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂದು ಭಾಷಣ ಮಾಡುವವರ ಸಂಖ್ಯೆ ಹೇರಳವಾಗಿದ್ದು, ಕೇಳುವ ಮನಸ್ಸುಗಳು ಕಡಿಮೆಯಾಗಿವೆ. ಭಾಷಣ ಮಾಡುವುದು ಸುಲಭ. ಆದರೆ ಅದರಂತೆ ಜೀವನದಲ್ಲಿ ಅಳವಡಿಸಿಕೊಂಡು ಬದುಕು ನಡೆಸುವುದು ಕಷ್ಟ ಎಂದು ತಿಳಿಸಿದರು.

ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷ ಕೆ. ಕೃಷ್ಣಪ್ಪ ಮಾತನಾಡಿ, ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರಲ್ಲಿ ನಿವೇಶನ ಮಂಜೂರು ಮಾಡುವಂತೆ ಕೋರಿದರು.

ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್, ಕೊರಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಗೌರವಾಧ್ಯಕ್ಷ ಹನುಮಂತಪ್ಪ, ನಗರಸಭೆ ನಾಮನಿರ್ದೇಶನ ಸದಸ್ಯ ಬಿ. ನರಸಿಂಹಮೂರ್ತಿ, ನಗರಸಭೆ ಮಾಜಿ ಸದಸ್ಯ ಗೌರಮ್ಮ, ಮುಖಂಡರಾದ ಜಯಶ್ರೀ, ಪರಮೇಶ್, ಮಹಂತೇಶ್, ಧನಂಜಯ್ ಸೇರಿದಂತೆ ಮತ್ತಿತರರು ಇದ್ದರು. ಚಿತ್ರದುರ್ಗದ ಸುಜೀತ್ ಕುಲಕರ್ಣಿ ಅವರ ತಂಡ ಗೀತಗಾಯನ ನಡೆಸಿಕೊಟ್ಟರು. ಕಲಾವಿದ ಹರೀಶ್ ನಿರೂಪಿಸಿದರು.

ನುಲಿಯ ಚಂದಯ್ಯ ಜಯಂತಿಗೂ ಕೆ.ಸಿ. ನಾರಾಜ್ ಗೂ ಏನು ಸಂಬಂಧ?

ಚಿತ್ರದುರ್ಗ: ಶಾಸಕ ವೀರೇಂದ್ರಪಪ್ಪಿ ಬದಲಾಗಿ ಅವರ ಸಹೋದರ ಕೆ.ಸಿ. ನಾಗರಾಜ್ ಸರ್ಕಾರಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುವ ಪರಿಪಾಟಲು ಮತ್ತೆ ಮುಂದುವರಿದಿದೆ. ಸ್ವತಃ ಜಿಲ್ಲಾಡಳಿತವೇ ಶಾಸಕರ ಬದಲಾಗಿ ಅವರ ಸಹೋದರನಿಗೆ ಕಾರ್ಯನಿರ್ವಹಿಸಲು ಪವರ್ ಆಫ್ ಅಟಾರ್ನಿ ನೀಡಿತಾ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮತ್ತೆ ಸುಳಿದಾಡಿವೆ. ಸೋಮವಾರ ತರಾಸು ರಂಗಮಂದಿರದಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿಯ ಉದ್ಘಾಟನೆಯನ್ನು ಕೆ.ಸಿ. ನಾರಾಜ್ ನೆರವೇರಿಸಿದ್ದಾರೆ. ನಾಗರಾಜ್ ಬರುವ ತನಕ ಅಧಿಕಾರಿಗಳು ಕಾದು, ಅವರ ಕೈಗೆ ದೀಪ ಹಚ್ಚಲು ಮೇಣದ ಬತ್ತಿ ನೀಡಿದ್ದಾರೆ. ಕೆ.ಸಿ.ನಾಗರಾಜ್ ಕೆಡಿಪಿ ಸಭೆಗೆ ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ. ಆ ಸಭೆಗಷ್ಟೇ ಅವರು ಸೀಮಿತವಾಗಬೇಕು. ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವಂತಿಲ್ಲ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಇದು ಸಾಧ್ಯ. ಶಾಸಕರ ಬದಲಾಗಿ ಅವರ ಸಹೋದರ ಸುಲಲಿತವಾಗಿ ಉದ್ಘಾಟನೆ ಮಾಡುತ್ತಾ ಸಾಗಿದ್ದಾರೆ. ಇದರಿಂದ ಶಾಸಕ ವೀರೇಂದ್ರಪಪ್ಪಿಯವರ ಸಹೋದರ ಶಿಷ್ಟಾಚಾರ ಪಾಲನೆಗೆ ಹೊಸ ವ್ಯಾಖ್ಯಾನಗಳನ್ನೇ ನೀಡುತ್ತಿದ್ದಾರಾ ಎಂಬ ಸಂದೇಹಗಳು ಮೂಡುತ್ತಿವೆ.