ಆಧ್ಯಾತ್ಮ ಹಾಗೂ ಪ್ರೇಮ ಕಾವ್ಯಕ್ಕೆ ಯಾವಾಗಲೂ ಸದಾ ಕಥಾ ವಸ್ತು. ವಾಚನ ಮಾಡಿದ ಕವಿತೆಗಳಲ್ಲಿ ಎಲ್ಲ ಕವಿತೆಗಳು ಭಾವನಾತ್ಮಕವಾಗಿವೆ ಅರ್ಥಪೂರ್ಣವಾಗಿವೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಸಾಮಾಜಿಕ ಆರೋಗ್ಯ, ಸಾಮರಸ್ಯ ಕದಡುತ್ತಿರುವ ಇಂದಿನ ದಿನಗಳಲ್ಲಿ ಎಲ್ಲೆಡೆ ಸಾಮರಸ್ಯ ಮೂಡುವ ಅವಶ್ಯಕತೆ ಇದೆ. ಕವಿ ತನ್ನ ಕಾವ್ಯದ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತಾಗಲಿ ಎಂದು ಹಿರಿಯ ಕವಿ ಡಾ.ಮಹಾಂತೇಶ್ ಮಲ್ಲನ ಗೌಡರ್ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್, ಬಹುತ್ವ ಬಳಗ ಹಾಗೂ ಕವಿಸಮೂಹದಿಂದ ಹಮ್ಮಿಕೊಳ್ಳಲಾಗಿದ್ದ ಯುಗಾದಿ,ರಂಜಾನ್ ವಿಶೇಷ ಕವಿಗೋಷ್ಠಿ ಕವಿ ಸಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧ್ಯಾತ್ಮ ಹಾಗೂ ಪ್ರೇಮ ಕಾವ್ಯಕ್ಕೆ ಯಾವಾಗಲೂ ಸದಾ ಕಥಾ ವಸ್ತು. ವಾಚನ ಮಾಡಿದ ಕವಿತೆಗಳಲ್ಲಿ ಎಲ್ಲ ಕವಿತೆಗಳು ಭಾವನಾತ್ಮಕವಾಗಿವೆ ಅರ್ಥಪೂರ್ಣವಾಗಿವೆ. ಈಗ ಯುದ್ಧ ಎಲ್ಲೆಡೆ ಆವರಿಸಿದ್ದು ದೇಶಕ್ಕೆ ದೇಶವೇ ಉರಿದು ಹೋಗುತ್ತಿವೆ. ಇದು ನಿಜಕ್ಕೂ ಮನಸ್ಸಿಗೆ ಆಘಾತ ಉಂಟುಮಾಡುವಂತದ್ದು. ಇದು ಮುಂದುವರೆದರೆ ಇಡೀ ಜಗತ್ತೇ ಬರಡಾಗಲಿದೆ. ಎಲ್ಲರೂ ಸಹೃದಯವಾಗಿ ಬಾಳಬೇಕು. ಕೇವಲ ಕಾವ್ಯದಲ್ಲಿ ಅಷ್ಟೇ ಅಲ್ಲ ಸಾಮಾಜಿಕವಾಗಿಯೂ ಸಹೃದಯತೆ ಬೇಕು. ಸಾಮಾಜಿಕ ಸಾಮರಸ್ಯ ತರಲು ಕವಿಗಳು ತಮ್ಮ ಕಾವ್ಯದ ಮುಖಾಂತರ ಪ್ರಯತ್ನಿಸಬೇಕು ಕಾವ್ಯದ ಮುಖಾಂತರ ಬೆಳಕಿನಡೆಗೆ ಸಾಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾವ್ಯದ ಇತಿಹಾಸ ವಿಸ್ತೃತವಾಗಿ ಚರ್ಚಿಸಿದರು.ಜತೆಗೆ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿತೆಗಳ ಕುರಿತು ಮಾತನಾಡಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಅರುಣ ನರೇಂದ್ರ ಇಶ್ಕ್ ಗೆ ಹಕಿಕಾ ಗಜಲ್,ಸಾವಿತ್ರಿ ಮುಜುಂದರ್ ಕಪ್ಪು,ಶ್ರೀನಿವಾಸ್ ಚಿತ್ರಗ ಬುದ್ದಿ ಕಲಿಸೋಣ, ಅಮರ್ ದೀಪ್ ಎದೆ ಹಾಡಿಗೆ ಧ್ವನಿಯಾಗೋಣ, ಮರೆಯಾಗುವ ಮುನ್ನ, ಶಿವಪ್ರಸಾದ ಹಾದಿಮನಿ ಬಜೆಟ್, ಬಲ್ಡೋಟ ಹಾಗೂ ಸಿರಾಜ್ ಬಿಸರಳ್ಳಿ ನೆಪ, ನಾನು ದೇವರಿಗೆ ಎಲ್ಲ ಹೇಳುತ್ತೇನೆ, ಮಹಾಂತೇಶ್ ಮಲ್ಲನಗೌಡ ಪ್ರಕೃತಿ ಕವಿತೆಗಳನ್ನು ವಾಚನ ಮಾಡಿದರು. ಪರಿಸರ ಉಳಿವಿಗಾಗಿ ನಡೆದಿರುವ ಹೋರಾಟದ ಬಗ್ಗೆ ಮಾತನಾಡಿದರು. ಹೋರಾಟದ ಕವಿತೆಗಳನ್ನು ಒಟ್ಟುಗೂಡಿಸಿ ಕವನ ಸಂಕಲನ ಮಾಡೋಣ ಎಂದು ನಿರ್ಧರಿಸಿದರು.ಸಿರಾಜ್ ಬಿಸರಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀನಿವಾಸ್ ಚಿತ್ರಗಾರ್ ವಂದಿಸಿದರು.