ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ

| Published : Feb 25 2025, 12:49 AM IST

ಸಾರಾಂಶ

ಶಿಕಾರಿಪುರ: ಕ್ಯಾನ್ಸರ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸುವುದು ಇಂದು ತುರ್ತು ಅಗತ್ಯವಿದೆ ಎಂದು ಇಲ್ಲಿನ ಬಾಪೂಜಿ ಇನ್ಸ್‌ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ತಿಳಿಸಿದರು.

ಶಿಕಾರಿಪುರ: ಕ್ಯಾನ್ಸರ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸುವುದು ಇಂದು ತುರ್ತು ಅಗತ್ಯವಿದೆ ಎಂದು ಇಲ್ಲಿನ ಬಾಪೂಜಿ ಇನ್ಸ್‌ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ತಿಳಿಸಿದರು.

ಸೋಮವಾರ ಸಾಹಸ ಮತ್ತು ಸಂಸ್ಕೃತಿ ಅಕಾಡಮಿ ಶಿವಮೊಗ್ಗ, ಆರೋಗ್ಯ ಭಾರತಿ ಜಿಲ್ಲಾ ಘಟಕ, ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ, ಬಾಪೂಜಿ ಎಜುಕೇಷನಲ್ ಸೊಸೈಟಿ, ತೀರ್ಥಹಳ್ಳಿಯ ಎಂಐಒ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಇವರ ಸಹಯೋಗದಲ್ಲಿ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತೆ ಕ್ಯಾನ್ಸರ್‌ ಕಾಯಿಲೆಗೆ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಬೇಕು ಆ ರೀತಿಯಲ್ಲಿ ಜನ ಜಾಗೃತಿಯಾಗಬೇಕು ಎಂದರು.

ತೀರ್ಥಹಳ್ಳಿಯ ಎಮ್.ಐ.ಓ ಕ್ಯಾನ್ಸರ್ ಆಸ್ಪತ್ರೆಯು ಸಾಮಾಜಿಕ ಕಳಕಳಿಯಿಂದ ಸಾರ್ವಜನಿರಲ್ಲಿ, ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್ ತಡೆಗಟ್ಟಲು ಇರುವ ಮಾರ್ಗೋಪಾಯವನ್ನು ತಿಳಿಸಲು ಪ್ರತೀ ತಾಲೂಕಿನಲ್ಲೂ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕ್ಯಾನ್ಸರ್ ಹೊಸ ಖಾಯಿಲೆಯಲ್ಲ, ಅದು ಬಹಲ ಹಿಂದಿನಿಂದ ಇದೆ. ಈಗಲೂ ಇದೆ ಆದರೆ ಇಂದು ಕ್ಯಾನ್ಸರ್ ಎಂದರೆ ಭಯ ಪಡುವ ಅವಶ್ಯಕತೆ ಇಲ್ಲ. ಸುಧಾರಿತ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ರೋಗಿ ಎಲ್ಲರೊಡನೆ ಬೆರೆತು ಜೀವಿಸಬಹುದು ಎಂದು ತಿಳಿಸಿದರು. ಆರೋಗ್ಯ ಸರಿ ಇದ್ದರೆ ನಮ್ಮ ಜೀವನವು ಸರಿಯಾಗಿ ಇರುತ್ತದೆ, ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದರಾಗಿದೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಯ ಶಸ್ತ್ರ ತಜ್ಞ ವೈದ್ಯೆ ಡಾ.ಭವ್ಯ, ಶಿವಮೊಗ್ಗ ಅದ್ವೈತ ಆಯುರ್ವೇದ ಚಿಕಿತ್ಸಾಲಯದ ಡಾ.ಪಲ್ಲವಿ ಕೆ.ಎಸ್, ಶಿವಮೊಗ್ಗ ಸ್ವಾಸ್ಥ್ಯ ಯೋಗ ಮಂದಿರದ ಸುನೀತಾ ರಾಘವೇಂದ್ರ ಆಗಮಿಸಿ ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ವಿ.ಸುರೇಶ್‌, ಆಡಳಿತಾಧಿಕಾರಿ ಪವಿತ್ರ.ಪಿ.ಆರ್., ಸಾಸಮ್ ಖಜಾಂಚಿ ರಾಮಗೋಪಾಲ್ ಉಪಸ್ಥಿತರಿದ್ದರು.

ಮೇಘನ ಮತ್ತು ಶ್ವೇತ ಪ್ರಾರ್ಥಿಸಿದರು. ನಂದೀಶ್ ಸ್ವಾಗತಿಸಿದರು. ಮೇಘರಾಜ್‌ ನಿರೂಪಿಸಿದರು. ಶ್ರೀಧರ್ ವಂದಿಸಿದರು.