ಸಾರಾಂಶ
ಚಿಕ್ಕಮಗಳೂರುದೇಶದ ಜನತೆಗೆ ಅನ್ನ ನೀಡುವ ಅನ್ನದಾತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಅಗತ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
- ಕಾಫಿ ಮಂಡಳಿಯಲ್ಲಿ ರೈತರಿಗೆ ಹಮ್ಮಿಕೊಂಡಿದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಜನತೆಗೆ ಅನ್ನ ನೀಡುವ ಅನ್ನದಾತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಅಗತ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತೋಟಗಾರಿಕೆ ಇಲಾಖೆಯಿಂದ ಬುಧವಾರ ನಗರದ ಕಾಫಿ ಮಂಡಳಿಯಲ್ಲಿ ರೈತರಿಗೆ ತೆಂಗು, ಶುಂಠಿ ಹಾಗೂ ತಾಳೆ ಬೆಳೆಯ ಬೇಸಾಯ ಕ್ರಮ ಹಾಗೂ ರೋಗ ಮತ್ತು ಕೀಟ ನಿಯಂತ್ರಣದ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ರೈತರು ಮಿಶ್ರ ಬೆಳೆ ಬೆಳೆಯುತ್ತಿದ್ದರು. ಅದೇ ರೀತಿ ಈಗಲೂ ಸಹ ಮಿಶ್ರ ಬೆಳೆಗಳನ್ನು ಅವಲಂಬಿಸುವಂತಾದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಬೆಳೆಗಳನ್ನು ಅವಲಂಬಿಸುವ ಕ್ರಮ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತೋಟಗಾರಿಕೆ ಹಾಗೂ ಕೃಷಿ ಬೆಳೆ ಅವಲಂಬಿಸುವ ಜೊತೆಗೆ ಕೃಷಿ ಆಧಾರಿತ ಉದ್ಯಮ ನಡೆಸಲು ಕೇಂದ್ರ ಸರ್ಕಾರದಿಂದ ಸಾಕಷ್ಟು ಸಹಾಯಧನ ಒದಗಿಸಲಾಗುತ್ತದೆ. ಆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ತೋಟಗಾರಿಕೆ ಬೆಳೆಗಳಾದ ಅಡಕೆ, ಟೀ, ತೆಂಗು, ಮೆಣಸು ಇದರ ಜೊತೆಗೆ ಹೊಸ ಹೊಸ ತೋಟಗಾರಿಕೆ ಬೆಳೆಗಳ ಬಗ್ಗೆ ಇಲಾಖೆಯಿಂದ ಮಾಹಿತಿ ನೀಡುವ ಪ್ರಯತ್ನ ಮಾಡಬೇಕು. ತೋಟಗಾರಿಕೆ ಬೆಳೆ ಜೊತೆಗೆ ಉಪ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದ ಅವರು, ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ತಗಲುವ ರೋಗಗಳಿಗೆ ಕಾಲ ಕಾಲಕ್ಕೆ ಕೈಗೊಳ್ಳಬೇಕಾದ ಔಷಧಿ ಸಿಂಪಡಣೆ ಹಾಗೂ ರಸಗೊಬ್ಬರ ಬಳಕೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಇಂಥ ವಿಚಾರ ಸಂಕಿರಣಗಳನ್ನು ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸದೇ ಗ್ರಾಮ ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ನಡೆಸಿದರೆ ಅಲ್ಲಿನ ರೈತರಿಗೂ ಅನುಕೂಲವಾಗಲಿದೆ ಎಂದರು.ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದರಲ್ಲಿ ಮುಖ್ಯವಾದ ಬೆಳೆ ಅಡಕೆ ಮತ್ತು ತೆಂಗು. ಈ ಬೆಳೆಗಳಿಗೆ ರೈತರು ಹೆಚ್ಚು ಅವಲಂಬಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆ ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಈ ಹಿಂದೆ ಅಡಕೆ ಬೆಳೆಯಲ್ಲಿ ಕಡಿಮೆ ಹಾನಿ ಉಂಟು ಮಾಡುತ್ತಿದ್ದ ರೋಗಗಳು ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದ ರೋಗಗಳು ಹೆಚ್ಚಿನ ಅಧಿಕ ಹಾನಿಯನ್ನುಂಟು ಮಾಡುತ್ತಿವೆ. ಅವುಗಳಲ್ಲಿ ಎಲೆ ಚುಕ್ಕೆ ರೋಗವು ಪ್ರಮುಖವಾಗಿದ್ದು, ಮಲೆನಾಡಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದು ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗುತ್ತಿದೆ. ಈ ರೋಗದಿಂದ ಅಡಕೆ ಇಳುವರಿ ಕುಂಠಿತವಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮ ಕೈಗೊಳ್ಳುವ ಬಗ್ಗೆ ಕಾರ್ಯಾಗಾರದ ಮುಖಾಂತರ ರೈತರಿಗೆ ಅರಿವು ಮೂಡಿಸ ಲಾಗುತ್ತದೆ ಎಂದು ಹೇಳಿದರು.ಕಾರ್ಯಾಗಾರದಲ್ಲಿ ದಿಶಾ ಸಮಿತಿ ಸದಸ್ಯ ಎಚ್.ಸಿ. ಕಲ್ಮರುಡಪ್ಪ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಾದ ಡಾ.ಸುರೇಶ್, ಡಾ.ಸುಚಿತ್ರ ಕುಮಾರಿ, ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ರೈತ ಸಂಘದ ಮುಖಂಡ ಬಸವರಾಜು ಭಾಗವಹಿಸಿದ್ದರು.23 ಕೆಸಿಕೆಎಂ 3ಚಿಕ್ಕಮಗಳೂರಿನ ಕಾಫಿ ಮಂಡಳಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಬುಧವಾರ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಕಲ್ಮರುಡಪ್ಪ, ಡಾ. ಸುರೇಶ್ ಇದ್ದರು.