ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮಹಾ ಮಂಡಲದ ಟಿಯುಸಿಸಿ ಸಂಘಟನೆಯ ೨೦೧೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಮಹಿಳಾ ದಿನಾಚರಣೆ ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಶನಿವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮಹಾ ಮಂಡಲದ ಟಿಯುಸಿಸಿ ಸಂಘಟನೆಯ ೨೦೧೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಮಹಿಳಾ ದಿನಾಚರಣೆ ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲ್ಲಾಖೆಯ ಸಹಾಯಕ ನಿರ್ದೇಶಕಿ ಶ್ರೀದೇವಿ ಬಿ. ಮುದೋಳ ಉದ್ಘಾಟಿಸಿದರು. ನಂತರ ಮಾತನಾಡಿ, ಸರ್ಕಾರಿ ಕೆಲಸ ಮಾಡುವ ಸಂದರ್ಭ ಎಲ್ಲರೂ. ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ನಮಗೆ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯ, ಯಾವುದೇ ಇಲಾಖೆಯಲ್ಲಿ ಮೇಲಧಿಕಾರಿಗಳ ಸಹಕಾರದೊಂದಿಗೆ ಎಲ್ಲರೂ ಕೆಲಸ ಮಾಡಬೇಕಿದ್ದು, ಒತ್ತಡದಿಂದ ನಿರಂತರವಾಗಿ ಕೆಲಸ ಮಾಡಬೇಕಿದೆ. ಇದರಿಂದಾಗಿ ನಮಗೆ ಮತ್ತು ಕುಟುಂಬಕ್ಕೆ ಸಮಯ ವಿನಿಯೋಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದರು. ಎಲ್ಲೆಡೆ ಅಂಗನವಾಡಿಗಳು ಎಲ್ಲ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಕೇಂದ್ರವಾಗಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿವೆ. ಅದಕ್ಕಾಗಿ ಚಿಕ್ಕ ಮಕ್ಕಳನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿರುವ ಅಂಗನವಾಡಿಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿವರೆಗಿನ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಇದರೊಂದಿಗೆ ತರಗತಿ ನಡೆಸಲು ಎಲ್ಲ ರೀತಿಯ ಸವಲತ್ತುಗಳನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು. ಅಂಗನವಾಡಿ ನಿವೃತ್ತ ಶಿಕ್ಷಕಿ ಶಾರದಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಊರಿನ ತಾಯಿಯಾಗಿ ಕೆಲಸ ಮಾಡಬೇಕು. ನಮ್ಮ ಅವಧಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ವಂತ ಮನೆಗಳಂತೆ ನಿರ್ವಹಿಸುತಿದ್ದೆವು. ಗರ್ಭಿಣಿ, ಬಾಣಂತಿಯರು, ಮಕ್ಕಳು ಸೇರಿದಂತೆ ಎಲ್ಲರ ಸೇವೆಯನ್ನು ಮಾಡಲಾಗುತ್ತಿದೆ. ಯಾವುದೇ ಶಿಕ್ಷಕಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮೇಲಧಿಕಾರಿಗಳಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ಹಿಂದೆ ಬಹಳ ಕಡಿಮೆ ಸಂಖ್ಯೆಯಲ್ಲಿದ್ದ ಅಂಗನವಾಡಿ ಕೇಂದ್ರಗಳು ದಿನ ಕಳೆದಂತೆ ಎಲ್ಲೆಡೆ ಹೆಚ್ಜಾಗಿವೆ. ಊರಿನವರೊಂದಿಗೆ ಹೊಂದಾಣಿಕೆಯಿಂದ ನಮ್ಮ ಕೇಂದ್ರದ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಕೆಲಸ ಮಾಡಿದರೆ ಮಾತ್ರ ನಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀದೇವಿ ಬಿ. ಮುದೋಳ, ಸಾವಿತ್ರವ್ವ ಮರಿಗೌಡ ಹಾಗೂ ನಿವೃತ್ತ ಅಂಗನವಾಡಿ ಶಿಕ್ಷಕಿ ಕೆ.ಕೆ. ಶಾರದಾ ಅವರನ್ನು ಸನ್ಮಾನಿಸಲಾಯಿತು.ಟಿಯುಸಿಸಿ ತಾಲ್ಲೂಕು ಘಟಕದ ಅಧ್ಯಕ್ಷೆ ಧನಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಟಿಯುಸಿಸಿ ಉಪಾಧ್ಯಕ್ಷೆ ಜಯ, ಪ್ರಧಾನ ಕಾರ್ಯದರ್ಶಿ ತಾರಾ ಲೋಬೋ, ಖಜಾಂಚಿ ಗೀತ ಇದ್ದರು.