ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಸಮಾವೇಶವು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ಜೆಡಿಎಸ್ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಬೇಡವೆ? ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಮಾಜಿ ಶಾಸಕರುಗಳಿಂದ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಡಿಸೆಂಬರ್ ೫ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆದ ಹಿನ್ನೆಲೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಜೆಡಿಎಸ್ ತಿರುಗೇಟು ನೀಡಿದರು. ಹಾಸನದಲ್ಲಿ ನಡೆದದ್ದು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರು ಜಿಲ್ಲೆಗೆ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕಿತ್ತು. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಬಗ್ಗೆ ಒಂದೆ ಒಂದು ಮಾತನಾಡಿಲ್ಲ. ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಬೇಡವೆ? ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಅಂತಾರೆ. ಬಾಣಂತಿಯರ ಸಾವು ಆಗಿರುವುದು ಇದು ಯಾರಿಗೆ ಅನ್ಯಾಯ? ಮಹಿಳೆಯರು ಮಕ್ಕಳಿಗೆ ಮಾಡಿದ ಅನ್ಯಾಯ ಅಲ್ಲವೇ. ಎಲ್ಲಾ ಇಲಾಖೆ ಆಡಳಿತ ಇಲ್ಲಾ ಸರ್ಕಾರ ಸತ್ತು ಹೋಗಿದೆ. ಈ ಸಮಾವೇಶ ಅಕ್ಷ್ಯಮ್ಯ ಎಂದು ವಾಗ್ದಾಳಿ ನಡೆಸಿದರು.
ಉಪ ಚುನಾವಣೆ ಫಲಿತಾಂಶ ಆಡಳಿತ ಪಕ್ಷದ ಪರ ಬರೋದು ಸಾಮಾನ್ಯ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಬಗ್ಗೆ ಸಿಎಂ ಅವರೇ ಹಗರಣ ಒಪ್ಪಿಕೊಂಡಿದ್ದಾರೆ. ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನ ಕುರುಡರಿಲ್ಲ, ೨೫ ವರ್ಷದಿಂದ ಇರೋ ಪಕ್ಷವನ್ನು ಕಿತ್ತೊಗೆಯೊದಾಗಿ ಹೇಳ್ತಾರೆ. ಅವರು ಆರು ಜಿಲ್ಲೆಯಿಂದ ಅಷ್ಟು ಜನ ಸೇರಿಸಿದ್ದಾರೆ. ನಾವು ಒಂದೇ ಜಿಲ್ಲೆಯಿಂದ ಅಷ್ಟು ಜನ ಸೇರಿಸ್ತೀವಿ. ಲೋಕಸಭಾ ಅಧಿವೇಶನ ಮುಗಿಯಲಿ, ನಮ್ಮ ಕುಮಾರಸ್ವಾಮಿ ಬರ್ತಾರೆ ನಾವೂ ರಾಜಕೀಯ ಸಮಾವೇಶ ಮಾಡ್ತೇವೆ ಎಂದು ತಿರುಗೇಟು ನೀಡಿದರು. ಇದೆಲ್ಲ ಬಿಡಿ ಇನ್ನು ಮುಂದಾದರೂ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಸುಳ್ಳು ಆಪಾದನೆ ಬಿಡಲಿ, ನಮ್ಮ ನಾಯಕರನ್ನ ನಿಂದಿಸಿರುವುದರ ವಿರುದ್ಧ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.ಬಾಯಿ ಮುಚ್ಚಿಸುತ್ತಿದ್ದಾರೆ: ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ಮಾತುಗಳನ್ನ ನೋಡಿದ್ರೆ ಇದು ಕೇವಲ ನಿಂದನೆಗೆ ಮಾಡಿದ ಸಮಾವೇಶವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ತಾವು ಮಾಡಿದ ಅಭಿವೃದ್ಧಿ ಏನೆಂದು ಹೇಳಬೇಕಿತ್ತು. ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ನಾಯಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಸಮಾಧಾನ ಹೊರ ಹಾಕಿದವರ ಬಾಯಿ ಮುಚ್ಚಿಸೋ ಕೆಲಸ ಆಗ್ತಿದೆ. ಹಿಂದುಳಿದ ವರ್ಗಗಳಿಗೆ ನಾಮ್ಕಾವಸ್ತೆ ನಿಗಮ ಮಾಡಿದ್ದಾರೆ. ಯಾವುದೇ ನಿಮಗಳಿಂದ ಆ ಸಮುದಾಯಕ್ಕೆ ಉಪಯೋಗ ಆಗ್ತಿಲ್ಲ ಎಂದರು.
ಸಮಾವೇಶದಲ್ಲಿ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಈ ದೇಶಕ್ಕೆ ದೇವೇಗೌಡರಿಂದ ಅವರದೇ ಆದ ಕೊಡುಗೆ ಇದೆ. ಅವರು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಎಲ್ಲಾ ಸಮುದಾಯದ ಜನರನ್ನು ಬೆಳೆಸಿದವರು ದೇವೇಗೌಡರು. ಸಾಲ ಮನ್ನಾ ಮಾಡೋ ತೀರ್ಮಾನ ಮಾಡೊ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ಅವರು ಕೊಟ್ಟ ಯೋಜನೆಯಿಂದ ನಾವು ಮತ್ತೆ ಶಾಸಕರಾಗಿರೊದೆ ಸಾಕ್ಷಿ ಎಂದರು. ಮೆಡಿಕಲ್ ಎಂಜಿನಿಯರಿಂಗ್ ಕಾಲೇಜು, ದೇಶದ ದೊಡ್ಡ ಬಸ್ ನಿಲ್ದಾಣ, ಹೈಕೋರ್ಟ್ ಮಾದರಿಯ ಕೋರ್ಟ್ ಸಮುಚ್ಛಯದ ಬಗ್ಗೆ ಹೇಳಿ ದೇವೇಗೌಡರ, ಕುಮಾರಸ್ವಾಮಿ ಅವರ ಕೆಲಸದ ಸಾಕ್ಷಿ ಗುಡ್ಡೆ ಎಲ್ಲಿದೆ ಎಂದಿದ್ದ ಡಿಸಿಎಂಗೆ ಜೆಡಿಎಸ್ ನಾಯಕರು ತಿರುಗೇಟು ಕೊಟ್ಟರು.ನಮ್ಮ ಪಕ್ಷ ಗಟ್ಟಿಯಾಗಿದೆ: ನಮ್ಮ ಅವಧಿಯಲ್ಲಿ ಆಗಿರೊ ಕಟ್ಟಡಕ್ಕೆ ಇವರು ಸುಣ್ಣ ಬಣ್ಣ ಬಳಿಯಲು ಆಗಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ದೇವೇಗೌಡರ ೫೫ ವರ್ಷಗಳ ರಾಜಕೀಯದಲ್ಲಿ ಹಳ್ಳಿ ಹಳ್ಳಿಯಲ್ಲಿ ಸಾಕ್ಷಿ ಗುಡ್ಡೆ ಇದೆ. ಬೇಕಿದ್ದರೆ ಬರಲಿ ತೋರಿಸೋಣ. ಗ್ಯಾರಂಟಿ ಬಗ್ಗೆ ನಮ್ಮ ಅಪಸ್ಚರ ಇಲ್ಲ. ಆದರೆ ಅಭಿವೃದ್ಧಿ ಮಾಡಲಿ. ನಾವು ಬಿಜೆಪಿ ಅಣ್ಣ ತಮ್ಮರಂತೆ ಹೋಗ್ತಾ ಇದ್ದೀವಿ. ಮುಂದೆ ರಾಜ್ಯದಲ್ಲಿ ಜನರು ಎನ್ಡಿಎ ಪರ ಇರ್ತಾರೆ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ನಮಗೆ ಯಾವುದೇ ಆತಂಕ ಇಲ್ಲ ಎಂದರು.
ತಿರುಕನ ಕನಸು: ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಡಿಸೆಂಬರ್ ೫ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಾಸನ ಡೀಸಿ ಕಾಣಿಸಿಕೊಂಡ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ತೇವೆ ಎಂದು ಕೈ ನಾಯಕರು ಹೇಳಿದ್ದಾರೆ. ಅವರ ಈ ಮಾತು ತಿರುಕನ ಕನಸು ಎಂದು ವಾಗ್ದಾಳಿ ನಡೆಸಿದರು. ಸಿಎಂ ಹಗರಣ ಮುಚಿ ಹಾಕಲು ಈ ಸಮಾವೇಶ ಮಾಡಲಾಗಿದ್ದು, ಇದೊಂದು ರೀತಿಯಲ್ಲಿ ಹೇಳುವುದಾದರೇ ಕೊಲೆ ಮಾಡಿದವನನ್ನು ಖುಲಾಸೆ ಮಾಡಿದಂತೆ. ಈ ಇಳಿವಯಸ್ಸಿನಲ್ಲೂ ದೇವೇಗೌಡರು ಜಿಲ್ಲೆ ಮತ್ತು ರಾಜ್ಯದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ವಕ್ತಾರರಾದ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.* ಬಾಕ್ಸ್: ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ
ಹಾಸನ ಡೀಸಿ ಅವರು ಒಂದು ಪಕ್ಷದ ವಕ್ತಾರರಂತೆ ನಡೆದುಕೊಂಡಿದ್ದಾರೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಪಕ್ಷದ ಸಮಾವೇಶ ತಯಾರಿಯಲ್ಲಿ ಡೀಸಿಗೆ ಏನು ಕೆಲಸ? ಸಿಎಂ ಮತ್ತು ಡಿಸಿಎಂ ಬಂದಾಗ ಎಲೆಪ್ಯಾಡ್ನಲ್ಲಿ ಸ್ವಾಗತ ಮಾಡಬೇಕು, ಆದರೆ ಸಮಾವೇಶದ ಹತ್ತಿರ ಹೋಗುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡಿದರು. ಅವರು ಒಂದು ಪಕ್ಷದ ಜೀತದಾಳುವೆ ಎಂದರು. ರಾಜಣ್ಣ ಅವರು ಈ ಜಿಲ್ಲೆಗೆ ಹಾಕಿಸಿದ್ದಾರೆ ಎಂದು ಎಲ್ಲವನ್ನೂ ಹೇಳಿದಂತೆ ಕೇಳಬೇಕಾ! ಉಸ್ತುವಾರಿ ಸಚಿವ ರಾಜಣ್ಣ ಹಾಗು ಡೀಸಿ ಅದಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.