ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ನಾಡಿನ ಇತಿಹಾಸ, ಭಾಷೆ, ಕಲೆ ಮತ್ತು ಸಂಸ್ಕೃತಿಗೆ ಭವ್ಯ ಪರಂಪರೆ ಇದೆ. ನಾಡಿನ ಪರಂಪರೆಯ ಅನನ್ಯತೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೆಯಕ್ಷಣಾಧಿಕಾರಿ ಕೆ.ಎ.ಶಾಲಿನಿ ತಿಳಿಸಿದರು.ತಾಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ನಾಡು, ನುಡಿ ವಿಚಾರದಲ್ಲಿ ಅಭಿಮಾನ ಇರಬೇಕು. ಕನ್ನಡ ಭಾಷೆ ಎಲ್ಲಾ ವಲಯಗಳಲ್ಲಿ ಬಳಕೆಯಾಗಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮ ಕ್ಷೇತ್ರದಲ್ಲೂ ಕನ್ನಡ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯು ವೈವಿಧ್ಯಮಯಲ್ಲೂ ಏಕತೆಗೆ ಹೆಸರಾಗಿದೆ. ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ನೃತ್ಯ ಮುಂತಾದ ಸಾಂಸ್ಕೃತಿಕ ಕಲಾ ಪ್ರಕಾರಗಳು ಕನ್ನಡಿಗರ ಗೌರವವನ್ನು ಎಲ್ಲೆಡೆ ಹರಡಿವೆ ಎಂದರು.
ಪ್ರಾಂಶುಪಾಲ ಆರ್. ಚಕ್ರವರ್ತಿ ಮಾತನಾಡಿ, ಕನ್ನಡ ಕವಿಗಳು ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದ್ದಾರೆ. ಜನಪದರು, ವಚನಕಾರರು, ಹರಿದಾಸರು, ಅನುಭವಿ ಸಂತರು ಉದಾತ್ತ ವಿಚಾರಗಳನ್ನು ಜನರಿಗೆ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ ಎಂದರು.ವಿದ್ಯಾರ್ಥ ಅಭಿರಾಮ ಮಾತನಾಡಿದರು. ಜವಾಹರ ನವೋದಯ ವಿದ್ಯಾಲಯ ಉಪಪ್ರಾಂಶುಪಾಲ ಜಯಕೃಷ್ಣನ್, ಕನ್ನಡ ಅಧ್ಯಾಪಕರಾದ ಜೆ.ಪಿ.ಉಪಾಧ್ಯೆ, ಈರಣ್ಣಸಬರದ ಮತ್ತು ವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ವಿದ್ಯಾರ್ಥಿಗಳಿಂದ ಕನ್ನಡ ಸಮೂಹಗೀತೆ, ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಫೋಟೋ-12ಕೆಡಿಬಿಪಿ2-
ದೊಡ್ಡಬಳ್ಳಾಪುರ ತಾಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ಸಪ್ತಾಹ ಕಾರ್ಯಕ್ರಮ ನಡೆಯಿತು.