ಕನ್ನಡ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಶ್ರೀ ಮರುಳಸಿದ್ಧ ಸ್ವಾಮೀಜಿ

| Published : Nov 30 2023, 01:15 AM IST

ಕನ್ನಡ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಶ್ರೀ ಮರುಳಸಿದ್ಧ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಶ್ರೀ ಮರುಳಸಿದ್ಧ ಸ್ವಾಮೀಜಿ

ಬಸವತತ್ವ ಪೀಠದ ಸಂಸ್ಥಾಪಕ ಬಸವಮಂದಿರದ ಶ್ರೀ ಮ.ನಿ.ಪ್ರ ಜಯಚಂದ್ರಶೇಖರ ಸ್ವಾಮೀಜಿ 28ನೇ ಸಂಸ್ಮರಣೆ ಶಿವಾನುಭವಗೋಷ್ಠಿ

- ನಾಡಿಗೆ ಶ್ರೀಗಳ ಬಸವತತ್ವ ಪ್ರಚಾರದ ದೊಡ್ಡ ಕೊಡುಗೆ- ನಮ್ಮ ಭಾಷೆಯನ್ನು ಹೆಮ್ಮೆಯಿಂದ ಕಲಿಯಬೇಕು- ಕನ್ನಡವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶರಣರು ಜನಭಾಷೆಯನ್ನು ಧರ್ಮದ ಭಾಷೆಯನ್ನಾಗಿ, ದೇವರ ಭಾಷೆಯನ್ನಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ್ದಾರೆ ಬಸವ ಮಂದಿರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ನಗರದ ಬಸವತತ್ವ ಪೀಠದ ಸಂಸ್ಥಾಪಕ ಬಸವಮಂದಿರದ ಶ್ರೀ ಮ.ನಿ.ಪ್ರ ಜಯಚಂದ್ರಶೇಖರ ಸ್ವಾಮೀಜಿ 28ನೇ ಸಂಸ್ಮರಣೆಯ ಶಿವಾನುಭವಗೋಷ್ಠಿಯ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಕನ್ನಡದಲ್ಲಿ ಧರ್ಮ, ಕನ್ನಡದಲ್ಲಿ ಆಧ್ಯಾತ್ಮ, ಕನ್ನಡದಲ್ಲಿ ತತ್ವ, ಕನ್ನಡದಲ್ಲಿ ಮೌಲ್ಯಗಳು ಜನರಿಗೆ ಅರ್ಥ ವಾಗುವ ರೀತಿಯಲ್ಲಿ ಮಾಡಿಕೊಟ್ಟ ಪರಂಪರೆ ನಮ್ಮದು. ಈ ನಾಡಿಗೆ ಶ್ರೀಗಳು ಬಸವತತ್ವ ಪ್ರಚಾರದ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳು, ಕಲ್ಯಾಣ ಕಾರ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ಇಂದು ಕೆಲವು ಆಚರಣೆಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗಿ ನಮ್ಮ ತತ್ವ, ತಾತ್ವಿಕತೆಯನ್ನು ಮರೆಯುತ್ತಿರುವುದು ವಿಷಾದನೀಯ. ನಮ್ಮ ಸಂಪ್ರದಾಯ ಮರೆಯಬಾರದು. ಈ ತಿಂಗಳು ಕರ್ನಾಟಕ ರಾಜ್ಯೋತ್ಸವ ಆಚರಣೆ ಆಗಿರುವುದರಿಂದ ಇಂತಹ ಕನ್ನಡ ಕಾರ್ಯಕ್ಕೆ ಒತ್ತು ನೀಡಬೇಕು. ಹೆಸರಾಯಿತು ಕನ್ನಡ, ಉಸಿರಾಯಿತು ಕನ್ನಡ ಎಂದು ಅಂದೆ ಕವಿಗಳು ಹೇಳಿದ್ದರು. ಆದರೆ, ಇಂದು ಕನ್ನಡವನ್ನು ಮರೆಯುತ್ತಿದ್ದೇವೆ ಎಂದರು.

ಕನ್ನಡವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ನೆಲದ ಭಾಷೆಯನ್ನು ಹೆಮ್ಮೆಯಿಂದ ಬಳಸಿಕೊಂಡು ಕಲಿಯಬೇಕು. ಹಾಗೆಂದು ಬೇರೆ ಭಾಷೆ ವಿರೋಧಿಯಲ್ಲ, ಸಾವಿರ ಭಾಷೆ ಕಲಿಯಿರಿ ಆದರೆ ನಮ್ಮ ಮಾತೃಭಾಷೆ ಮರೆಯಬೇಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಉಪಾಧ್ಯಕ್ಷ ಗಿರೀಶ್, ಸಂಘದ ನಿರ್ದೇಶಕರಾದ ಓಂಕಾರಪ್ಪ, ಜಗದೀಶ್, ಯೋಗಾನಂದ, ಹೇಮಂತ್ ಕುಮಾರ್, ನಂದೀಶ್, ಬಿ.ಸಿ. ಭಾರತಿ, ತನುಜಾ ರಾಜೇಶ್, ಶಿವಕುಮಾರ್, ಓಂಕಾರಸ್ವಾಮಿ, ವೀರೇಶ್ ಉಪಸ್ಥಿತರಿದ್ದರು. ಜಯ ಚೆನ್ನೆಗೌಡ ಉಪನ್ಯಾಸ ನೀಡಿದರು.

ಶ್ರೀ ಬಸವ ಕಲಾ ಲೋಕ ದಾವಣಗೆರೆ ವಚನ ಗಾಯನ ನಡೆಸಿಕೊಟ್ಟರು. ಕ್ರೀಡಾಪಟು ಲೋಕೇಶ್ ಅವರನ್ನು ಮಠದಿಂದ ಸನ್ಮಾನಿಸಲಾಯಿತು. ನಳಿನ ನಿರಂಜನ್ ಕಾರ್ಯಕ್ರಮ ನಿರೂಪಿಸಿದರು. 29 ಕೆಸಿಕೆಎಂ 2

ಚಿಕ್ಕಮಗಳೂರಿನ ಬಸವತತ್ವ ಪೀಠದ ಸಂಸ್ಥಾಪಕ ಬಸವಮಂದಿರದ ಶ್ರೀ ಮ.ನಿ.ಪ್ರ ಜಯ ಚಂದ್ರಶೇಖರ ಸ್ವಾಮೀಜಿ ಸಂಸ್ಮರಣೆಯ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘದ ಪದಾಧಿಕಾರಗಳನ್ನು ಗೌರವಿಸಲಾಯಿತು.