ಸಾರಾಂಶ
ಬುದ್ಧ, ಬಸವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಭಾರತವನ್ನು ಜಗತ್ತಿನ ಇತರೆ ದೇಶಗಳು ಇಂದಿಗೂ ಬುದ್ಧನ ನಾಡು ಎಂದೇ ಗುರುತಿಸುತ್ತವೆ. ಬುದ್ಧ ಕೇವಲ ನೆನಪಲ್ಲ, ಅವನು ಸಮಾಜದ ಶಕ್ತಿಯ ಸೂಚಕ. ಅಹಿಂಸೆ ಮತ್ತು ಕರುಣೆಯ ಸಮಾಜವನ್ನು ಗೌತಮ ಬುದ್ಧನು ಬಯಸಿದ್ದನು.
ಶಿರಾ: ಕ್ರೌರ್ಯ, ಮೌಢ್ಯ ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ದಾರಿ ತೋರಿದವನು ಗೌತಮ ಬುದ್ಧ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿ ಕುಮಾರ್ ಹೇಳಿದರು.
ನಗರದ ಸಮತಾ ಸೈನಿಕ ಶಾಲೆ, ತರಬೇತಿ ಕೇಂದ್ರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೌತಮ ಬುದ್ಧನ ಸಂದೇಶಗಳು ಸರ್ವಕಾಲಿಕ ಹಾಗೂ ಸದಾ ಅನುಕರಣೀಯ. ಸಮಾಜದಲ್ಲಿ ದೇವರು, ಧರ್ಮದ ಬಗ್ಗೆ ಮಾತನಾಡುತ್ತಿದ್ದಾಗ, ಗೌತಮ ಬುದ್ದನು ಮನುಷ್ಯನ ಬಗ್ಗೆ ಮಾತಾಡಿ ಮಾನವ ಬದುಕಿಗೆ ಘನತೆ ತಂದು ಕೊಟ್ಟನು ಎಂದರು.ಮುಖ್ಯ ಶಿಕ್ಷಕ ರಾಮರಾಜ್ ಮಾತನಾಡಿ, ಬುದ್ಧ, ಬಸವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಭಾರತವನ್ನು ಜಗತ್ತಿನ ಇತರೆ ದೇಶಗಳು ಇಂದಿಗೂ ಬುದ್ಧನ ನಾಡು ಎಂದೇ ಗುರುತಿಸುತ್ತವೆ. ಬುದ್ಧ ಕೇವಲ ನೆನಪಲ್ಲ, ಅವನು ಸಮಾಜದ ಶಕ್ತಿಯ ಸೂಚಕ. ಅಹಿಂಸೆ ಮತ್ತು ಕರುಣೆಯ ಸಮಾಜವನ್ನು ಗೌತಮ ಬುದ್ಧನು ಬಯಸಿದ್ದನು ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಲನಾ ಸಮಿತಿಯ ಸಂಚಾಲಕ ಎಸ್.ರಂಗರಾಜ್, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಶಿರಾ ನಗರಸಭೆ ಆಶ್ರಯ ಸಮಿತಿ ಸದಸ್ಯೆ ಜಯಲಕ್ಷ್ಮೀ, ಶಿರಾ ತಾಲೂಕು ಮಹಿಳಾ ಸಂಚಾಲಕಿ ಯಲಿಯೂರು ಶಿವಮ್ಮ, ಉಪನ್ಯಾಸಕ ಶಂಕರ್, ನಿವೃತ್ತ ಪ್ರಾಂಶುಪಾಲರು ಹಾಗೂ ನಿರ್ಮಾಪಕ ಡಿ.ಎಸ್.ಕೃಷ್ಣಮೂರ್ತಿ, ನರಸಿಂಹಮೂರ್ತಿ, ರಾಜೇಂದ್ರ ಪ್ರಸಾದ್, ಲೋಕೇಶ್, ಸಾಹಿತಿ ರಮೇಶ್, ಮೂರ್ತಿ, ನವೀನ್ ಬೌದ್ಧವಂಶಿ, ಶಿವಮ್ಮ, ಕಿಟ್ಟಪ್ಪ, ಕಾಂಗ್ರೆಸ್ ಯುವ ಮುಖಂಡ ಲೋಕೇಶ್ ಸೇರಿ ಹಲವರು ಹಾಜರಿದ್ದರು.