ಸಾರಾಂಶ
ಕೆಲ್ಲೋಡು ಸಮೀಪದ ಕನಕ ಮಠದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಕನಕ ಹುಣ್ಣಿಮೆ ಕಾರ್ಯಕ್ರಮವನ್ನು ಶಾಸಕ ಬಿ.ಜಿ ಗೋವಿಂದಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ, ಧಾರ್ಮಿಕ ಸ್ವಾತಂತ್ರ್ಯ ಕೂಟ್ಟಿದ್ದು ಹಾಲುಮತ ಧರ್ಮ ಮತ್ತು ಗುರು ರೇವಣಸಿದ್ದರು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.ತಾಲೂಕಿನ ಕೆಲ್ಲೋಡು ಸಮೀಪದ ಕನಕಧಾಮದಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಕನಕ ಹುಣ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅತಿದೊಡ್ಡ ಪರಂಪರೆಯನ್ನು ಹೊಂದಿರುವ ಗುರು ರೇವಣಸಿದ್ದ ಪರಂಪರೆ ಜಗತ್ತಿಗೆ ಅನೇಕ ವಿಸ್ಮಯಗಳನ್ನು ತೋರಿಸಿಕೊಟ್ಟಿದೆ.ಇಡೀ ಭಾರತದಲ್ಲಿ ಮಹಿಳೆಯರು ಹಾಗೂ ಒಡೆಯರ್ಗಳು ಮದುವೆ ಮಹೂರ್ತಗಳನ್ನು ಮಾಡುವುದು ನಮ್ಮ ಸಮುದಾಯದಲ್ಲಿ ಮಾತ್ರ ಎಂದು ಹೇಳಿದರು.
ಅಮೋಘಸಿದ್ದ ಪರಂಪರೆ, ಬೀರದೇವರ ಪರಂಪರೆ, ಮಾಳಿಂಗರಾಯ ಪರಂಪರೆ ಎಲ್ಲವೂ ದೊಡ್ಡ ಹಿನ್ನೆಲೆಯನ್ನು ಹೊಂದಿವೆ. ಭಾರತದಲ್ಲಿ ಶೈವ ಸಿದ್ಧಾಂತವನ್ನು ಉತ್ತುಂಗ ಶಿಖರಕ್ಕೆ ಏರಿಸಿದವರು ರೇವಣಸಿದ್ದರು. ಈ ದೇಶದ ಎಲ್ಲ ಪರಂಪರೆಗೆ ರೇವಣಸಿದ್ದರೆ ಮೂಲ ಗುರುಗಳು. ರೇವಣಸಿದ್ದರ ಪರಂಪರೆಯಿಂದ ಬಂದಿರುವ ನಾವು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯಬೇಕು ಎಂದರು.ಶಾಸಕ ಬಿ.ಜಿ.ಗೋವಿಂದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀಮಠದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಗಿದೆ ಏಕಶಿಲಾ ಮೂರ್ತಿ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕಾರ್ಯಗಳು ಮುಂದಿನ ವರ್ಷದಲ್ಲಿ ನೆರವೇರಲಿದೆ ಎಂದು ಹೇಳಿದರು.
ಸಾಹಿತಿ ಗಂಗಾಧರ ಕೊಡ್ಲಿಯವರು ಕುರುಬರ ಕುಲಗುರು ಗುರುರೇವಣಸಿದ್ದರು ವಿಷಯವಾಗಿ ಉಪನ್ಯಾಸ ನೀಡಿದರು.ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಂಜುನಾಥ್, ಸೋಮಶೇಖರ್, ಕಾರೇಹಳ್ಳಿ ಬಸವರಾಜ್, ಮಹಂತೇಶ್, ಎಮ್.ಆರ್.ಸಿ.ಮೂರ್ತಿ, ಕೆ.ಅನಂತ್, ಎಮ್.ಹೆಚ್.ಕೃಷ್ಣಮೂರ್ತಿ, ವಿ.ಗಂಗಾಧರ್, ಮೆಣಸಿನಡು ದೇವರಾಜ್, ಹುಣವಿನಡು ವೆಂಕಟೇಶ್, ಶಿವರಾಜ್ಕುಮಾರ್ ಹಾಗೂ ಇತರರು ಇದ್ದರು.