ಸಾರಾಂಶ
ನವತೇಜ ಪುತ್ತೂರು ಸಂಘಟನೆಯ ನೇತೃತ್ವದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಜೂನ್ ೬ರಿಂದ ೮ರ ತನಕ ನಡೆದ ಮೂರು ದಿನಗಳ ‘ಹಲಸು ಹಣ್ಣು ಮೇಳ’ದ ಸಮಾರೋಪ ಸಮಾರಂಭ ಭಾನುವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಭಾರತೀಯರು ಪ್ರಕೃತಿಯ ಪೂಜಕರು. ಹಲಸು ಪ್ರಕೃತಿ ನೀಡಿದ ಪರಮದಾನವಾಗಿದ್ದು, ಅದೊಂದು ಹಣ್ಣಲ್ಲ ಬದಲಿಗೆ ಅದೊಂದು ಸಂಸ್ಕೃತಿಯಾಗಿದೆ. ಗ್ರಾಮೀಣ ಪ್ರದೇಶದ ಆಹಾರ ಪರಂಪರೆಯಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹಲಸು ಮೇಳ ಸರಳ ಹೆಜ್ಜೆಯಾಗಿದೆ ಎಂದು ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮದ ಮುಖ್ಯ ವೈದ್ಯ ಡಾ. ಸುಪ್ರೀತ್ ಲೋಬೋ ಅಭಿಪ್ರಾಯಪಟ್ಟರು.ಅವರು ಭಾನುವಾರ ನವತೇಜ ಪುತ್ತೂರು ಸಂಘಟನೆಯ ನೇತೃತ್ವದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಜೂನ್ ೬ರಿಂದ ೮ರ ತನಕ ನಡೆದ ಮೂರು ದಿನಗಳ ‘ಹಲಸು ಹಣ್ಣು ಮೇಳ’ದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಭಾರತವು ವಿಶ್ವದಲ್ಲಿಯೇ ಅತೀ ಹೆಚ್ಚು ಹಲಸು ಬೆಳೆಯುವ ದೇಶವಾಗಿದೆ. ಕಾಫಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಹಲಸು ಬೆಳೆಯುತ್ತಾರೆ. ಹಲಸಿಗೆ ಮೌಲ್ಯವರ್ದನೆ ಮಾಡಲು ಕೇರಳದಲ್ಲಿ ಚಕ್ಕೆ ವಂಡಿ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಹಲಸು ಮಂಡಳಿ ಸ್ಥಾಪಿಸುವ ಚಿಂತನೆ ನಡೆಯಬೇಕಾಗಿದೆ. ಪ್ರತಿ ಊರುಗಳಲ್ಲಿಯೂ ಹಲಸು ಸ್ನೇಹ ಕೂಟ ನಡೆಯಬೇಕು ಎಂದರು. ಶುಭ ಹಾರೈಕೆ ನೀಡಿದ ದ್ವಾರಕ ಕಾರ್ಪೋರೇಶನ್ನ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಮಾತನಾಡಿ, ಹಲಸು ಕೂಡ ಒಂದರ್ಥದಲ್ಲಿ ಕಲ್ಪವೃಕ್ಷವಾಗಿದೆ. ಇದರ ಮರ, ಹಣ್ಣು, ಎಲೆ, ಕಾಯಿ, ಟೊಂಗೆಗಳು ಅದರದೇ ಆದ ವಿಶೇಷತೆ ಹೊಂದಿದೆ ಎಂದರು. ಜೆ ಕ್ಯಾಮ್ ಚೇರ್ಮೆನ್ ಧೀರಜ್ ಬಿ. ಉದ್ಯಾವರ ಮಾತನಾಡಿ, ಭಾರತವು ಆರ್ಥಿಕತೆಯಲ್ಲಿ ೪ನೇ ಸ್ಥಾನದಲ್ಲಿದೆ. ಅದರಲ್ಲಿ ಪುತ್ತೂರಿನ ಕೊಡುಗೆಯೂ ಅಪಾರವಾಗಿದೆ. ಹಲಸು ಕೂಡಾ ಈ ಕೊಡುಗೆಯ ಭಾಗವಾಗಿದೆ. ಹಲವು ಔಷಧಿಗಳಲ್ಲಿಯೂ ಹಲಸು ಹಣ್ಣುಗಳ ಪಾತ್ರವಿದೆ. ಆದರೆ ಹಲಸು ಬಳಕೆಯ ಬಗ್ಗೆ ಇನ್ನೂ ಕೆಲವರಿಗೆ ಅರಿವಿಲ್ಲ ಎಂದರು. ನವತೇಜ ಪುತ್ತೂರು ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಸ್ವಾಗತಿಸಿದರು. ವೇಣುಗೋಪಾಲ್ ಸಿಬರ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರೂಪಿಸಿದರು. ಮೇಳದಲ್ಲಿನ ವಿಶೇಷತೆ: ಹಲಸು ಮೇಳದಲ್ಲಿ ಸುಮಾರು ೭೦ಕ್ಕೂ ಅಧಿಕ ಸ್ಟಾಲ್ಗಳಿದ್ದವು. ಹಲಸು ಮೇಳದಲ್ಲಿ ಭಾನುವಾರ ಮೊದಲೇ ಟಿಕೆಟ್ ಕಾದಿರಿಸಿದ ೨೫೦ ಮಂದಿಗೆ ಹಲಸು ಮತ್ತು ಮಾವಿನ ಸುಮಾರು ಇಪ್ಪತ್ತೈದು ಬಗೆಯ ವೈವಿಧ್ಯ ಖಾದ್ಯಗಳನ್ನು ಒಳಗೊಂಡ ಹಲಸಿನ ಊಟ ಭೋಜನ ಸವಿಯುವ ಅವಕಾಶ ಕಲ್ಪಿಸಲಾಗಿತ್ತು. ಹುಣಸೂರು, ಸಕ್ರಾಯಪಟ್ಟಣ, ದೊಡ್ಡಬಳ್ಳಾಪುರದ ವಿವಿಧ ಬಗೆಯ ಹಲಸಿನ ಹಣ್ಣುಗಳು, ಬ್ರಹ್ಮಾವರ, ಚನ್ನಪಟ್ಟಣದಿಂದ ಉತ್ಕೃಷ್ಟ ಮಾವಿನ ಹಣ್ಣುಗಳು ಮೇಳಕ್ಕೆ ಲಭ್ಯವಿತ್ತು. ಈ ಹಲಸು ಹಾಗೂ ಮಾವಿನ ಹಣ್ಣುಗಳನ್ನು ಕೃಷಿಕರೇ ಸ್ವತಃ ಬೆಳೆದು, ಮಾರುತ್ತಿರುವುದು ಕಂಡು ಬಂತು. ಮೌಲ್ಯವರ್ಧಿತ ಉತ್ಪನ್ನಗಳಾದ ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾದ್, ಮುಳಾ, ಜೂಸ್, ಸೂಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸದೆ, ಮೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಂ, ಹಲಸಿನ ಹಣ್ಣಿನ ಮಳಿಗೆ, ಹಲಸಿನ ಬೀಜದ ಹೋಳಿಗೆ, ಹಲಸು, ಮಾವು ಇನ್ನಿತರ ಹಣ್ಣಿನ ಹೋಳಿಗೆಗಳು ಲಭ್ಯವಿತ್ತು. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಪಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳು ಕಂಡು ಬಂದಿತ್ತು. ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು, ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ನಡೆಸಿ ಸಮಾರೋಪ ಸಮಾರಂಭದಲಿ ವಿಜೇತರಿಗೆ ಬಹುಮಾತನ ವಿತರಣೆ ಮಾಡಲಾಯಿತು.