ಸಾರಾಂಶ
ಕಾರಟಗಿ ಪಟ್ಟಣದ ನವಲಿ ರಸ್ತೆಯಲ್ಲಿನ ಮಾದಿಗ ದಂಡೋರ ವೃತ್ತದಲ್ಲಿ ಡಾ. ಬಾಬು ಜಗಜೀವನರಾಮ್ ಫೋಟೋಕ್ಕೆ ಪೂಜೆ ಸಲ್ಲಿಸಿ, ವೃತ್ತದ ನಾಮಫಲಕಕ್ಕೆ ಹೂವಿನ ಹಾರ ಹಾಕಲಾಯಿತು.
ಕಾರಟಗಿ: ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ೧೧೭ನೇ ಜನ್ಮದಿನವನ್ನು ತಾಲೂಕು ಆಡಳಿತದಿಂದ ಶುಕ್ರವಾರ ಆಚರಿಸಲಾಯಿತು.
ಇಲ್ಲಿನ ನವಲಿ ರಸ್ತೆಯಲ್ಲಿನ ಮಾದಿಗ ದಂಡೋರ ವೃತ್ತದಲ್ಲಿ ಡಾ. ಬಾಬು ಜಗಜೀವನರಾಮ್ ಫೋಟೋಕ್ಕೆ ಪೂಜೆ ಸಲ್ಲಿಸಿ, ವೃತ್ತದ ನಾಮಫಲಕಕ್ಕೆ ಹೂವಿನ ಹಾರ ಹಾಕಲಾಯಿತು. ಈ ವೇಳೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಪ್ರಮುಖರು ಜಗಜೀವನರಾಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.ಬಳಿಕ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಹಸಿರುಕ್ರಾಂತಿ ಮಾಡಿ ದೇಶವನ್ನು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಿದರು. ಅಲ್ಲಿಯವರೆಗೂ ಆಹಾರವನ್ನು ವಿದೇಶಗಳಿಂದ ಆಮದು ಮಾಡಿಕೊಂಡು ತಿನ್ನುವಂಥ ಪರಿಸ್ಥಿತಿ ಇತ್ತು. ಈ ವೇಳೆ ಬಾಬು ಜಗಜೀವನ್ರಾಂ ಅವರ ದೂರದೃಷ್ಟಿ, ಕಾರ್ಯದಕ್ಷತೆಯಿಂದ ಇಲ್ಲಿನ ವಿಜ್ಞಾನಿಗಳು ಯಥೇಚ್ಛ ಆಹಾರವನ್ನು ಬೆಳೆದು ಹಸಿರು ಕ್ರಾಂತಿಗೆ ಕಾರಣೀಭೂತರಾದರು ಎಂದು ಸ್ಮರಿಸಿದರು.೧೯೭೧ರಲ್ಲಿ ಇಂಡೋ-ಪಾಕ್ ಯುದ್ಧದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿ ಪಾಕ್ನ್ನು ಬಗ್ಗು ಬಡಿದು ಭಾರತದ ವಿಜಯಗಾಥೆಗೆ ಕಾರಣೀಭೂತರಾದ ಬಾಬು ಜಗಜೀವನ ರಾಂ ದಿಟ್ಟತನ ಇತಿಹಾಸಲ್ಲಿ ಎಂದೆಂದೂ ಅಚ್ಚಳಿಯದೆ ಉಳಿದಿದೆ ಎಂದರು.
ಕರ್ನಾಟಕ ಮಾದಿಗ ದಂಡೋರ ಅಧ್ಯಕ್ಷ ಶಿವಪ್ಪ ಮಾದಿಗ ಸಿದ್ದಾಪುರ, ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಬಾಬು ಜಗಜೀವನರಾಂ ಅವರು ಸ್ವಾತಂತ್ರ್ಯ ಹೋರಾಟಗಾರ, ದೇಶ ಕಂಡ ಮಹಾನ್ ನಾಯಕ್ ಅಷ್ಟೇ ಅಲ್ಲ, ತಮ್ಮ ಜೀವನದ ಕೊನೆಯ ಉಸಿರು ಇರುವ ವರೆಗೆ ದಲಿತರ, ದೀನರ ಸೇವೆಗಾಗಿ ಶ್ರಮಿಸಿದ ಸಮಾಜ ಸೇವರೂ ಆಗಿದ್ದರು ಎಂದರು.ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ಗ್ರೇಡ್-೨ ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ, ಆರೋಗ್ಯ ನಿರೀಕ್ಷಕಿ ಅಕ್ಷತಾ ಕಮ್ಮಾರ್, ವ್ಯವಸ್ಥಾಪಕ ಪರಮೇಶ್ವರಪ್ಪ, ಚನ್ನಬಸಯ್ಯಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಗಂಗಪ್ಪ, ಮಾದಿಗ ದಂಡೋರದ ಸಮಿತಿಯ ಕರಿಯಪ್ಪ ಮಾದಿಗ, ಹನುಮಂತ ಬೇವಿನಾಳ, ಸಿದ್ದಪ್ಪ ಬಸಾಪುರ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇತರರಿದ್ದರು.