ಸಾರಾಂಶ
ಅಪರ ಜಿಲ್ಲಾಧಿಕಾರಿ ಅಭಿಮತ । ಜಿಲ್ಲಾಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಕನ್ನಡಪ್ರಭ ವಾರ್ತೆ ರಾಯಚೂರು
ತಮ್ಮ ಅದ್ಭುತವಾದ ಕಲೆ ಮೂಲಕ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿರುವ ಅಮರ ಶಿಲ್ಪಿ ಜಕಣಾಚಾರಿ ಅವರು ಆದರ್ಶ, ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ವಿಶ್ವಕರ್ಮ ಸಮಾಜ ಅಭಿವೃದ್ಧಿ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಹೇಳಿದರು.ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆರಳಗಿಸುವ ಮೂಲಕ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಪ್ರಾಚೀನ ಕಾಲದ ರಾಜ,ಮಹಾರಾಜರು ಕಲೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಕಲೆ, ಪ್ರತಿಭೆ ಇರುವವರಿಗೆ ರಾಜಸನ್ಮಾನ ನೀಡಲಾಗುತಿತ್ತು. ಅಂತಹ ಕಾಲದಲ್ಲಿ ತನ್ನ ಕಲೆಯ ಮೂಲಕ ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಿದವರು ಅಮರ ಶಿಲ್ಪಿ ಜಕಣಾಚಾರಿ.
ಪ್ರತಿಯೊಬ್ಬರು ತಮ್ಮ ಸ್ವಂತ ಪ್ರತಿಭೆಯ ಮೂಲಕ ಯಶಸ್ಸನ್ನು ಸಾಧಿಸಬೇಕು. ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಸಮಾಜ ಮುಂದುವರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜಕಣಾಚಾರಿಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆದು ಅವರ ಆದರ್ಶ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.ಇದೇ ವೇಳೆ ನಿವೃತ್ತ ಮುಖ್ಯಶಿಕ್ಷಕ ಅನಂತಶಯನ ಬಡಿಗೇರ ಅವರು ಉಪನ್ಯಾಸ ನೀಡಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಕಲೆಗೆ ಹೆಸರುವಾಸಿಯಾದವರು ಹಾಗೂ ಪ್ರತಿಯೊಂದು ಲೋಹಕ್ಕೂ ಜೀವವಿದೆ ಎಂದು ತಿಳಿಸಿಕೊಟ್ಟವರು ವಿಶ್ವಕರ್ಮರು. ನಿರ್ಜೀವ ಮರ ಅಥವಾ ಲೋಹಗಳಿಗೆ ರೂಪ ನೀಡಿ ಅವುಗಳಿಗೆ ಮರುಜೀವ ನೀಡಿದ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜ ಮಾತ್ರವಾಗಿದೆ. ಜಕಣಾಚಾರಿಯವರು ತಮ್ಮ ಅದ್ಬುತ ಶಿಲ್ಪಗಳ ಮೂಲಕ ನಾಡನ್ನು ಸುಂದರವಾದ ನಾಡನ್ನಾಗಿಸಿದರು ಎಂದು ತಿಳಿಸಿದರು.
ಇದೇ ವೇಳೆ ಪಂಚ ಲೋಹಗಳಲ್ಲಿ ಸಾಧನೆ ಮಾಡಿದ ಸಾಧಕ ಶಿಲ್ಪಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಳಪ್ಪ ಬಡಿಗೇರ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ವಿಶ್ವಕರ್ಮ ವೃತ್ತದಿಂದ ಕನ್ನಡಭವನದ ವರೆಗೆ ವಿಶ್ವಕರ್ಮ ಜಕಣಾಚಾರಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಜಯಮ್ಮ, ಸಹಾಯಕ ಆಯುಕ್ತೆ ಮಹಿಬೂಬಿ, ವಿಶ್ವಕರ್ಮ ಸಮಾಜದ ಅಜ್ಜೇಂದ್ರ ಸ್ವಾಮೀಜಿ, ಬ್ರಹ್ಮಗಣೇಶ, ಮಾರುತಿ ಬಡಿಗೇರ, ಗಿರೀಶ್ ಆಚಾರ್ಯ, ವೆಂಕಟೇಶ, ಈರಣ್ಣ, ಮನೋಹರ್ ಬಡಿಗೇರ, ರವೀಂದ್ರ, ಕೆ.ರಾಮು ಗಾಣದಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.