ಜಮೀರ್ ಒಬ್ಬ ಬೇಜಾವಾಬ್ದಾರಿ, ಕೋಮುವಾದಿ ಮಂತ್ರಿ

| Published : Nov 05 2024, 12:34 AM IST / Updated: Nov 05 2024, 12:35 AM IST

ಸಾರಾಂಶ

ಕಣ್ಣು, ಬಾಯಿ ಬಿಡುವ ಮಾನಸಿಕತೆ ಹೊಂದಿರುವ ಬೇಜಾವಾಬ್ದಾರಿ, ಕೋಮುವಾದಿ ಮಂತ್ರಿ ಜಮೀರ್ ಅಹಮದ್ ಅವನನ್ನು ಇಟ್ಟುಕೊಂಡು ಸಿದ್ದರಾಮಯ್ಯ ದೀಪಾವಳಿ ರಜೆ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಗರಂ ಆಗುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕಣ್ಣು, ಬಾಯಿ ಬಿಡುವ ಮಾನಸಿಕತೆ ಹೊಂದಿರುವ ಬೇಜಾವಾಬ್ದಾರಿ, ಕೋಮುವಾದಿ ಮಂತ್ರಿ ಜಮೀರ್ ಅಹಮದ್ ಅವನನ್ನು ಇಟ್ಟುಕೊಂಡು ಸಿದ್ದರಾಮಯ್ಯ ದೀಪಾವಳಿ ರಜೆ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಗರಂ ಆಗುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಸೋಮವಾರ ವಿವಿಧ ಬೇಡಿಕೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಬಡವರನ್ನು ಉದ್ದಾರ ಮಾಡುತ್ತೇವೆಂದ ಸಿದ್ದರಾಮಯ್ಯ ರೈತರನ್ನು, ಜನರನ್ನು ಬೀದಿಗೆ ತಳ್ಳುತ್ತಾ, ಮೂರು ಬಿಟ್ಟವರ ಸರ್ಕಾರ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಕುಟುಕಿದರು.

ತೀರ್ಥಹಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ನೂತನ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಯುತ್ತಿದೆ. ಕ್ಯಾಂಟೀನ್‌ ನಿರ್ಮಾಣಕ್ಕಾಗಿ ₹153 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ. ಟೆಂಡರ್ ಆಗದೆಯೇ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರಿಗೆ ಎಲ್ಲಾ ಕ್ಯಾಂಟೀನ್ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಯಾವ ಮಂತ್ರಿಗೆ, ಎಂಜಿನಿಯರ್‌ಗೆ ಎಷ್ಟು ಕಾಸು ಇದರಿಂದ ಸಿಗಲಿದೆ ಎಂದು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿಗೆ ₹5 ಲಕ್ಷ ಅನುದಾನ ಕೊಡುವ ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೆ ವಕ್ಫ್ ಆಸ್ತಿ ನೋಂದಣಿ ಸೇರಿದಂತೆ ಒತ್ತುವರಿ ತೆರವಿಗೆ ₹38 ಕೋಟಿ ಅನುದಾನ ಬಿಡುಗಡೆ ಮಾಡಿದೆ. ವಕ್ಪ್ ಭೂ ವಿವಾದದ ಟ್ರಿಬಿನಲ್ ಕೋರ್ಟ್‌ಗೆ ನಿರಂಕುಶ ಅಧಿಕಾರ ನೀಡಿದ್ದು, ಅಲ್ಲಿ ಮೌಲ್ವಿಗಳು, ಮುಸ್ಲೀಂ ಅಧಿಕಾರಿಗಳನ್ನು ಕೂರಿಸಿರುವುದು ಆಘಾತಕಾರಿ ಬೆಳವಣಿಗೆ ಎಂದರು.

ಭೂ ಸುಧಾರಣೆ ಕಾಯ್ದೆ ಒಳ್ಳೆಯದಿತ್ತು. ಅದರಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಅನ್ಯಾಯ ಆಗಿದೆ. ಇನಾಮು ಭೂ ಮಂಜೂರಾತಿಯಿಂದಾಗಿ ಧರ್ಮಾದಾಯ ಕಡಿಮೆಯಾಗಿ ರಾತ್ರಿ ಬೆಳಗಾಗುವುದರೊಳಗೆ ದೇವಸ್ಥಾನ ಪಾಳು ಬಿದ್ದಿವೆ. ಅನ್ವರ್ ಮಾಣಿಪಾಡಿ ವರದಿಯಂತೆ ಒತ್ತುವರಿ ತೆರವು ಮಾಡಬೇಕು. ಒತ್ತುವರಿಯಲ್ಲಿ ಪ್ರಭಾವಿ ಮುಸ್ಲಿಂ ಮುಖಂಡರು ಇದ್ದಾರೆ ಎಂದು ದೂರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮಾತನಾಡಿ, “ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಲಕ್ಷ ಇದ್ದ ವಕ್ಫ್ ಆಸ್ತಿ ಈಗ 9 ಲಕ್ಷಕ್ಕೆ ಹೆಚ್ಚಿರುವುದು ಹೇಗೆ? ರೈತರ ಪರವಾಗಿದ್ದರೆ ಸರ್ಕಾರ 1974ರ ಗೆಜೆಟ್ ನೋಟಿಫಿಕೇಷನ್ ವಾಪಾಸ್ಸು ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡಿದು ಸಮಾನತೆ ಎಂದರೆ ಸಾಲದು. ಬಡವರ ಸಮಸ್ಯೆ ಆಲಿಸಬೇಕು” ಎಂದರು.

“ಕಾಂಗ್ರೆಸ್ ಹೆಚ್ಚು ದಿನ ಅಧಿಕಾರದಲ್ಲಿ ಇದ್ದರೆ ರಾಜ್ಯದ ಸಂಪತ್ತು ವಕ್ಫ್ ಮಂಡಳಿಗೆ ಬರೆಯುತ್ತಾರೆ” ಎಂದು ಮುಖಂಡ ಬೇಗುವಳ್ಳಿ ಕವಿರಾಜ್ ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ಮೋಹನ್ ಭಟ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಮುಖಂಡರಾದ ಚಂದವಳ್ಳಿ ಸೋಮಶೇಖರ್, ಕಾಸರವಳ್ಳಿ ಗಿರೀಶ್, ಸಾಲೇಕೊಪ್ಪ ರಾಮಚಂದ್ರ, ನಾಗರಾಜ ಶೆಟ್ಟಿ, ಹಾರೋಗೊಳಿಗೆ ವಾಸುದೇವ್, ಸಂತೋಷ್ ದೇವಾಡಿಗ ಇದ್ದರು.