ಸಾರಾಂಶ
ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರ ವೈಯಕ್ತಿಕ ಜಗಳವನ್ನು ವಾಲ್ಮೀಕಿ ಸಮಾಜಕ್ಕೆ ಲೇಪನ ಹಚ್ಚುವುದು ಸರಿಯಲ್ಲ ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಯುವ ಮುಖಂಡ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಪ್ತ ಯಮನೂರಪ್ಪ ಚೌಡ್ಕಿ ಹೇಳಿದರು.
ಗಂಗಾವತಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರ ವೈಯಕ್ತಿಕ ಜಗಳವನ್ನು ವಾಲ್ಮೀಕಿ ಸಮಾಜಕ್ಕೆ ಲೇಪನ ಹಚ್ಚುವುದು ಸರಿಯಲ್ಲ ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಯುವ ಮುಖಂಡ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಪ್ತ ಯಮನೂರಪ್ಪ ಚೌಡ್ಕಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಜಾತ್ಯತೀತ ನಾಯಕರಾಗಿದ್ದಾರೆ. ಅವರಿಗೆ ವಾಲ್ಮೀಕಿ ಸಮಾಜದ ಮೇಲೆ ಗೌರವ ಇದೆ. ಶ್ರೀರಾಮುಲು ಅವರಿಗೂ ಗೌರವ ಕೊಡುತ್ತಾರೆ. ಆದರೆ ವಾಲ್ಮೀಕಿ ಸಮಾಜದ ಕೆಲವರು ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಜಗಳವನ್ನು ವಾಲ್ಮೀಕಿ ಸಮಾಜಕ್ಕೆ ಅಂಟಿಸಿಕೊಂಡು ವಿನಾಕಾರಣ ಸಮಾಜದಲ್ಲಿ ಹುಳಿ ಹಿಂಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.ರೆಡ್ಡಿ ಮತ್ತು ಶ್ರೀರಾಮುಲು ಜಗಳವಾಡುತ್ತಾರೆ. ನಾಳೆ ಒಗ್ಗಟ್ಟಾಗುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ವಾಲ್ಮೀಕಿ ಸಮಾಜಕ್ಕೆ ಕಪ್ಪುಚುಕ್ಕೆ ತರುವುದು ಸರಿಯಲ್ಲ ಎಂದರು.
ಸತೀಶ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ ಮಧ್ಯೆ ಜಗಳ ನಡೆಯುತ್ತಿದೆ. ಇಲ್ಲಿ ಏಕೆ ವಾಲ್ಮೀಕಿ ಸಮಾಜ ಬರಲಿಲ್ಲ? ಎಂದರು. ಈ ಹಿಂದೆ ಕಂಪ್ಲಿ, ಬಳ್ಳಾರಿ ಮತ್ತು ಮೊಳಕಾಲ್ಮೂರು ಈ ಮೂರು ಕ್ಷೇತ್ರಗಳ ಚುನಾವಣೆ ಮತ್ತು ಬಿಎಸ್ಆರ್ ಪಕ್ಷಕ್ಕೆ ಸಂಪನ್ಮೂಲ ಒದಗಿಸಿದವರು ಶಾಸಕ ಜನಾರ್ದನ ರೆಡ್ಡಿ. ಶ್ರೀರಾಮುಲು ಬಗ್ಗೆ ಮಾತನಾಡುವವರು ಹುಲಿಗೆಮ್ಮ ದೇವಸ್ಥಾನ ಅಥವಾ ಧರ್ಮಸ್ಥಳಕ್ಕೆ ಕರೆದುಕೊಂಡು ಬರಲಿ, ನಾವು ಶಾಸಕ ರೆಡ್ಡಿ ಅವರನ್ನು ಕರೆದುಕೊಂಡು ಬಂದು ಪ್ರಮಾಣ ಮಾಡಿಸುತ್ತೇವೆ ಎಂದು ಸವಾಲು ಹಾಕಿದರು. ಶಾಸಕ ರೆಡ್ಡಿ ಅವರು ಏನು ತಪ್ಪು ಮಾತನಾಡಿಲ್ಲ, ಕ್ಷಮೆ ಕೇಳುವ ಅವಶ್ಯಕತೆ ಇಲ್ಲವೇ ಇಲ್ಲ ಎಂದರು.ದುರಗಪ್ಪ ದಳಪತಿ, ಅರ್ಜುನ ನಾಯಕ, ಪಂಪಣ್ಣನಾಯಕ, ಮಳ್ಳಿಕೇರಿ ಮಂಜುನಾಥ, ರಮೇಶ ಹೊಸಮಲಿ, ರಮೇಶ ಹಾದಿಮನಿ, ಮಂಜುನಾಥ ಕೋಲ್ಕಾರ್ ಇತರರು ಇದ್ದರು.