ಸಾರಾಂಶ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಜಿಲ್ಲೆಯ ಹಾಲು ಉತ್ಪಾದಕರು ಜನಶ್ರೀ ವಿಮೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ವಿಮೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.ತಾಲೂಕಿನ ಹಸಗೂಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಉತ್ಪಾದಕರು ಜನಶ್ರೀ ವಿಮೆ ಮಾಡಿಸಿಕೊಳ್ಳುತ್ತಿಲ್ಲ. ವಿಮೆ ಮಾಡಿಸಿಕೊಂಡರೆ ನಿಮ್ಮ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದರು.
ಚಾಮುಲ್ನಿಂದ ಹಾಳು ಉತ್ಪಾದಕರಿಗೆ ಸಾಕಷ್ಟು ಸೌಲಭ್ಯಗಳು ನೀಡಲಾಗುತ್ತಿದೆ. ಹಾಲು ಉತ್ಪಾದಕರು ಸೌಲಭ್ಯ ಪಡೆದುಕೊಳ್ಳಬೇಕು. ಹಾಲು ಉತ್ಪಾದಕರ ಸಹಕಾರ ಪರವಾಗಿ ಚಾಮುಲ್ ಇದೆ ಎಂದರು.ತಾಲೂಕಿನಲ್ಲಿ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ. ಇದಕ್ಕೆ ಸಂಘದ ಆಡಳಿತ ಮಂಡಳಿ ಹಾಗೂ ನೌಕರರೇ ಕಾರಣರಾಗಿದ್ದಾರೆ. ರಾಸುಗಳಿಗೂ ವಿಮೆ ಮಾಡಿಸಿಕೊಳ್ಳಿ. ನಾನು ಚಾಮುಲ್ ಅಧ್ಯಕ್ಷನಾದ ಅವಧಿಯಲ್ಲಿ ಸಂಘದ ನೌಕರರಿಗೆ ನಿವೃತ್ತಿ ಪ್ರೋತ್ಸಾಹ ಹಣ ನೀಡಲಾಗುತ್ತಿದೆ. ಚಾಮುಲ್ ನಲ್ಲಿ ಕೊಡುವಷ್ಟು ನಿವೃತ್ತಿ ಪ್ರೋತ್ಸಾಹ ಹಣ ಮತ್ಯಾವ ಒಕ್ಕೂಟವೂ ಕೊಡುತ್ತಿಲ್ಲ ಎಂದರು.
ಹಾಲು ಉತ್ಪಾದಕರು ಸಾವನ್ನಪ್ಪಿದರೆ ರೈತ ಕಲ್ಯಾಣ ಟ್ರಸ್ಟ್ನಿಂದ ₹15 ಸಾವಿರ ನೀಡಲಾಗುತ್ತಿದೆ. ಸ್ಥಳೀಯ ಸಂಘಗಳು ಕೂಡ ತಮ್ಮ ಕೈಲಾದ ನೆರವು ನೀಡುತ್ತಿವೆ. ರಾಸುಗಳಿಗೆ ಆರೋಗ್ಯ ನೋಡಿಕೊಳ್ಳಲು ವೈದ್ಯರನ್ನು ನೇಮಿಸಲಾಗಿದೆ ಎಂದರು.ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ಮಾತನಾಡಿ, ಸಂಘದಲ್ಲಿ ಸಭಾ ಭವನ ನಿರ್ಮಿಸಿಕೊಳ್ಳಲು ಚಾಮುಲ್ ಕೂಡ ೩ ಲಕ್ಷ ರು. ಸಹಾಯ ಧನ ನೀಡಲಾಗುತ್ತಿದೆ. ಸಂಘದ ಆಡಳಿತ ಮಂಡಳಿ ಚಾಮುಲ್ಗೆ ದಾಖಲಾತಿ ನೀಡಿದರೆ ಚೆಕ್ ನೀಡಲಿದೆ. ಚಾಮುಲ್ ಚುನಾವಣೆಯಲ್ಲಿ ಸಮಯದಲ್ಲಿ ಮಾತ್ರ ರಾಜಕಾರಣ ಮಾಡ್ತೀನಿ ಆದರೆ ಹಾಲು ಉತ್ಪಾದಕರ ಪರವಾಗಿ ನಾನು ಸೇರಿದಂತೆ ನಂಜುಂಡಪ್ರಸಾದ್ ಅವರು ಕೂಡ ನಿಮ್ಮ ಜೊತೆ ಇರುತ್ತೇವೆ ಎಂದರು.
ಸಂಘದ ಅಧ್ಯಕ್ಷ ಎಚ್.ಎಂ.ನಾಗರಾಜ ಅಧ್ಯಕ್ಷ ವಹಿಸಿದ್ದರು. ಸಂಘದ ಪಾಧ್ಯಕ್ಷ ನಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಚಾಮುಲ್ ವಿಸ್ತರಣಾಧಿಕಾರಿ ಎಚ್.ಪ್ರಕಾಶ್,ಸಂಘದ ನಿರ್ದೇಶಕರಾದ ಎಚ್.ಬಿ.ಉಮೇಶ್, ಎಚ್.ಎಂ.ಮಹದೇವಪ್ಪ, ಬಸವರಾಜು,ಎಚ್.ಎಸ್.ಬಸವಣ್ಣ, ಎಚ್.ಸಿ.ಮಲ್ಲೇಶ್ ,ಮಹದೇವಶೆಟ್ಟಿ,ಶಿವಯ್ಯ,ಬಸಮ್ಮಣ್ಣಿ,ದ್ರಾಕ್ಷಾಯಣಮ್ಮ,ನಾಗಪ್ಪ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಚ್.ಎಸ್.ಮಹೇಶ ಸೇರಿದಂತೆ ಸಂಘದ ಸದಸ್ಯರು ಇದ್ದರು.