ಸಾರಾಂಶ
ಹಾವೇರಿ: ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಸಾಮರ್ಥ್ಯವಿದೆ. ಆದರೆ, ಅದನ್ನು ನಾವು ನೀವು ತೀರ್ಮಾನ ಮಾಡಲು ಆಗಲ್ಲ. ಹೈಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಶಿಗ್ಗಾಂವಿ ತಾಲೂಕು ಹುಲಗೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಉಪಚುನಾವಣೆ ಗೆಲುವಿಗೆ ಸತೀಶ್ ಜಾರಕಿಹೊಳಿ ಕಾರಣ. ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷೆ ವಿಚಾರವಾಗಿ ಎಲ್ಲರಿಗೂ ಅಭಿಪ್ರಾಯ ಇರುತ್ತದೆ. ಆದರೆ, ತೀರ್ಮಾನ ಮಾಡುವವರು ಹೈಕಮಾಂಡ್ ಎಂದರು.
ಶಿಗ್ಗಾಂವಿಯ ಜನ ಬದಲಾವಣೆ ಬಯಸಿದ್ದರು. ಆದ್ದರಿಂದ ನಮಗೆ ಆಶೀರ್ವಾದ ಮಾಡಿದರು.ನಾವು ಯಾವ ಗಿಮಿಕ್ ಮಾಡಿಲ್ಲ. ಸಿಎಂ ಹಾಗೂ ಡಿಸಿಎಂ ಅವರು ಖಾದ್ರಿ ಅವರನ್ನು ಹೆಸ್ಕಾಂ ಚೇರ್ಮನ್ ಮಾಡಿದ್ದಾರೆ.
ಬೊಮ್ಮಾಯಿ ಸಿಎಂ ಆಗಿ ಅವಕಾಶ ಸಿಕ್ಕರೂ ತಾಲೂಕು ಅಭಿವೃದ್ಧಿ ಮಾಡಿಲ್ಲ ಎಂದು ಜನ ಮಾತನಾಡುತ್ತಿದ್ದರು. ಹೀಗಾಗಿ ಜನ ಪಠಾಣ್ ಗೆಲ್ಲಿಸಿದ್ದಾರೆ. ನಾನು ಕೂಡಾ ಇಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮೂರೂ ಕ್ಷೇತ್ರದ ಚುನಾವಣೆಯಲ್ಲೂ ಗೆದ್ದೆವು. ಚನ್ನಪಟ್ಟಣದಲ್ಲಿಯೂ ಅಷ್ಟು ಅಂತರದಿಂದ ಗೆಲ್ತೀವಿ ಅಂತ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಜನರಿಗೆ ವಕ್ಫ್ ವಿಚಾರದಲ್ಲಿ ಸತ್ಯ ಗೊತ್ತಿದೆ. ವಕ್ಫ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಯತ್ನಾಳ್ ಅವರು ವಿಜಯಪುರದಲ್ಲಿ ವಕ್ಫ್ಗೆ 1200 ಎಕರೆ ಬರೆಸಿಕೊಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾರ ಆಸ್ತಿ ಯಾರೂ ಹೊಡೆಯೋಕೆ ಆಗಲ್ಲ ಎಂದರು.ನಮ್ಮದು ವಕ್ಫ್ ಪ್ರಾಪರ್ಟಿ 1 ಲಕ್ಷ 12 ಸಾವಿರ ಎಕರೆ ಇತ್ತು. ಈಗ 23000 ಎಕರೆ ಇದೆ. ಅಲ್ಪ ಸಂಖ್ಯಾತರೇ ಒತ್ತುವರಿ ಮಾಡಿದಾರೆ. ಅದನ್ನು ನಾವು ತೆರವು ಮಾಡ್ತಿದೀವಿ. ರೈತರು ನಮಗೆ ಅನ್ನ ಕೊಡೋ ಅನ್ನದಾತರು. ಅವರನ್ನು ಮುಟ್ಟೋಕೆ ಸಾಧ್ಯವಾ? ಬಿಜೆಪಿಯವರಿಗೆ ಯಾವ ಇಶ್ಯು ಇರಲಿಲ್ಲ. ಹೀಗಾಗಿ ರಾಜಕೀಯ ಮಾಡ್ತಿದಾರೆ ಎಂದರು.
ಹಾಸನ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾವೇಶ ಮಾಡಬೇಕು ಅಂತ ಕೆಲ ಹಿರಿಯರು ಸಲಹೆ ನೀಡಿದಾರೆ. ಸಿದ್ದರಾಮಯ್ಯ ಶಕ್ತಿ ಸಮಾವೇಶ ಅಂತ ಅಲ್ಲ. ಸಮಾವೇಶ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನನಗೆ ಇನ್ನೂ ಅಷ್ಟು ಮಾಹಿತಿ ಇಲ್ಲ ಎಂದು ಹೇಳಿದರು.