ಸಾರಾಂಶ
ಕಳೆದ ಎರಡು ದಿನಗಳಿಂದ ತಾಲೂಕಿನ ಎಲ್ಲ ಕಡೆಗೂ ನಿರಂತರ ಮಳೆಯಿಂದ ಮಲ್ಲಿಗೆ ನಗರ ಮಲೆನಾಡಿನಂತಾಗಿದೆ. 4 ಮನೆಗಳು ಕುಸಿದು ಬಿದ್ದಿವೆ. ರೈತರ ಜಮೀನುಗಳಲ್ಲಿ ಮಳೆ ನೀರು ನಿಂತು ಕೆರೆಯಂತಾಗಿವೆ.
4 ಮನೆಗಳು ಕುಸಿತ, ಸೋರುತ್ತಿವೆ ಮಣ್ಣಿನ ಮನೆಗಳು
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಕಳೆದ ಎರಡು ದಿನಗಳಿಂದ ತಾಲೂಕಿನ ಎಲ್ಲ ಕಡೆಗೂ ನಿರಂತರ ಮಳೆಯಿಂದ ಮಲ್ಲಿಗೆ ನಗರ ಮಲೆನಾಡಿನಂತಾಗಿದೆ. 4 ಮನೆಗಳು ಕುಸಿದು ಬಿದ್ದಿವೆ. ರೈತರ ಜಮೀನುಗಳಲ್ಲಿ ಮಳೆ ನೀರು ನಿಂತು ಕೆರೆಯಂತಾಗಿವೆ.
ತಾಲೂಕಿನ ಕೊಂಬಳಿ ಗ್ರಾಮದ ಕಾಸಿಂಸಾಬ್ ಮನೆ, ತಳಕಲ್ಲು ಗ್ರಾಮದ ಸಕ್ರಗೌಡ ನಿಂಗನಗೌಡ ಮನೆ ಮತ್ತು ಮಾನ್ಯರ ಮಸಲವಾಡ ಗ್ರಾಮದಲ್ಲಿ 2 ಮನೆಗಳು ಸೇರಿ ಒಟ್ಟು 4 ಮನೆಗಳು ಕುಸಿದು ಬಿದ್ದಿವೆ. ಕೆಲ ಗ್ರಾಮಗಳಲ್ಲಿ ಬಿಟ್ಟು ಬಿಡದಂತೆ ಸುರಿಯುವ ಮಳೆಯಿಂದ ಮಣ್ಣಿನ ಮನೆಗಳು ಸೋರುತ್ತಿವೆ, ಆಶ್ರಯಕ್ಕಾಗಿ ಪರದಾಡುವ ಸ್ಥಿತಿ ಇದೆ.ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ನರೇಗಾ ಯೋಜನೆಯಲ್ಲಿ ನಿರ್ಮಿಸಿದ ಕೃಷಿ ಹೊಂಡ ನೀರು ಭರ್ತಿಯಾಗಿವೆ. ಹಳ್ಳಿಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆ ಸಂಪೂರ್ಣ ಬಂದ್ ಆಗಿವೆ.
ಬ್ಯಾಲಹುಣ್ಸಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕಕ್ಕೆ ಹೋಗಲು ಆದಷ್ಟು ಮಳೆ ನೀರು ಜಮಾವಣೆಯಾಗಿದ್ದು, ಈ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ಗ್ರಾಪಂ ಅಧಿಕಾರಿಗಳು ಮಾಡಿಲ್ಲ. ಇದರಿಂದ ಜನ ಶುದ್ಧ ನೀರು ತರಲು ಹರಸಾಹಸ ಪಡುವಂತಾಗಿದೆ. ಈ ಸಮಸ್ಯೆ ಬಗೆ ಹರಿಸಬೇಕೆಂದು ಹಲವು ಬಾರಿ ಗ್ರಾಮಸ್ಥರು ಪಿಡಿಒ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ, ಕೂಡಲೇ ಚರಂಡಿ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಜನ ಒತ್ತಾಯಿಸಿದ್ದಾರೆ.ತಾಲೂಕಿನ ಮಾಗಳ ಗ್ರಾಮದಲ್ಲಿ ಮಳೆಯನ್ನೇ ಲೆಕ್ಕಿಸದೇ ಶಾಲಾ ಮಕ್ಕಳು, ಕೊಡೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಹೊತ್ತುಕೊಂಡು ಶಾಲೆಗೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.