ತಾಲೂಕು ಕಚೇರಿ ಪಟ್ಟಣದಿಂದ 5 ಕಿಲೋಮೀಟರ್ ದೂರದಲ್ಲಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಪಟ್ಟಣದಲ್ಲಿ ಕಚೇರಿ ತೆರೆಯಲು ಈ ಹಿಂದೆ ನಿರ್ಣಯ ಮಾಡಲಾಗಿತ್ತು. ಪಟ್ಟಣದ ಒಳಭಾಗದಲ್ಲಿಯೇ ಸಾಕಷ್ಟು ಜಾಗ ಇದ್ದರೂ ಯಾರ ಸಲಹೆ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ನಿರ್ಧಾರ ಕೈ ಬಿಡದಿದ್ದರೆ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಹಾರೋಹಳ್ಳಿ ನೂತನ ತಾಲೂಕಾಗಿ ರಚನೆಯಾದ ನಂತರ ಶಾಸಕ ಇಕ್ಬಾಲ್ ಹುಸೇನ್ ರವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ತಾಲೂಕು ಅಧಿಕಾರಿಗಳು ಕೂಡ ಶಾಸಕರ ಮರ್ಜಿಗೆ ಒಳಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್- ಬಿಜೆಪಿ ಹಾಗೂ ರೈತಸಂಘ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಶಾಸಕರು ಹಾಗೂ ತಹಸೀಲ್ದಾರ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಹಾರೋಹಳ್ಳಿ ತಾಲೂಕು ರಚನೆಯಾದಾಗಿನಿಂದಲೂ ಶಾಸಕರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನರ ಅನುಕೂಲಕ್ಕಾಗಿ ಹಾರೋಹಳ್ಳಿಯನ್ನು ಹೊಸ ತಾಲೂಕು ರಚನೆ ಮಾಡಿ ಸಹಕರಿಸಿದ್ದರು. ಆದರೆ, ಇಂದಿನ ಶಾಸಕರು ತಾಲೂಕು ಕಚೇರಿ ಕಟ್ಟಡದ ನಿರ್ಮಾಣದ ಶಂಕು ಸ್ಥಾಪನೆಗೆ ಹೋರಾಟಗಾರರು, ಪ್ರಗತಿಪರ ಹಾಗೂ ವಿರೋಧ ಪಕ್ಷದ ಸಲಹೆ ಸಹಕಾರ ಪಡೆಯದೆ ಹಾಗೂ ಸಂಸದ ಡಾ. ಸಿ.ಎನ್.ಮಂಜುನಾಥ್ ರವರನ್ನು ಶಂಕುಸ್ಥಾಪನೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಕಚೇರಿ ಪಟ್ಟಣದಿಂದ 5 ಕಿಲೋಮೀಟರ್ ದೂರದಲ್ಲಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಪಟ್ಟಣದಲ್ಲಿ ಕಚೇರಿ ತೆರೆಯಲು ಈ ಹಿಂದೆ ನಿರ್ಣಯ ಮಾಡಲಾಗಿತ್ತು. ಪಟ್ಟಣದ ಒಳಭಾಗದಲ್ಲಿಯೇ ಸಾಕಷ್ಟು ಜಾಗ ಇದ್ದರೂ ಯಾರ ಸಲಹೆ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ನಿರ್ಧಾರ ಕೈ ಬಿಡದಿದ್ದರೆ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಂತಸ್ವಾಮಿ, ತಾಲೂಕು ಅಧ್ಯಕ್ಷ ಪಿಚ್ಚನಕೆರೆ ಜಗದೀಶ್ ,

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್‌ಕೆರೆ ಶಿವಲಿಂಗಯ್ಯ, ತಾ.ಪಂ ಮಾಜಿ ಸದಸ್ಯ ಕೆ.ಎನ್.ರಾಮು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ಮುರುಳಿಧರ್, ರೈತ ಸಂಘ ಮುಖಂಡರಾದ ಹರೀಶ್, ಬಿ.ಎಂ.ಪ್ರಕಾಶ್, ಆರ್.ವಿ.ಹೊನ್ನೇಗೌಡ, ಅನಂತರಾಮ್, ಬಾಲಾಜಿ, ಗಜೇಂದ್ರಸಿಂಗ್, ರಘು, ಗಿರೀಶ್ , ಕುಮಾರ್, ತೋಕಸಂದ್ರ ಶಿವರುದ್ರ, ಪಡುವಣಗೆರೆ ಸಿದ್ದರಾಜು, ಮುದುವಾಡಿ ನಾಗರಾಜ್, ಮಲ್ಲಪ್ಪ, ಮರಳವಾಡಿ ತಮ್ಮಣ್ಣ, ಶೇಷಾದ್ರಿರಾಮು, ಸೋಮಸುಂದರ್, ವಕೀಲ ಚಂದ್ರಶೇಖರ್, ಶಿವಮುತ್ತು , ಕೆ.ಆರ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.