ಸಾರಾಂಶ
ರಾಜ್ಯ ದಲ್ಲಿ ಎರಡು ಬಾರಿ ಆಡಳಿತ ನಡೆಸಿದ ಕುಮಾರಸ್ವಾಮಿ ಅವರು ಜನಪರ ಕಾಳಜಿಯಿಂದ ಯಾವುದೇ ಯೋಜನೆ ಜಾರಿ ಮಾಡದೇ ಕಾಲಹರಣವನ್ನು ಮಾಡಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ಜೆಡಿಎಸ್ ಪಕ್ಷದ ನಾಯಕರು ನಾವು ಮಣ್ಣಿನ ಮಕ್ಕಳು ಎನ್ನುತ್ತಾರೆ. ಆದರೆ ರೈತರಿಗೆ, ಮಹಿಳೆಯರಿಗಾಗಿ ಯಾವ ಯೋಜನೆ ರೂಪಿಸಿದ್ದಾರೆ ಹೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ತಿಳಿಸಿದರು.ಹಾರೋಹಳ್ಳಿ ತಾಲೂಕಿನ ಕೊಳ್ಳಗಾನಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಆಯೋಜಿಸಿದ್ದ ಹತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ದಲ್ಲಿ ಎರಡು ಬಾರಿ ಆಡಳಿತ ನಡೆಸಿದ ಕುಮಾರಸ್ವಾಮಿ ಅವರು ಜನಪರ ಕಾಳಜಿಯಿಂದ ಯಾವುದೇ ಯೋಜನೆ ಜಾರಿ ಮಾಡದೇ ಕಾಲಹರಣವನ್ನು ಮಾಡಿದ್ದು, ಈಗ ದಿನ ಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಯ್ಯುವುದಷ್ಟೇ ಅವರ ನಿತ್ಯದ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಒಂದು ಜಾತಿ, ಧರ್ಮದ ಪರವಾಗಿ ಕೆಲಸ ಮಾಡದೇ ಸಮಾಜದ ಎಲ್ಲಾ ಶೋಷಿತ ಜನಾಂಗದ ಪರ ಕೆಲಸ ಮಾಡುತ್ತಿದ್ದು ಇದನ್ನು ಸಹಿಸದ ನಾಯಕರು ಸರ್ಕಾರದ ವಿರುದ್ಧ ಇಲ್ಲ- ಸಲ್ಲದ ಆರೋಪ ಮಾಡುತ್ತಾ ಜನರಿಗೆ ತಪ್ಪು ಸಂದೇಶ ನೀಡುತ್ತದ್ದಾರೆ. ಈ ಭಾಗದ ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಆಸಕ್ತಿ ಹಾಗೂ ಕಾಳಜಿ ತೋರಿಸದೇ ಅಸಡ್ಡೆ ಮಾಡಿದ್ದರು ಆದರೆ ನಮ್ಮ ಸರ್ಕಾರ ಬಂದ ಮೇಲೆ ಇಂದು ಕ್ಷೇತ್ರದಾದ್ಯಂತ ಅನೇಕ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿದ್ದು ಶಾಸಕರು ನಿಮ್ಮ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಈ ಸೊಸೈಟಿ 30 ವರ್ಷಗಳಿಂದ ಬೇರೆ ಪಕ್ಷದ ಪಾಲಾಗಿತ್ತು, ಆದರೆ ಇಂದು ನಮ್ಮ ಸರ್ಕಾರದ ಕಾರ್ಯವೈಖರಿ ಹಾಗೂ ಯೋಜನೆ ಗಳನ್ನು ಮೆಚ್ಚಿ ಸದಸ್ಯರು ನಮ್ಮ ಪಕ್ಷದ ಬೆಂಬಲಿಗರಿಗೆ ಅವಕಾಶ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೊಳ್ಳಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ಬಸವರಾಜು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಕಾನ ಸಮಿತಿ ಅಧ್ಯಕ್ಷ ಜೆಸಿಬಿ ಅಶೋಕ್ ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಕೃಷಿ ಸಹಕಾರ ಸಂಘದ ಸಿಇಒ ಉಮೇಶ್, ನಿರ್ದೇಶಕರಾದ ನಂಜೇಗೌಡ, ದಿನೇಶ್, ಬಾಲಾಜಿ, ಹರೀಶ್, ಜಯಮ್ಮ ಹಾಗೂ ಗ್ರಾಮದ ಮುಖಂಡರಾದ ಕೆಂಪೇಗೌಡ, ರಾಮಚಂದ್ರ, ಶಿವಕುಮಾರ್, ವೀರೇಗೌಡ, ದೇವರಾಜು ಸೇರಿದಂತೆ ಕೊಳ್ಳಗಾನಹಳ್ಳಿ ಗ್ರಾಮಸ್ಥರು, ಸ್ತ್ರೀ ಶಕ್ತಿ ಸ್ವ- ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01: ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ.