ಕನ್ನಡಪ್ರಭ ವಾರ್ತೆ ಹುಣಸೂರು
ರೈತ ಮತ್ತು ಶೋಷಿತರ ವಿರೋಧಿ ನೀತಿಯನ್ನು ಅನುರಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹೋರಾಡಲು ರಾಜ್ಯದಲ್ಲಿ ಜೆಡಿಎಸ್ ಇನ್ನೂ ಶಕ್ತಿಯುತವಾಗಿಯೇ ಇದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಖಚಿತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.ಜೆಡಿಎಸ್ ವತಿಯಿಂದ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯವಾಳುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತ ವಿರೋಧಿ, ಶೋಷಿತ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಸ್ಇಪಿ-ಟಿಎಸ್ಪಿ ಯೋಜನೆಯ ಒಟ್ಟು 37 ಸಾವಿರ ಕೋಟಿ ರು. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಧಾರವಾಡದಲ್ಲಿ ನಿರುದ್ಯೋಗಿಗಳು ಬೀದಿಗಿಳಿದಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಂಪ್ ಸೆಟ್ ವಿದ್ಯುತ್ ಸಂಪರ್ಕಕ್ಕೆ 3 ಲಕ್ಷ ರು. ಗಳ ಶುಲ್ಕ ವಿಧಿಸಿದೆ. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನೀಡುತ್ತಿಲ್ಲ. ರಾಜ್ಯ ಸರ್ಕಾರ ಮಾಡಿರುವ ಸಾಲ 7 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಗಂಗಾ ಕಲ್ಯಾಣ ಯೋಜನೆ ಹಳ್ಳ ಹಿಡಿದಿದೆ. ಶೋಷಿತ ಸಮುದಾಯದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಎಲ್ಲ ಸಮುದಾಯಗಳ ಬದುಕು ಬೀದಿಪಾಲು ಮಾಡಿದೆ ಎಂದು ಟೀಕಾಪ್ರಹಾರವನ್ನೇ ನಡೆಸಿದರು.ತಂಬಾಕಿಗೆ ಉತ್ತಮಬೆಲೆ ಕೊಡಿಸುತ್ತೇವೆ:
ರಾಜ್ಯದ ಮೈಸೂರು ಮತ್ತು ಹಾಸನ ಜಿಲ್ಲೆಯ 5 ತಾಲೂಕುಗಳಲ್ಲಿ ತಂಬಾಕು ಬೆಳೆ ಇದ್ದು, ಪ್ರಸ್ತುತ ಸಾಲಿನಲ್ಲಿ ತಂಬಾಕು ಬೆಲೆ ದಿಢೀರ್ ಕುಸಿತ ಕಂಡಿದೆ. ಈ ಹಿಂದಿನ ಸಾಲಿನಲ್ಲೂ ಇದೇ ಪರಿಸ್ಥಿತಿ ಎದುರಾದಾಗ, ರೈತ ನಿಯೋಗದೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲಾಗಿತ್ತು. ಇದೀಗ ಮತ್ತೆ ಸಮಸ್ಯೆ ಭುಗಿಲೆದ್ದಿದ್ದು, ಅತಿ ಶೀಘ್ರದಲ್ಲಿ ಮತ್ತೆ ಕುಮಾರಣ್ಣನ ನೇತೃತ್ವದಲ್ಲಿ ರೈತ ನಿಯೋಗ ಕೇಂದ್ರ ವಾಣಿಜ್ಯ ಮಂತ್ರಿಯನ್ನು ಭೇಟಿಯಾಗಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ದರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು. ರೈತರು ಆತಂಕ ಪಡದಂತೆ ರೈತರಿಗೆ ಧೈರ್ಯ ತುಂಬಿದರು.
ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆದಿದೆ:
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಈಗಾಗಲೇ ಜನರೊಂದಿಗೆ ಜನತಾದಳ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ನಮ್ಮೆಲ್ಲರ ನೆಚ್ಚಿನ ಯುವನಾಯಕ ಭವಿಷ್ಯದ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ದು ಕಿ.ಮೀ. ದೂರ ತಿರುಗಾಡಿ 57 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಮಾತನಾಡಿದ್ದಾರೆ. ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮವೂ ಬಿರುಸಾಗಿ ನಡೆದಿದೆ. ತಂಬಾಕಿಗೆ ನ್ಯಾಯಯುತ ದರ ಕೊಡಿಸುವಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಲಾಗಿದ್ದು, ಶೀಘ್ರ ನಿಯೋಗದೊಂದಿಗೆ ಭೇಟಿ ಯಾಗೋಣ. ಮುಂಬರುವ ಚುನಾವಣೆಯಲ್ಲಿ ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮೈತ್ರಿ ಸರ್ಕಾರದಲ್ಲಿ ಮತ್ತೆ ಅಧಿಕಾರ ನಡೆಸಲಿದ್ದಾರೆ. ಮುಂದಿನ ವರ್ಷಗಳಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕರ್ತರ ಕೈಬಲಪಡಿಸಿ:
ಪಕ್ಷದ ಕಾರ್ಯಕರ್ತರು ಈಗಾಗಲೇ ಪಕ್ಷದ ಮುಖಂಡರನ್ನು ಆರಿಸುವ ಮೂಲಕ ಬಲಪಡಿಸಿದ್ದಾರೆ. ಇದೀಗ ಮುಂಬರುವ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಲಿ ಮುಖಂಡರು ಪಕ್ಷದ ಕಾರ್ಯಕರ್ತರ ಕೈ ಬಲಪಡಿಸಬೇಕು. ಕಾರ್ಯಕರ್ತರು ಬಲಗೊಳಿಸುವುದೇ ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ಮಾಜಿ ಸಚಿವ ಸಾ.ರಾ. ಮಹೇಶ್, ಪಕ್ಷದ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ಎಚ್.ಡಿ. ಕೋಟೆ ತಾಲೂಕಿನ ಮುಖಂಡ ಕೃಷ್ಣನಾಯಕ ಮಾತನಾಡಿದರು. ಪಿರಿಯಾಪಟ್ಟಣ ತಾಲೂಕು ಮಾಜಿ ಶಾಸಕ ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಮೈಸೂರು ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ವಿಧಾನ ಪರಿಷತ್ಸದಸ್ಯ ಮಂಜೇಗೌಡ, ಮಾಜಿ ಮೇಯರ್ ರವಿಕುಮಾರ್, ತಾಲೂಕು ಮುಖಂಡರಾದ ಬಸವಲಿಂಗಯ್ಯ, ಶರವಣ, ಎಚ್.ಪಿ. ಸತೀಶ್ ಕುಮಾರ್, ಕೃಷ್ಣರಾಜ ಗುಪ್ತ, ಸಿರಾಜ್, ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಬಿಳಿಕೆರೆ ಮಧು, ರಂಜಿತಾ ಚಿಕ್ಕಮಾದು, ದೇವರಾಜ ಒಡೆಯರ್ ಇತರರು ಇದ್ದರು.