ಸಾರಾಂಶ
ಚನ್ನಪಟ್ಟಣ : ಜೆಡಿಎಸ್ ಕುಸಿತ ಕಾಣುತ್ತಿದ್ದು, ನಶಿಸಿ ಹೋಗುತ್ತಿದೆ. ಪಕ್ಷ ನಶಿಸಿ ಹೋದಾಗ, ಶಾಸಕರು ಬೇರೆ ಕಡೆ ಮುಖ ಮಾಡುವುದು ಸಹಜ. ಅವರೆಲ್ಲ ನನ್ನ ಮಿತ್ರರಿದ್ದಾರೆ. ಅವಕಾಶ ಸಿಕ್ಕಿದರೆ ನೋಡೋಣ ಎನ್ನುವ ಮೂಲಕ ಆಪರೇಷನ್ ಹಸ್ತ ನಡೆಸುವ ಕುರಿತು ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಪರೋಕ್ಷ ಸುಳಿವು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಸಮುದಾಯ ತೀರ್ಮಾನ ಮಾಡಿದೆ. ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದಿಂದಲೇ ಅದು ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರೋ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ. ಬೆಳಗಾವಿ ಸದನದಲ್ಲಿ ಎಲ್ಲಾ ಶಾಸಕರು ಸಿಗುತ್ತಾರೆ. ಅವರ ಹತ್ತಿರ ಮಾತಾಡುತ್ತೇನೆ, ಚರ್ಚೆ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಕರೆತರುವ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ಬಹಳ ಚಾಲೆಂಜ್ ಮಾಡಿಕೊಂಡು ದೇವೇಗೌಡರು ಇಲ್ಲಿ ತಮ್ಮ ಮೊಮ್ಮಗನನ್ನು ನಿಲ್ಲಿಸಿದರು. ಹಳೇ ಮೈಸೂರಿನಲ್ಲಿ ರಾಮನಗರವೇ ಜೆಡಿಎಸ್ನ ಉದಯ. ಇಲ್ಲಿ ಅಸ್ತಿತ್ವ ಕಳೆದುಕೊಂಡ ಮೇಲೆ ಇನ್ನೇಲ್ಲಿದೆ ಪಕ್ಷ. ನಿಮ್ಮ ದಂಡನಾಯಕರೇ ಸೋತ ಮೇಲೆ ಸೈನಿಕರಿಗೆ ಇನ್ನೆಲ್ಲಿ ಇದೆ ಕೆಲಸ, ನೀವು ನಿಮ್ಮ ಅನುಕೂಲ ನೋಡಿಕೊಳ್ಳಿ, ಜೆಡಿಎಸ್ನಲ್ಲಿ ಭವಿಷ್ಯ ಇಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದರು.
ಜೆಡಿಎಸ್ ದೇವೆಗೌಡರು ಹುಟ್ಟುಹಾಕಿದ ಪಕ್ಷ ಅದು:
ದೇವೇಗೌಡರಿಗೆ ವಯೋಸಹಜ ಇರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಜೆಡಿಎಸ್ ಗೆ ಪರ್ಯಾಯವಾದ ನಾಯಕತ್ವ ಇಲ್ಲ, ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೧೯ ಸೀಟು ಪಡೆದುಕೊಂಡಿತ್ತು. ಅದರೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸಿರುವುದು ಕಾಣುತ್ತದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದರು.
ಇಡೀ ಕುಟುಂಬವೇ ಬಂದು ಚನ್ನಪಟ್ಟಣದಲ್ಲಿ ನಿಂತು ಹೋರಾಟ ಮಾಡಿದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸ್ಸು ಮಾಡಿದರೆ, ಅವರಿಗೆ ಬೇರೆ ಅವಕಾಶ ತಪ್ಪಿದರೆ ನೋಡಬಹುದು ಎಂದು ಮಾರ್ಮಿಕವಾಗಿ ನುಡಿದರು.
ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯ ನಾಯಕತ್ವಕ್ಕಾಗಿ ಹುಡುಕುತ್ತಾ ಇದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೊಣ. ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಸಮುದಾಯ ತೀರ್ಮಾನ ಮಾಡಿದೆ. ಈ ಚುನಾವಣೆ ಫಲಿತಾಂಶದಿಂದಲೇ ಅದು ಗೊತ್ತಾಗಿದೆ ಎಂದರು.
ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ ಎಂಬ ಸಿಎಂ ಹೇಳಿಕೆ ಚರ್ಚೆ ಬೆನ್ನಲ್ಲೇ ಜೆಡಿಎಸ್ ಶಾಸಕರು ಕೈ ಸೇರುತ್ತಾರೆ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಸುಭದ್ರವಾಗಿದೆ. ೧೩೬ ಇತ್ತು ಈಗ ೧೩೯ ಆಗಿದೆ. ಯಾಕೆ ಈ ರೀತಿ ಇಲ್ಲಸಲ್ಲದ ಊಹಾಪೋಹಗಳು. ನನ್ನ ಪೂರ್ತಿ ಸಮಯ ನಾನು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇನೆ. ಇಡೀ ಕುಟುಂಬ ನಿಂತು ಒಬ್ಬ ಸಾಮಾನ್ಯ ವ್ಯಕ್ತಿ ವಿರುದ್ಧ ದಾಳಿ ಮಾಡಿದ್ರಲ್ಲ ಎಂಬ ನೋವಿಂದ ಮಾತಾಡಿದ್ದೀನಿ. ನೋಡೊಣ ಮುಂದೆ ಯಾವೆಲ್ಲಾ ರಾಜಕೀಯ ಬೆಳವಣಿಗೆ ಆಗುತ್ತೆ ಎಂದು ಹೇಳಿದರು.
ಶಾಸಕರನ್ನು ಸೆಳೆಯುವ ವಿಚಾರದಲ್ಲಿ ನನಗೆ ಯಾರಾದರೂ ಜವಾಬ್ದಾರಿ ಕೊಟ್ಟರೆ ಅಂತಾ ಹೇಳಿದ್ದೇನೆ. ಆ ಜವಾಬ್ದಾರಿ ಯಾಕೆ ಈಗ. ನಾವೂ ಈಗಾಗಲೇ ೧೩೯ ಶಾಸಕರು ಇದ್ದೇವೆ. ಆ ವಿಚಾರದ ಕುರಿತು ಜೆಡಿಎಸ್ ಶಾಸಕರು ಮನಸ್ಸು ಮಾಡಬೇಕು. ದೇವೆಗೌಡರು ಫೇಲ್ ಆಗಿದ್ದಾರೆ. ಹಳ್ಳಿ ಹಳ್ಳಿಗೆ ಬಂದು, ಪ್ರಚಾರ ಮಾಡಿದರಲ್ಲ, ಏನಾಯ್ತು? ಜನ ಗೌರವ ಕೊಡಲಿಲ್ಲ, ಸಮುದಾಯ ಬೆಂಬಲ ಕೊಡಲಿಲ್ಲ, ಅವರ ಕುಟುಂಬ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ ಎಂದರು.
ಇನ್ನು ಯಾಕೆ ಸಮಾಜದ ಶಕ್ತಿ ಬಳಸಿಕೊಂಡು ಅವರ ಸ್ವಾರ್ಥಕ್ಕೆ ಕೆಲಸ ಮಾಡಿಕೊಳ್ತೀರಾ? ಇಡೀ ಕುಟುಂಬ ಎಲ್ಲ ಒಕ್ಕಲಿಗ ಶಕ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಫಲಿತಾಂಶ ನೋಡಿ, ಈ ರೀತಿ ಮಾತಾನಾಡಿದ್ದೇನೆ. ಕುಮಾರಸ್ವಾಮಿ ಅವರ ಆರ್ಭಟ, ಈ ಕುಯುಕ್ತಿ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಅಂತಾ ಹೇಳಿದ್ದೇನೆ ಎಂದರು.
ಎಚ್ಡಿಕೆ, ಬಿಎಸ್ವೈ, ಬಿವಿವೈ ಪಿತೂರಿಯಿಂದ ಬಿಜೆಪಿ ಬಿಟ್ಟೆ:
ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಪಕ್ಷದಿಂದ ಆಚೆ ತಳ್ಳಲ್ಪಟ್ಟಿದ್ದವನು ನಾನು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ ಎಂದು ಸಿ.ಪಿ.ಯೋಗೇಶ್ವರ್ ಆರೋಪಿಸಿದರು.
ಯೋಗೇಶ್ವರ್ ಕಾಂಗ್ರೆಸ್ನಲ್ಲೇ ಉಳಿತಾರ ಎಂಬ ಚರ್ಚೆ ಪ್ರಶ್ನೆಗೆ, ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡ್ತೀನಿ ಅಂತಾ ಹೇಳಿದ್ದೇನೆ. ನಾನು ಪಕ್ಕಾ ಕಾಂಗ್ರೆಸ್ಸಿಗ, ನಾನು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಏನು ಅಲ್ಲಿಂದ, ಇಲ್ಲಿಂದ ಹಾರುವವನಲ್ಲ. ಅನಿವಾರ್ಯ ರಾಜಕೀಯ ಸ್ಥಿತಿಯಿಂದ ನಾನು ಆ ರೀತಿ ಮಾಡಿದೆ. ನಾನು ಕೊನೆ ದಿನದವರೆಗೂ ಕಾದು ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು ಎಂದರು.
ಮಗನನ್ನು ಗೆಲ್ಲಿಸದ ಮೇಲೆ ಕೇಂದ್ರ ಸಚಿವರಾಗಿ ಏನು ಪ್ರಯೋಜನ:
ತಮ್ಮ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದ ಮೇಲೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಯೋಗೇಶ್ವರ್ ಟಾಂಗ್ ನೀಡಿದರು.
ಜೆಡಿಎಸ್ನವರು ಸೋತು ಸುಣ್ಣ ಆಗಿದ್ದಾರೆ. ಕುರುಕ್ಷೇತ್ರದ ಕಥೆ ರೀತಿ ಬಭ್ರುವಾಹನ ಹೇಳ್ತಾನಲ್ಲ, ಮಗನನ್ನು ಯುದ್ದ ಭೂಮಿಗೆ ಕಳಿಸಿ ನೀನು ರಣಹೇಡಿ ಆಗ್ಬಿಟ್ಟೆ ಅಂತಾ. ಇವತ್ತು ಕೂಡ ಅದೇ ಪರಿಸ್ಥಿತಿ. ಕುಮಾರಸ್ವಾಮಿಯದು ಬಂಡತನ, ಅವರಿಗೆ ಇದ್ರೆ ಈ ಊರು, ಬಿಟ್ರೆ ಇನ್ನೊಂದು ಊರು ಎಂದು ವ್ಯಂಗ್ಯವಾಡಿದರು.
ಎಚ್ಡಿಕೆ ಮಾಡಿರುವ ಅಧ್ವಾನ ಸರಿಪಡಿಸಬೇಕು:
ಚನ್ನಪಟ್ಟಣ ನಗರದಲ್ಲಿ ಕುಮಾರಸ್ವಾಮಿ ಮಾಡಿರುವ ಅಧ್ವಾನ ಸರಿಪಡಿಸಬೇಕು. ಚನ್ನಪಟ್ಟಣ ನಗರ ಸ್ವಚ್ಛ ಮಾಡುವ ಉದ್ದೇಶದಿಂದ
ಎಲ್ಲಾ ನಗರಸಭಾ ಸದಸ್ಯರ ಸಭೆ ಕರೆದಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದರು. ಚನ್ನಪಟ್ಟಣ ನಗರ ಬಹಳ ದುಸ್ಥಿತಿಯಲ್ಲಿದೆ, ಬಸ್ ಸ್ಟ್ಯಾಂಡ್, ಕಸ, ಯುಜಿಡಿ ಸಮಸ್ಯೆ ಇದೆ. ಇವೆಲ್ಲವನ್ನೂ ಮೊದಲು ಬಗೆಹರಿಸಬೇಕು. ಕುಮಾರಸ್ವಾಮಿ ಮಾಡಿರೋ ಅಧ್ವಾನ ಸರಿಪಡಿಸಬೇಕು. ನಿರಂತರವಾಗಿ ತಾಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು.