ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಖಂಡಿಸಿ ಜೆಡಿಎಸ್ ಪ್ರತಿಭಟನೆ

| Published : Mar 07 2025, 12:50 AM IST

ಸಾರಾಂಶ

ಗೃಹಲಕ್ಷ್ಮೀ ಹಣ ಮಹಿಳೆಯರ ಖಾತೆಗೆ ಸಂದಾಯವಾಗುತ್ತಿಲ್ಲ. ರಾಜ್ಯದ ಖಜಾನೆಯ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಿಳಿಸಿ, ಇಲ್ಲವೇ ಈ ಕೂಡಲೇ ಗೃಹಲಕ್ಷ್ಮೀ ಹಣ 2000 ರು.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಬೇಕು. ಸ್ಥಳೀಯ ಚುನಾವಣೆಗಳನ್ನು ತಾಪಂ, ಜಿಪಂ ಹಾಗೂ ನಗರ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಿ, ಸ್ಥಳೀಯ ಸಂಸ್ಥೆಯನ್ನು ಬಲವರ್ಧನೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಜಾತ್ಯತೀತ ಜನತಾದಳದ ವತಿಯಿಂದ ಗೃಹಲಕ್ಷ್ಮೀ ಹಾಗೂ ಸ್ಥಳೀಯ ಚುನಾವಣೆಗಳ ವಿಳಂಬ ನೀತಿ ಖಂಡಿಸಿ ಜೆಡಿಎಸ್‌ ಪದಾಧಿಕಾರಿಗಳು ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ನಡೆದಿಲ್ಲ. ಚುನಾವಣಾ ಆಯೋಗದ ನಿಯಮದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರಪಾಲಿಕೆ ಚುನಾವಣೆ ನಡೆಸಬೇಕು. ಗೃಹಲಕ್ಷ್ಮೀ ಯೋಜನೆಯಡಿ ಕಳೆದೆರಡು ತಿಂಗಳಿಂದ ಹಣ ಬಿಡುಗಡೆ ಆಗಿಲ್ಲ. ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಗೃಹಲಕ್ಷ್ಮೀ ಹಣ ಮಹಿಳೆಯರ ಖಾತೆಗೆ ಸಂದಾಯವಾಗುತ್ತಿಲ್ಲ. ರಾಜ್ಯದ ಖಜಾನೆಯ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಿಳಿಸಿ, ಇಲ್ಲವೇ ಈ ಕೂಡಲೇ ಗೃಹಲಕ್ಷ್ಮೀ ಹಣ 2000 ರು.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಬೇಕು. ಸ್ಥಳೀಯ ಚುನಾವಣೆಗಳನ್ನು ತಾಪಂ, ಜಿಪಂ ಹಾಗೂ ನಗರ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಿ, ಸ್ಥಳೀಯ ಸಂಸ್ಥೆಯನ್ನು ಬಲವರ್ಧನೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಸ್‌ ಸೌಲಭ್ಯವಿಲ್ಲದೆ ತೊಂದರೆಯಾಗುತ್ತಿದೆ. ಪರೀಕ್ಷೆ ಸಮಯವಾದ್ದರಿಂದ ಬಸ್‌ ಗಳು ಸಿಗದೆ ವಿದ್ಯಾರ್ಥಿಗಳು ತಡವಾಗಿ ಕಾಲೇಜಿಗೆ ಬರುವಂತಾಗಿದೆ. ಆದ್ದರಿಂದ ಸೂಕ್ತ ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಂ.ಅಶ್ವಿನ್‌ ಕುಮಾರ್‌, ಕೆ. ಮಹದೇವ್, ಮಾಜಿ ಮೇಯರ್‌ಗಳಾದ ಎಂ.ಜೆ. ರವಿಕುಮಾರ್‌, ಆರ್‌. ಲಿಂಗಪ್ಪ, ಮಾಜಿ ಉಪ ಮೇಯರ್‌ ಕೃಷ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ಟಿ. ಚೆಲುವೇಗೌಡ, ರಮೇಶ್‌, ಅಶ್ವಿನಿ ಅನಂತು, ಶೋಭಾ, ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕೆ.ಆರ್. ಕ್ಷೇತ್ರದ ಸಂತೋಷ್, ಎನ್.ಆರ್. ಬ್ಲಾಕ್ ರಾಮು, ಚಾಮರಾಜ ಬ್ಲಾಕ್ ಮಂಜಣ್ಣ, ಯುವ ಜೆಡಿಎಸ್‌ ಉಪಾಧ್ಯಕ್ಷ ರಾಮ, ಪ್ರಕಾಶ್‌ ಪ್ರಿಯದರ್ಶನ್‌ ಮೊದಲಾದವರು ಇದ್ದರು.