ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಲ್ಲಿ ಹಲವಾರು ಹಗರಣಗಳು, ಕೋಟ್ಯಂತರ ರೂಪಾಯಿಗಳ ಅವ್ಯಹಾರ ಹಾಗೂ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಇಂಡಿಯಲ್ಲಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮಿನಿ ವಿಧಾನಸೌಧ ತೆರಳಿದರು. ಈ ವೇಳೆ ಗ್ರೇಡ್-2 ತಹಸೀಲ್ದಾರ್ ಆರ್.ಬಿ.ಮೂಗಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ, ವಾಲ್ಮೀಕಿ ನಿಗಮದ ಕೋಟ್ಯಂತರ ರೂಪಾಯಿಗಳ ಅವ್ಯಹಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲರು ಆರೋಪಿಸಿದ ವಸತಿ ಹಗರಣ ನಾಚಿಕೆಗೇಡಿನ ಸಂಗತಿ. ಪಂಚಗ್ಯಾರಂಟಿಗಳನ್ನು ಅರ್ಧಂಬರ್ದ ನೀಡಿ, ಬೆಲೆಯೇರಿಕೆ ಮುಖಾಂತರ ಬಡ ಮಧ್ಯಮ ವರ್ಗದ ಜನರಿಗೆ ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಬಡವರ ವಿರೋಧಿ ಸರ್ಕಾರ ಎಂದು ಆರೋಪಿಸಿದರು. ಕೃಷ್ಣಾ ಕಾಲುವೆಗಳ ದುರಸ್ತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ, ಹಿರೇಬೇವನೂರ ಹಾಗೂ ನಾದ ಗೋಳಸಾರ, ಮಿರಗಿ ಮುಂತಾದ ಗ್ರಾಮಗಳಲ್ಲಿ ಕೃಷ್ಣಾ ಕಾಲುವೆಗಳ ವಿತರಣಾ ಕಾಲುವೆಗಳು ಮುಚ್ಚಿ ಹೋಗಿವೆ. ದುರಸ್ತಿ ಕಾಣದೆ ರೈತರು ಕಂಗಾಲಾಗಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿಯ ಕೊನೆಯ ಹಳ್ಳಿಗಳ ಪ್ರದೇಶಕ್ಕೆ ನೀರು ಕನಸಿನ ಮಾತಾಗಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ತ್ವರಿತ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಅಯೂಬ್ ನಾಟೀಕರ, ಶ್ರೀಶೈಲಗೌಡ ಪಾಟೀಲ್, ಎಸ್ಐಟಿಯುನ ಸಂಘಟನೆಯ ಭಾರತಿ ವಾಲಿ ಮಾತನಾಡಿದರು. ಪ್ರತಿಭಟನೆಯಲ್ಲಿ ಭೀಮ ಪೂಜಾರಿ, ಸಿದ್ದು ಡಂಗಾ, ಶ್ರೀಮಂತ ಪೂಜಾರಿ, ಮಹಿಬೂಬ ಬೇವನೂರ, ಹಣಮಂತ ಹೂನ್ನಳಿ, ದುಂಡು ಬಿರಾದಾರ, ಮಲಗು ಪೂಜಾರಿ, ಬಸವರಾಜ ಹಂಜಗಿ, ರಾಜು ಮುಲ್ಲಾ, ಮಾಳು ಮ್ಯಾಕೇರಿ, ನಾರಾಯಣ ವಾಲಿಕಾರ, ಇಸಾಕ್ ಸೌದಾಗರ, ಶಾಮ ಪೂಜಾರಿ, ಪಜಲು ಮುಲ್ಲಾ, ಶಿವಾಜಿ ಬೀರಪ್ಪಗೋಳ, ವಿಠ್ಠಲ ಮೇಸ್ತ್ರಿ, ಲಕ್ಕಿ ಲಚ್ಯಾಣ, ಸುದರ್ಶನ ಉಪಾಧ್ಯಾಯ, ಯಶವಂತ ಕಾಡೆಗೋಳ, ವಿಠ್ಠಲ ಮಿರಗಿ, ಸಾಗರ ಮಾನೆ ಮುಂತಾದವರು ಇದ್ದರು.