ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮರ ನಿಧನಕ್ಕೆ ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಲೀಲಾವತಿ ಬಡಾವಣೆಯ ಮಾಜಿ ಸಚಿವ ಡಿ.ಸಿ.ತಮ್ಮಣ್ಣರ ನಿವಾಸದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಚೆನ್ನಮ್ಮ ಅವರು ರಾಜಕೀಯ ಕುಟುಂಬದಲ್ಲಿ ಹುಟ್ಟದಿದ್ದರೂ ಸಹ ರಾಜಕಾರಣಿ ದೇವೇಗೌಡರ ಕೈಹಿಡಿದು ಅವರ ಜೀವನದ ಸಂಗಾತಿಯಾಗಿ ಜನ ಮೆಚ್ಚುಗೆಯ ಬಾಳ್ವೆ ನಡೆಸಿದ್ದಾರೆ ಎಂದು ಬಣ್ಣಿಸಿದರು.

ತಮ್ಮ ಕುಟುಂಬ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಪ್ರಜ್ವಲ್, ಡಾ.ಸಿ.ಎನ್.ಮಂಜುನಾಥ್ ಉನ್ನತ ಸ್ಥಾನ ಕೇರಿ ರಾಜಕೀಯವಾಗಿ ಗುರುತಿಸಿಕೊಂಡಿದ್ದರು ಸಹ ಚೆನ್ನಮ್ಮ ಅವರು ಈ ಎಲ್ಲರ ಪ್ರಭಾವವನ್ನು ರಾಜಕೀಯವಾಗಿ ದುರುಪಯೋಗಪಡಿ ಕೊಂಡ ಉದಾಹರಣೆಗಳು ಇಲ್ಲ ಎಂದರು.


ತಮ್ಮ ಮನೆಗೆ ಬಂದ ಬಡಬಗ್ಗರಿಗೆ, ಅಸಾಹಯಕರ ಕಷ್ಟ ಸುಖಗಳಿಗೆ ಸ್ಪಂದಿಸಿ ಅತಿಥಿ ಸತ್ಕಾರ ಮಾಡುವುದರೊಂದಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಎಲೆಮರೆಕಾಯಿಯಂತೆ ನಿಂತು ತಮ್ಮ ಪ್ರಭಾವದಿಂದ ಲಕ್ಷಾಂತರ ಜನರು ಉದ್ಯೋಗ ಪಡೆಯಲು ಕಾರಣರಾಗಿದ್ದಾರೆ ಎಂದು ಶಾಸಕ ತಮ್ಮಣ್ಣ ಸ್ಮರಿಸಿದರು.

ಸಭೆಯಲ್ಲಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ರಾಮಚಂದ್ರ ಶೆಟ್ಟಿ, ಮುಖಂಡರಾದ ಕೆ.ಟಿ.ರಾಜಣ್ಣ, ಜಿ.ಟಿ.ಪುಟ್ಟಸ್ವಾಮಿ, ಕೂಳೆಗೆರೆ ಶೇಖರ್, ಹೊನ್ನೇಗೌಡ, ತಾಪಂ ಮಾಜಿ ಅಧ್ಯಕ್ಷೆ ಚೌಡಮ್ಮ, ಮನ್ಮುಲ್ ಮಾಜಿ ನಿರ್ದೇಶಕ ಉಮೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್, ಹೊಸಕೆರೆ ದಯಾನಂದ ಸೇರಿದಂತೆ ಅನೇಕ ಮುಖಂಡರು ಶ್ರದ್ಧಾಂಜಲಿ ಭಾಗವಹಿಸಿದ್ದರು.