ಸಾರಾಂಶ
- ಬೆಂಗಳೂರಿನ ಕ್ಯೂ -ಸ್ಪೈಡರ್ಸ್ ಟ್ರೈನಿಂಗ್- ಪ್ಲೇಸ್ಮೆಂಟ್ ಸಿಇಒ ಜತೆ ಚರ್ಚೆ
- - - - ಟೆಸ್ಟ್ ಯಂತ್ರ ಸಾಫ್ಟ್ವೇರ್ ಕಂಪನಿಗೂ ಭೇಟಿ ನೀಡಿದ ಸಂಸದೆ ಡಾ.ಪ್ರಭಾ- ದಾವಣಗೆರೆಯಲ್ಲೇ ಉಚಿತ ತರಬೇತಿ ನೀಡಲು ಸಿಇಒ ಗಿರೀಶ್ ರಾಮಣ್ಣ ಸಮ್ಮತಿ
- ಶೀಘ್ರದಲ್ಲೇ ದಾವಿವಿ ಸಹಭಾಗಿತ್ವದಲ್ಲಿ ತರಬೇತಿ ಆಯೋಜಿಸಲು ಕುಲಪತಿಗೆ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿಯೇ ಉದ್ಯೋಗ ಆಧಾರಿತ ತರಬೇತಿ ಕೊಡಿಸುವ ಅವಶ್ಯಕತೆ ಮನಗಂಡಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬೆಂಗಳೂರಿನ ಕ್ಯೂ -ಸ್ಪೈಡರ್ಸ್ (Q-spiders) ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟ್ವೇರ್ ಕಂಪನಿಗೆ ಭೇಟಿ ನೀಡಿ, ಕ್ಯೂ-ಸ್ಪೈಡರ್ಸ್ (Q-spiders) ಸಂಸ್ಥಾಪಕ ಹಾಗೂ ಸಿಇಒ ಗಿರೀಶ್ ರಾಮಣ್ಣ ಜತೆ ಚರ್ಚಿಸಿದರು.
ದಾವಣಗೆರೆ ಜಿಲ್ಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಾಧಾರಿತ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ತರಬೇತಿ ಶುಲ್ಕ, ಊಟ ಮತ್ತು ವಸತಿಗಳಿಗೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಮನಗಂಡಿರುವ ಸಂಸದೆ ಡಾ ಪ್ರಭಾ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜತೆ ಚರ್ಚಿಸಿ, ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆಯಲ್ಲಿಯೇ ತರಬೇತಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದರು.ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬೇಕಾಗುವ ತರಬೇತಿ ಕೇಂದ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಬದ್ಧರಾಗಿ, ಕ್ಯೂ -ಸ್ಪೈಡರ್ಸ್ನ ಸಿಇಒ ಗಿರೀಶ್ ಜತೆ ಮಾತುಕತೆ ನಡೆಸಿದರು.
ಈ ವೇಳೆ ಸಂಸದರ ಕಾಳಜಿಗೆ ಒಪ್ಪಿದ ಗಿರೀಶ್ ಅವರು ಕಂಪನಿಯ ಸಾಮಾಜಿಕ ಜವಾಬ್ದಾರಿ ಹಾಗೂ ಸಿಎಸ್ಆರ್ ಯೋಜನೆಯಲ್ಲಿ ಉಚಿತವಾಗಿ ದಾವಣಗೆರೆಯಲ್ಲಿಯೇ ತರಬೇತಿ ಕೊಡಲು ಸಮ್ಮತಿಸಿದರು. ದಾವಣಗೆರೆ ವಿವಿ ಕುಲಪತಿ ಡಾ. ಬಿ.ಡಿ. ಕುಂಬಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು, ಶೀಘ್ರದಲ್ಲೇ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ತರಬೇತಿ ಪ್ರಾರಂಭಿಸಲು ಸೂಚಿಸಿದರು.ದಾವಣಗೆರೆಯಲ್ಲಿ ಸಾಫ್ಟ್ವೇರ್ ಸ್ಟಾರ್ಟ್ ಅಪ್ ಮತ್ತು ಕಾರ್ಪೋರೇಟ್ ಆಫೀಸ್ಗಳು ಕಾರ್ಯನಿರ್ವಹಿಸುವ ಸಾಧ್ಯತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ತಾಲೂಕು ಹಾಗೂ ಹೋಬಳಿಮಟ್ಟದಲ್ಲಿ ಮಹಿಳೆಯರಿಗೆ ಗಾರ್ಮೆಂಟ್ಸ್ ಮತ್ತು ಇತರೇ ಉದ್ಯಮಗಳ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂದರ್ಭ ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯರಾದ ಡಾ.ಪ್ರಶಾಂತ್ ಎನ್.ಸಿ., ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಟೇಲ್, ಸತೀಶ್ ಕುಮಾರ್.ಎಲ್, ಸಮರ್ಥ್ ಶಾಮನೂರು ಇತರರು ಇದ್ದರು.- - - -22ಕೆಡಿವಿಜಿ39.ಜೆಪಿಜಿ:
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬೆಂಗಳೂರಿನ ಕ್ಯೂ -ಸ್ಪೈಡರ್ಸ್ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ನ ಸಂಸ್ಥಾಪಕ ಹಾಗೂ ಸಿಇಒ ಗಿರೀಶ್ ರಾಮಣ್ಣ ಜತೆ ಚರ್ಚಿಸಿದರು.