ಸಾರಾಂಶ
ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ
ಕನ್ನಡಪ್ರಭ ವಾರ್ತೆ ಕಾರಟಗಿಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಜನರಿಗೆ ವರದಾನವಾಗಿದೆ ಎಂದು ಸಾಮಾಜಿಕ ಪರಿಶೋಧನೆ ವ್ಯವಸ್ಥಾಪಕಿ ರೇಣುಕಾ ಕುಲಕರ್ಣಿ ಹೇಳಿದರು.
ತಾಲೂಕಿನ ಬರಗೂರು ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಮತ್ತು ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದರು.ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಿ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಒದಗಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಯೋಜನೆ ಸಹಕಾರಿಯಾಗಿದೆ ಎಂದರು.
ನಂತರ ಏಪ್ರಿಲ್ ೧, ೨೦೨೩ರಿಂದ ಮಾರ್ಚ್ ೩೧, ೨೦೨೪ವರೆಗೆ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು, ನರೇಗಾ ಯೋಜನೆ ಹಾಗೂ ತಾಪಂ, ಜಿಪಂನ ೧೫ ಹಣಕಾಸು ಆಯೋಗದಡಿ ಅನುಷ್ಠಾನವಾದ ಕಾಮಗಾರಿಗಳ ಮಾಹಿತಿ, ಕಾಮಗಾರಿಗಳಿಗೆ ಭರಿಸಲಾದ ಕೂಲಿ, ಸಾಮಗ್ರಿ ವೆಚ್ಚಗಳ ಮಾಹಿತಿ ನೀಡಿದರು.ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಚರ್ಚಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಪಿಡಿಒ ಬಸಪ್ಪ ಉತ್ತರ ನೀಡಿದರು.
ತಾಪಂ ಐಇಸಿ ಸಂಯೋಜಕ ಸೋಮನಾಥ ನರೇಗಾ ಯೋಜನೆಯ ಸಂಬಂಧಿಸಿದ ಮಾಹಿತಿ ನೀಡುವ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಏಕೀಕೃತ ಸಹಾಯವಾಣಿ ಸಂಖ್ಯೆ- ೮೨೭೭೫೦೬೦೦೦ ಬಗ್ಗೆ ಮಾಹಿತಿ ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಯಂಕಪ್ಪ, ಸದಸ್ಯರಾದ ಭಾಗ್ಯಶ್ರೀ, ಮುದಿಯಪ್ಪ, ದೇವಣ್ಣ, ಅಮರೇಶ್, ಕಿಶೋರ್, ಶರಣಪ್ಪ, ರತ್ನಮ್ಮ, ಅನಿಲ್ ಕುಮಾರ್, ಸೇರಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಗುಂಪಿನ ಸದಸ್ಯರು, ಸಾರ್ವಜನಿಕರು ಇದ್ದರು.