ಸಾರಾಂಶ
ಗೋಕರ್ಣ: ಯುವಕರು ತಮ್ಮ ದೇಹವನ್ನು ಬಲಿಷ್ಠಗೊಳಿಸುವ ಜೊತೆ ಬಲಿಷ್ಠ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿ ರಾಷ್ಟ್ರದ ಅಭಿವೃದ್ಧಿಗೆ ಜೊತೆಯಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಕರ್ನಾಟಕ ರಾಜ್ಯ ದೇಹದಾರ್ಢ್ಯ ಸಂಸ್ಥೆ, ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಶಿವ ಮಲ್ಟಿ ಜಿಮ್ ವತಿಯಿಂದ ಶನಿವಾರ ಸಂಜೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಹೇಳಿದಂತೆ ಯುವಶಕ್ತಿ ಸದೃಡಗೊಂಡರೆ ಸಮೃದ್ಧ ರಾಷ್ಟ್ರವಾಗುತ್ತದೆ. ಅದರಂತೆ ಇಂತಹ ಕಾರ್ಯಕ್ರಮದಿಂದ ದೇಶ ಸೇವೆಗೆ ದೊರೆಯುವ ಯುವಕರು ಹೆಚ್ಚ ಬೇಕು ಎಂದರು.ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿಗುರೂಜಿ ಮಾತನಾಡಿ, ಬಲಾಢ್ಯ ದೇಹದ ಬಗ್ಗೆ ಪುರಾಣದಲ್ಲೂ ಉಲ್ಲೇಖವಿದೆ. ರಾಮಾಯಣದಲ್ಲಿ ವಜ್ರಕಾಯದ ಹನುಮಂತನನ್ನು ವರ್ಣಿಸಲಾಗಿದೆ. ಹೀಗೆ ಸದೃಢ ದೇಹದಿಂದ ಮನಸ್ಸಿನ ನಿಗ್ರಹತೆಯೊಂದಿಗೆ ನಾವು ನಮ್ಮ ಗುರಿ ತಲುಪಿ ಸಾಧನೆ ಮಾಡಲು ಸಾಧ್ಯ ಎಂದರು.
ಈ ಹಿಂದೆ ವ್ಯಾಯಾಮ ಶಾಲೆ ಎಂದಿದ್ದು, ಆಧುನಿಕತೆಯಲ್ಲಿ ಜಿಮ್ ಆಗಿ ಪರಿವರ್ತನೆಯಾಗಿದೆ. ಇಂತಹ ಕೇಂದ್ರಗಳು ಹೆಚ್ಚು ನಡೆಯಲಿ ಎಂದರು.ಮೊದಲ ವರ್ಷ ರಾಜ್ಯ ಮಟ್ಟದ ಸ್ಪರ್ಧೆ ನಡೆಸಿದಾಗ ಮಹಾಬಲ ಎಂದು ಹೆಸರಿಡಲು ಸೂಚಿಸಿದ್ದೆ. ಅದರಂತೆ ಸತತ ಹತ್ತು ವರ್ಷದಿಂದ ಸ್ಪರ್ಧೆ ನಡೆಯುತ್ತಿದ್ದು, ಇದಕ್ಕೆ ಕ್ಷೇತ್ರಾಧೀಶ್ವರ ಮಹಾಬಲನ ಆರ್ಶೀವಾದ ಕಾರಣವಾಗಿದೆ. ಮುಂದಿನ ದಿನದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆ ಇಲ್ಲಿ ನಡೆಯಲಿ. ಇದಕ್ಕೆ ತನ್ನ ಸಹಕಾರ ನೀಡುವುದಾಗಿ ಹೇಳಿದರು.
ಗೋಪಾಲಕೃಷ್ಣ ನಾಯಕ, ಲಯನ್ಸ್ ಕ್ಲಬ್ನ ಸದಸ್ಯ ಅನಿಲ್ ಶೇಟ್ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಮಾತನಾಡಿದರು.ಇದೇ ವೇಳೆ ದಕ್ಷಿಣ ಭಾರದ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಕಾರವಾರ ದೇಹದಾರ್ಢ್ಯ ಪಟು ಅಮನ್ ಶೇಖ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ವಿನಾಯಕ ನಾಯಕ, ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ನಾಯ್ಕ, ಕಾರ್ಯದರ್ಶಿ ಜಿ.ಡಿ. ಭಟ್, ಖಜಾಂಚಿ ದಿಲೀಪಕುಮಾರ, ಬಿಜೆಪಿ ತಾಲೂಕಾಧ್ಯಕ್ಷ ಜಿ.ಐ. ಹೆಗಡೆ, ಪ್ರಮುಖ ಕುಮಾರ ಮಾರ್ಕಾಂಡೆ ಇದ್ದರು.ಘನಪಾಠಿ ಮಹಾಬಲೇಶ್ವರ ಶಂಕರಲಿಂಗರವರ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ವೇತಾ ಹರಿಕಂತ್ರ, ಸಾತ್ವಿಕ ವಾಸು ನಾಯ್ಕ, ಶ್ರದ್ದಾ ಹರಿಕಂತ್ರ ಭರತನಾಟ್ಯ ಹಾಗೂ ಶಿವ ತಾಂಡವ ನೃತ್ಯ ಶ ಟೈಕಾಂನಡೂ ಕರಾಟೆ ತಂಡದಿಂದ ಕರಾಟೆ ಪ್ರದರ್ಶನ, ಆಕರ್ಷಕ ಡ್ಯಾನ್ಸ್ ಧಮಾಕ ನಡೆಯಿತು. ಪತ್ರಕರ್ತ ಸುಭಾಷ ಕಾರೇಬೈಲ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ವಿಭಾಗದ ದೇಹದಾರ್ಢ್ಯ ಸ್ಪರ್ಧೆ ನಡೆಯಿತು. ರಾಜ್ಯದ ವಿವಿದೆಡೆಯಿಂದ ಸ್ಪರ್ಧಾಗಳು ಪಾಲ್ಗೊಂಡಿದ್ದರು.