23ರಂದು ದಾವಣಗೆರೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರುದ್ರಮುನಿ

| Published : Oct 21 2024, 12:42 AM IST / Updated: Oct 21 2024, 12:43 AM IST

ಸಾರಾಂಶ

ಸದಾಶಿವ ಆಯೋಗದ ಒಳಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಒತ್ತಾಯಿಸಿ ಅ.23ರಂದು ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಮಾದಿಗ ಮತ್ತು ಛಲವಾದಿ ಸಮಾಜದ ಬಾಂಧವರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದ ಮುಖಂಡ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಮನವಿ ಮಾಡಿದರು.

- ಒಳಮೀಸಲಾತಿ ಸೌಲಭ್ಯ ಪಡೆಯಲು 30 ವರ್ಷಗಳಿಂದ ನಿರಂತರ ಹೋರಾಟ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸದಾಶಿವ ಆಯೋಗದ ಒಳಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಒತ್ತಾಯಿಸಿ ಅ.23ರಂದು ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಮಾದಿಗ ಮತ್ತು ಛಲವಾದಿ ಸಮಾಜದ ಬಾಂಧವರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದ ಮುಖಂಡ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಮನವಿ ಮಾಡಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಸದಾಶಿವ ಆಯೋಗದ ಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಬುಧವಾರ ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಹಿನ್ನೆಲೆ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದೇಶ ಬಂದು ಮೂರು ತಿಂಗಳು ಗತಿಸಿದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮೀನ-ಮೇಷ ಎಣಿಸುತ್ತಿದೆ. ಇದರಿಂದಾಗಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಗುವುದು ಎಂದರು.

ಮಾದಿಗ ಮತ್ತು ಛಲವಾದಿ ಜನಾಂಗದವರು ಈಗ ಹೋರಾಟ ನಡೆಸದಿದ್ದರೆ ಮುಂದಿನ ದಿನಗಳು ತುಂಬಾ ಅಪಾಯಕಾರಿ ಆಗಲಿವೆ. ಪ್ರಸ್ತುತ ದಿನದಲ್ಲಿ ಪರಿಶಿಷ್ಟ ಜಾತಿ ಜನಾಂಗದಲ್ಲಿ ಮಾದಿಗ ಮತ್ತು ಛಲವಾದಿ ಸಮಾಜಕ್ಕೆ ಅನ್ಯಾಯ ಆಗಿರುವುದು ದಿಟವಾಗಿದೆ. ಈ ಒಳಮೀಸಲು ಸೌಲಭ್ಯಕ್ಕಾಗಿ 30 ವರ್ಷಗಳಿಂದ ಹೋರಾಟ ನಡೆದಿದೆ. ಈಗ ಸುಪ್ರೀಂ ಕೋರ್ಟ್ ನ್ಯಾಯಯುತ ಆದೇಶ ಪ್ರಕಟಿಸಿದ್ದು, ರಾಜ್ಯ ಸರ್ಕಾರ ತಡ ಮಾಡದೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಮಾತನಾಡಿ, ಸಂಘಟನೆಯಿಂದ ಹೋರಾಟ ಮಾಡದಿದ್ದರೆ ಯಾವುದೇ ಬೇಡಿಕೆ ಈಡೇರುವುದಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸಿದರೆ ಮಾತ್ರ ನಮ್ಮ ಬೇಡಕೆ ಈಡೇರಲು ಸಾಧ್ಯ. ನಮ್ಮ ವರ್ಗಕ್ಕೆ ಸೇರಿದ ಮಂತ್ರಿಗಳು ಒಳಮೀಸಲಾತಿ ಬಗ್ಗೆ ಬಾಯಿಬಿಡದೇ ಸುಮ್ಮನೆ ಕುಳಿತಿದ್ದಾರೆ. ಅವರ ಮನೆಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಡಿಎಸ್‍ಎಸ್ ಮುಖಂಡರಾದ ಪ್ರೊ. ಮಲ್ಲಿಕಾರ್ಜುನ ಹಲಂಸಗಿ, ದಿಡಗೂರು ತಮ್ಮಣ್ಣ, ಮಲ್ಲೇಶ್, ಆರ್. ನಾಗಪ್ಪ, ಈಶ್ವರನ್, ಶೇಖರಪ್ಪ, ನಿರಂಜನ್, ಮುಂಜುನಾಥ ಕುರುವ, ಮೋಹನ್, ಹನುಮಂತಪ್ಪ ಹಾಜರಿದ್ದು ಮಾತನಾಡಿದರು.

- - -

ಬಾಕ್ಸ್‌ * ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು ಒಕ್ಕೂಟದ ಜಿಲ್ಲಾ ಮುಖಂಡ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್ ಮಾತನಾಡಿ, ಮೀಸಲಾತಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು. ಕೆಳಗೆ ಬಿದ್ದವರನ್ನು ಮೇಲೆತ್ತುವ ಕೆಲಸಕ್ಕಾಗಿ ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದಿದ್ದಾರೆ. 70ರ ದಶಕದಲ್ಲಿ ಎಸ್‌ಸಿ ಮೀಸಲಾತಿ ಕೋಟಾದಲ್ಲಿ ಕೆಲವು ಇಲ್ಲದ ಜಾತಿಗಳನ್ನು ಸೇರಿಸಿ, ಮಾದಿಗ ಮತ್ತು ಛಲವಾದಿ ಜನಾಂಗಕ್ಕೆ ಅನ್ಯಾಯ ಮಾಡಲಾಯಿತು. ಆಗಿರುವ ಈ ಅನ್ಯಾಯ ಸರಿಪಡಿಸಲು ಈಗ ಒಳ್ಳೆಯ ಸಮಯ ಬಂದಿದೆ. ಸರ್ಕಾರ ಆದಷ್ಟು ಬೇಗನೆ ಒಳಮೀಸಲಾತಿಗೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

- - -

-20ಎಚ್ಎಲ್.ಐ2:

ಹೊನ್ನಾಳಿ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪೂರ್ವಭಾವಿ ಜಿಲ್ಲಾ ಮುಖಂಡ, ನಿವೃತ್ತ ಎಸ್‌ಪಿ ರುದ್ರಮುನಿ ಮಾತನಾಡಿದರು.