ಸಾರಾಂಶ
ಪರಿಸರವಾದಿ ಜೋಸೆಫ್ ಹೂವರ್ ಆರೋಪಗಳನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಅಲ್ಲಗಳೆದಿದ್ದಾರೆ.
ಗುಂಡ್ಲುಪೇಟೆ : ಪರಿಸರವಾದಿ ಜೋಸೆಫ್ ಹೂವರ್ ಆರೋಪಗಳನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಅಲ್ಲಗಳೆದಿದ್ದಾರೆ.
ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸರವಾದಿ ಜೋಸೆಫ್ ಹೂವರ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರುವುದೆಲ್ಲ ಸುಳ್ಳಿನಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದರು.
ನಾನು ಹೊಸದಾಗಿ ಬಂಡೀಪುರ ಡಿಸಿಎಫ್ ಆಗಿ ಬಂದಾಗ ಕಳ್ಳ ಬೇಟೆ ಶಿಬಿರಗಳನ್ನು ನವೀಕರಣ ಮಾಡಲು ಕಾರ್ಪೋರೇಟ್ ಮಂದಿ ಮುಂದೆ ಬಂದಿದ್ದಾರೆ ಎಂದಾಗ ನಾನೇ ಕಳ್ಳಬೇಟೆ ಶಿಬಿರ ನೋಡಿ ಬರಲು ಅವಕಾಶ ನೀಡಿದ್ದೆ, ಆದರೆ ಬಹುತೇಕ ಕಳ್ಳಬೇಟೆ ಶಿಬಿರಗಳನ್ನು ದುರಸ್ತಿ ಪಡಿಸಲಾಗಿದೆ. ಆದರೆ ವರ್ಷದ ಹಿಂದಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ರೈತರು, ಸಾರ್ವಜನಿಕರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಆದರೂ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಳ್ಳು ಹೇಳಬೇಡಿ ಎಂದು ಪ್ರಶ್ನಿಸಿದ್ದಕ್ಕೆ ಧಮಕಿ ಹಾಕಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಅದಕ್ಕೆ ನೋ ಕಾಮೆಂಟ್ ಎಂದು ವ್ಯಂಗ್ಯ ಭರಿತವಾಗಿ ಸ್ಪಷ್ಟನೆ ನೀಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್ಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಕಳ್ಳಬೇಟೆ ಶಿಬಿರಗಳು ಉತ್ತಮವಾಗಿಯೇ ಇವೆ ಎಂದರು. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ವಾಹನಗಳ ಕೊರತೆ ನಡುವೆ ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಕಾಪಾಡಲು ಹಗಲು ರಾತ್ರಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಆದರೂ ಇಂಥ ಕೊಂಕು ಮಾತುಗಳಿಗೆ ಉತ್ತರ ನೀಡುತ್ತ ಇರಲು ಆಗುವುದಿಲ್ಲ ಎಂದರು.
ಫ್ರೆಂಡ್ಸ್ ಆಪ್ ಬಂಡೀಪುರ ಪರಿಸರ ಪ್ರವಾಸೋದ್ಯಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲೊಂದು ಇಲ್ಲೊಂದು ಪ್ರಾಣಿ ಸಂಘರ್ಷ ನಡೆಯುತ್ತಿವೆ ಆದರೂ ಮಾನವ ಪ್ರಾಣಿ ಸಂಘರ್ಷ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಕಾಡಂಚಿನ ಹಾಡಿ ಜನರಿಗೆ ಇಲಾಖೆ ಅನೇಕ ಸವಲತ್ತು ನೀಡುತ್ತಿದೆ, ಹಾಡಿಯ ಜನರಿಗೆ ಹಲವು ತರಬೇತಿ ನೀಡಲಾಗಿದೆ. ಪ್ಲಾಸ್ಟಿಕ್ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಇಷ್ಟಾದರೂ ಹಳೆಯದನ್ನು ಹಿಡಿದುಕೊಂಡು ಬಂಡೀಪುರ ಅರಣ್ಯ ಇಲಾಖೆ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್, ಬಂಡೀಪುರ ಆರ್ಎಫ್ಒ ಮಹದೇವ, ಗೋಪಾಲಸ್ವಾಮಿ ಬೆಟ್ಟದ ಆರ್ಎಫ್ಒ ಬಿ.ಎಂ.ಮಲ್ಲೇಶ್ ಇದ್ದರು.