ಭಾರತ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ದೇಶವಲ್ಲ. ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಜನರು ಪರಸ್ಪರ ಸೌಹಾರ್ದತೆ, ಸಹಬಾಳ್ವೆ ಮತ್ತು ಸಹೋದರತ್ವದಿಂದ ಬದುಕುವ ವಾತಾವರಣ ನಿರ್ಮಾಣವಾದಾಗ ವಿಶ್ವಶಾಂತಿಯ ತತ್ವಕ್ಕೆ ನಿಜವಾದ ಮೌಲ್ಯ ದೊರೆಯುತ್ತದೆ ಎಂದು ಅವರು ಹೇಳಿದರು.

ಬೇಲೂರು: ತಾಲೂಕಿನ ಅರೇಹಳ್ಳಿಯ ನೂರುಲ್ ಇಸ್ಲಾಂ ಮಸೀದಿ ಹಾಗೂ ಮದರಸಾ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನುಮದಿನ, ಸಂಭ್ರಮದ ಈದ್ ಮಿಲಾದ್ ಆಚರಣೆಯೊಂದಿಗೆ ಶಾಂತಿಯ ಸಂದೇಶ ಸಾರಲಾಯಿತು.

ನೂರುಲ್ ಇಸ್ಲಾಂ ಮಸೀದಿ ಬಳಿಯಿಂದ ಆರಂಭಗೊಂಡ ಜಾಥಾವು ಅರೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಶರೀಫ್ ಮಿಸ್ಬಾಹಿ, ಇಸ್ಲಾಂ ಎಂದಿಗೂ ಕ್ರೌರ್ಯ, ಭೀಕರತೆ ಹಾಗೂ ಹಿಂಸೆಯನ್ನು ಪ್ರಚೋಧಿಸುವುದಿಲ್ಲ. ಇಸ್ಲಾಂ ವಿಶ್ವಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ. ಪವಿತ್ರ ಕುರಾನ್‌ನಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸುವ ಸಂದೇಶವಿಲ್ಲ ಎಂದು ಹೇಳಿದರು.

ಅರಬ್ ರಾಷ್ಟ್ರಗಳಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಶಾಂತಿ ಹಾಗೂ ಮಾನವೀಯತೆಯ ಸಂದೇಶದ ಪರಿಣಾಮವಾಗಿ ಅವರನ್ನು ಇತಿಹಾಸದ ಮಹಾನ್ ನಾಯಕರಲ್ಲಿ ಒಬ್ಬರೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಭಾರತ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ದೇಶವಲ್ಲ. ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಜನರು ಪರಸ್ಪರ ಸೌಹಾರ್ದತೆ, ಸಹಬಾಳ್ವೆ ಮತ್ತು ಸಹೋದರತ್ವದಿಂದ ಬದುಕುವ ವಾತಾವರಣ ನಿರ್ಮಾಣವಾದಾಗ ವಿಶ್ವಶಾಂತಿಯ ತತ್ವಕ್ಕೆ ನಿಜವಾದ ಮೌಲ್ಯ ದೊರೆಯುತ್ತದೆ ಎಂದು ಅವರು ಹೇಳಿದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ಇಸ್ಲಾಂ ಬಾಂಧವರಿಗೆ ಹಿಂದೂ ಹಾಗೂ ಕ್ರೈಸ್ತ ಸಮುದಾಯದವರು ಪಾನೀಯ ವ್ಯವಸ್ಥೆ ಮಾಡುವ ಮೂಲಕ ಸೌಹಾರ್ದತೆ ಮೆರೆದರು. ವಿವಿಧ ಸಮುದಾಯಗಳ ಜನರು ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯ ಸಂದೇಶ ಸಾರಿದ ಈ ಕಾರ್ಯಕ್ರಮ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ನೂರುಲ್ ಇಸ್ಲಾಂ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.